ಶುಕ್ರವಾರ, ಜನವರಿ 5ರಂದು ಹುಬ್ಬಳ್ಳಿಯ ಕೆಎಸ್ಸಿಎ ರಾಜನಗರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2023-24ರ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ ಉತ್ತಮ ಆರಂಭ ಕಂಡಿದೆ ಮತ್ತು ಪಂಜಾಬ್ ವಿರುದ್ಧ ಮೊದಲ ದಿನ ಮೇಲುಗೈ ಸಾಧಿಸಿದೆ.
ಮಂಜು ಮುಸುಕಿದ ಮತ್ತು ತಂಗಾಳಿಯ ಮುಂಜಾನೆಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ತಂಡ 46.5 ಓವರ್ಗಳಲ್ಲಿ 152 ರನ್ಗಳಿಗೆ ಆಲೌಟ್ ಆಯಿತು.
ಪಂಜಾಬ್ ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಪ್ರಭ್ಸಿಮ್ರಾನ್ ಸಿಂಗ್ 5 ರನ್ ಗಳಿಸಿ ಔಟಾದರೆ, ಅಭಿಷೇಕ್ ಶರ್ಮಾ 26 ರನ್ ಗಳಿಸಿದರು. ನಮನ್ ಧಿರ್ 4 ರನ್, ಮಂದೀಪ್ ಸಿಂಗ್ 1 ರನ್, ನೇಹಾಲ್ ವಧೇರಾ 44 ರನ್, ಗಿತಾನ್ಶ್ ಖೇರಾ 27 ರನ್, ಪ್ರೇರಿತ್ ದತ್ತಾ 8 ರನ್, ಮಯಾಂಕ್ ಮಾರ್ಕಾಂಡೆ 26 ರನ್ ಮತ್ತು ಅರ್ಶ್ದೀಪ್ ಸಿಂಗ್ 7 ರನ್ ಗಳಿಸಿದರು.

ಇನ್ನು ಕರ್ನಾಟಕ ಪರ ಬೌಲಿಂಗ್ನಲ್ಲಿ ವಾಸುಕಿ ಕೌಶಿಕ್ 15 ಓವರ್ಗಳಲ್ಲಿ 41 ರನ್ ನೀಡಿ 7 ವಿಕೆಟ್ ಪಡೆದರು. ಉಳಿದಂತೆ ವಿಜಯ್ಕುಮಾರ್ ವೈಶಾಕ್ 2 ವಿಕೆಟ್ ಪಡೆದರೆ, ರೋಹಿತ್ ಕುಮಾರ್ ಒಂದು ವಿಕೆಟ್ ಪಡೆದರು.
ಅದರಲ್ಲೂ ಕೌಶಿಕ್ ಬೌಲ್ ಮಾಡಿದ 15 ಓವರ್ಗಳಲ್ಲಿ 6 ಓವರ್ ಮೇಡನ್ ಮಾಡಿದ್ದು ವಿಶೇಷ. ಅಲ್ಲದೆ ರಣಜಿ ಟ್ರೋಫಿಯಲ್ಲಿ ಏಳು ವಿಕೆಟ್ ಪಡೆಯುವ ಮೂಲಕ ಕೌಶಿಕ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದರು.
ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಮೊದಲ ದಿನದಾಟದ ಅಂತ್ಯಕ್ಕೆ 33 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 142 ರನ್ ಕಲೆಹಾಕಿದ್ದು, ಮೊದಲ ಇನ್ನಿಂಗ್ಸ್ನಲ್ಲಿ ಪಂಜಾಬ್ ತಂಡದ ವಿರುದ್ಧ ಮುನ್ನಡೆ ಪಡೆಯಲು ಇನ್ನೂ 10 ರನ್ಗಳ ಹಿನ್ನಡೆಯಲ್ಲಿದೆ.
ಕರ್ನಾಟಕ ಪರ ಇನ್ನಿಂಗ್ಸ್ ಆರಂಭಿಸಿದ ನಾಯಕ ಮಯಾಂಕ್ ಅಗರ್ವಾಲ್ ಸೊನ್ನೆಗೆ ಔಟಾಗಿ ನಿರಾಸೆ ಮೂಡಿಸಿದರು. ಇನ್ನು ರವಿಕುಮಾರ್ ಸಮರ್ಥ್ 38 ರನ್ ಗಳಿಸಿ ಔಟಾದರು. ನಂತರ ಬಂದ ನಿಕಿನ್ ಜೋಸ್ ಕೇವಲ 8 ರನ್ಗಳಿಗೆ ತಮ್ಮ ಆಟ ಮುಗಿಸಿದರು.
ಇನ್ನು ಸ್ಟಾರ್ ಬ್ಯಾಟರ್ ದೇವದತ್ ಪಡಿಕ್ಕಲ್ ಅವರು 80 ಎಸೆತಗಳಲ್ಲಿ 14 ಬೌಂಡರಿ ಸಮೇತ ಅಜೇಯ 80 ರನ್ಗಳ ಅರ್ಧಶತಕ ಬಾರಿಸಿ ಕರ್ನಾಟಕ ತಂಡವನ್ನು ದೃಢವಾಗಿ ಮುನ್ನಡೆಸಿದರು. ಇನ್ನು ಮನೀಶ್ ಪಾಂಡೆ ಅಜೇಯ 13 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಪಂಜಾಬ್ ತಂಡದ ಪರ ಬೌಲಿಂಗ್ನಲ್ಲಿ ಅರ್ಶ್ದೀಪ್ ಸಿಂಗ್, ಪ್ರೇರಿತ್ ದತ್ತಾ ಮತ್ತು ನಮನ್ ಧೀರ್ ತಲಾ ಒಂದೊಂದು ವಿಕೆಟ್ ಪಡೆದರು.