ಕ್ರಿಕೆಟ್ ಆಟಗಾರರಿಗೆ ಅಸಂಖ್ಯಾತ ಅಭಿಮಾನಿಗಳು ಇರುತ್ತಾರೆ. ಹಾಗೆ ಈ 17 ವರ್ಷದ ಯುವ ಆಟಗಾರನಿಗೆ ರೋಹಿತ್ ಶರ್ಮಾ ಅಂದ್ರೆ ಅಚ್ಚು ಮೆಚ್ಚು. ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ತಂಡದ ಪರ ಆಡುವ ಅವಕಾಶವನ್ನು ಪಡೆದ ಈ ಯುವ ಆಟಗಾರ, ಎಲ್ಲರೂ ತನ್ನತ್ತ ನೋಡುವಂತಹ ಪ್ರದರ್ಶನ ನೀಡಿದ್ದಾರೆ.
ಎಲ್ಲ ಬಾಲಕರ ಚಿಕ್ಕ ವಯಸ್ಸಿನಲ್ಲಿ ಗಾಡ ನಿದ್ದೆಯಲ್ಲಿದ್ದಾಗ, ಈ ಪೋರ 4.15ಕ್ಕೆ ಲೋಕಲ್ ಟ್ರೇನ್ ಹಿಡಿದು ಮುಂಬೈಗೆ ಕ್ರಿಕೆಟ್ ಅಭ್ಯಾಸ ಮಾಡಲು ಬರುತ್ತಿದ್ದರು. ಇವರಿಗೆ 10 ವರ್ಷ ಇದ್ದಾಗ ಕ್ರಿಕೆಟ್ ಕ್ರೀಡೆಯ ಮೇಲೆ ಪ್ರೀತಿ ಬೆಳೆಸಿಕೊಂಡರು. ಇವರು ಹಂತ ಹಂತವಾಗಿ ಸಾಧನೆಯನ್ನು ಮಾಡುತ್ತಾ ಇಂದು ಮುಂಬೈ ರಣಜಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರ ಬೆಳವಣಿಗೆಯಲ್ಲಿ ಕುಟುಂಬದ ಪಾತ್ರ ದೊಡ್ಡದಿದೆ. ಸಿಕ್ಕ ಅವಕಾಶವನ್ನು ಬಳಸಿಕೊಂಡ 17 ವರ್ಷದ ಆಯುಷ್ ಮಾತ್ರೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಶತಕದ ಸಾಧನೆ ಮಾಡಿದ್ದಾರೆ.

ಮುಂಬೈ ಹಾಗೂ ಮಹಾರಾಷ್ಟ್ರ ನಡುವಣ ಗ್ರುಪ್ 'ಎ' ಪಂದ್ಯ ಮುಂಬೈನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮಹಾರಾಷ್ಟ್ರ ಮೊದಲು ಬ್ಯಾಟಿಂಗ್ ಮಾಡಿ ಮೊದಲ ಇನಿಂಗ್ಸ್ನಲ್ಲಿ 126 ರನ್ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿರುವ ಮುಂಬೈ ದಿನದಾಟದ ಮುಕ್ತಾಯಕ್ಕೆ 3 ವಿಕೆಟ್ ನಷ್ಟಕ್ಕೆ 220 ರನ್ ಸೇರಿಸಿದೆ. ಮುಂಬೈ ಸದ್ಯ 94 ರನ್ ಗಳ ಮುನ್ನಡೆ ಸಾಧಿಸಿದೆ.
ಮುಂಬೈ ಬ್ಯಾಟಿಂಗ್ ವೇಳೆ ಎಲ್ಲರ ಚಿತ್ತ ಕದ್ದ ಪ್ಲೇಯರ್ ಆಯುಷ್ ಮಾತ್ರೆ. ತಮ್ಮ ಕ್ಲಾಸಿಕಲ್ ಬ್ಯಾಟಿಂಗ್ ಶೈಲಿಯಿಂದ ಅಭಿಮಾನಿಗಳನ್ನು ರಂಜಿಸಿದ ಆಯುಷ್, ಮಹಾರಾಷ್ಟ್ರದ ಅನುಭವಿ ಬೌಲರ್ಗಳನ್ನು ಸಹ ಕಾಡಿದರು. ಇವರು 163 ರನ್ಗಳ ಸಹಾಯದಿಂದ 17 ಬೌಂಡರಿ, 3 ಸಿಕ್ಸರ್ ಸೇರಿದಂತೆ ಅಜೇಯ 127 ರನ್ ಬಾರಿಸಿದ್ದಾರೆ. ಇವರ ಈ ಬ್ಯಾಟಿಂಗ್ ಧಾಟಿ ಕಂಡು ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಆಯುಷ್ ಬಾರಿಸಿದ ಮೊದಲ ಶತಕವಾಗಿದೆ. ಶನಿವಾರ ದೊಡ್ಡ ಇನಿಂಗ್ಸ್ ಕಟ್ಟುವ ಕನಸು ಆಯುಷ್ ಅವರದ್ದಾಗಿದೆ.
ಇದಕ್ಕೂ ಮೊದಲು ಮುಂಬೈ ತಂಡದ ಶಾರ್ದೂಲ್ ಠಾಕೂರ್, ಮೋಹಿತ್ ಅವಸ್ತಿ, ಶಮ್ಸ್ ಮುಲಾನಿ ಇವರ ಆರ್ಭಟ ಜೋರಾಗಿತ್ತು. ಸರಿಯಾದ ಲೈನ್ ಹಾಗೂ ಲೆಂತ್ ಮೆಂಟೇನ್ ಮಾಡಿ ಬೌಲಿಂಗ್ ನಡೆಸಿದ ಮುಂಬೈ ಬೌಲರ್ಸ್ ಮಿಂಚಿದರು. ಇವರ ಶಿಸ್ತು ಬದ್ಧ ದಾಳಿಯನ್ನು ಎದುರಿಸುವಲ್ಲಿ ಮಹಾರಾಷ್ಟ್ರ ಬ್ಯಾಟರ್ ವಿಫಲರಾದರು. ಅಜೀಮ್ ಕಾಜಿ (36) ಹಾಗೂ ನಿಖಿಲ್ ನಾಯಕ್ (38) ಅವರನ್ನು ಹೊರತು ಪಡಿಸಿದರೆ, ಬೇರೆ ಯಾವ ಬ್ಯಾಟರ್ಗಳು ಮುಂಬೈ ಬೌಲರ್ಗಳಿಗೆ ಕಾಟ ನೀಡಲಿಲ್ಲ. ಪರಿಣಾಮ ಮಹಾರಾಷ್ಟ್ರ 126 ರನ್ಗಳಿಗೆ ಆಲೌಟ್ ಆಯಿತು. ಮುಂಬೈ ತಂಡದ ಪರ ಮೋಹಿತ್ ಅವಸ್ತಿ ಹಾಗೂ ಶಮ್ಸ್ ಮುಲಾನಿ ತಲಾ ಮೂರು ವಿಕೆಟ್ ಪಡೆದರು.