
ರಣಜಿ ಟ್ರೋಫಿ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶದ ವಿರುದ್ಧ ಬೆಂಗಾಲ್ ತಂಡ ಮೊದಲನೇ ದಿನ ಮೇಲುಗೈ ಸಾಧಿಸಿದೆ. ಮೊದಲ ದಿನ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಬೆಂಗಾಲ್ ದಿನದಾಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 307 ರನ್ ಕಲೆಹಾಕಿದೆ.
ಇಂದೋರ್ ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಬೆಂಗಾಲ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆರಂಭಿಕ ಬ್ಯಾಟರ್ ಅಭಿಮನ್ಯು ಈಶ್ವರನ್ ಮತ್ತು ಕರಣ್ ಲಾಲ್ ಮೊದಲನೇ ವಿಕೆಟ್ಗೆ 51 ರನ್ ಗಳಿಸಿ ಸಾಧಾರಣ ಆರಂಭ ಒದಗಿಸಿದರು. ಆದರೆ ಇಬ್ಬರೂ ಬ್ಯಾಟರ್ ಒಂದು ಓವರ್ ಅಂತರದಲ್ಲಿ ಔಟ್ ಆಗುವ ಮೂಲಕ ಬೆಂಗಾಲ್ ಆಘಾತ ಅನುಭವಿಸಿತು.
ಆರಂಭಿಕರು ಇಬ್ಬರು ಔಟಾದ ನಂತರ ಜೊತೆಯಾದ ಸುದೀಪ್ ಕುಮಾರ್ ಘರಾಮಿ ಮತ್ತು ಅನುಸ್ತುಪ್ ಮಜುಂದಾರ್ ಅದ್ಭುತ ಜೊತೆಯಾಟ ಆಡಿದರು. ಇಡೀ ದಿನ ಮಧ್ಯಪ್ರದೇಶ ಬೌಲರ್ ಗಳನ್ನು ಕಾಡಿದ ಇಬ್ಬರೂ ಶತಕ ಸಿಡಿಸಿ ಮಿಂಚಿದರು.
3ನೇ ವಿಕೆಟ್ಗೆ ಈ ಜೋಡಿ 241 ರನ್ ಕಲೆಹಾಕುವ ಮೂಲಕ ಬೆಂಗಾಲ್ ತಂಡಕ್ಕೆ ಆಸರೆಯಾದರು. ಸುದೀಪ್ ಕುಮಾರ್ ಘರಾಮಿ 213 ಎಸೆತಗಳಲ್ಲಿ 12 ಬೌಂಡರಿ 2 ಸಿಕ್ಸರ್ ಸಹಿತ 112 ರನ್ ಗಳಿಸಿ ಮಿಂಚಿದರು.

ಅಂತಿಮ ಓವರ್ ಗಳಲ್ಲಿ ವಿಕೆಟ್ ಪತನ
ಅನುಸ್ತುಪ್ ಮಜುಂದಾರ್ 206 ಎಸೆತಗಳಲ್ಲಿ 13 ಬೌಂಡರಿ ಒಂದು ಸಿಕ್ಸರ್ ನೆರವಿನಿಂದ 120 ರನ್ ಗಳಿಸಿದರು. ಉತ್ತಮವಾಗಿ ಆಡುತ್ತಿದ್ದ ಇಬ್ಬರೂ ಮೊದಲನೇ ದಿನದಾಟದ ಅಂತ್ಯಕ್ಕೆ ಕೆಲವೇ ಓವರ್ ಬಾಕಿ ಇರುವಾಗ ಔಟಾದರು.
ಬೆಂಗಾಲ್ ನಾಯಕ ಮನೋಜ್ ತಿವಾರಿ ಅಜೇಯ 5 ಮತ್ತು ಶಹಬಾಜ್ ಅಹ್ಮದ್ ಅಜೇಯ 6 ರನ್ ಗಳಿಸುವ ಮೂಲಕ ಎರಡನೇ ದಿನಕ್ಕೆ ವಿಕೆಟ್ ಕಾಪಾಡಿಕೊಂಡಿದ್ದಾರೆ.

ಬೃಹತ್ ಮೊತ್ತದತ್ತ ಬೆಂಗಾಲ್
ಮೊದಲನೇ ದಿನವೇ 300 ರನ್ಗಳ ಗಡಿಯನ್ನು ದಾಟಿರುವ ಬೆಂಗಾಲ್ ಎರಡನೇ ದಿನ ಬೃಹತ್ ಮೊತ್ತ ಕಲೆಹಾಕುವತ್ತ ಮುನ್ನಡೆದಿದೆ. ಮನೋಜ್ ತಿವಾರಿ ಮತ್ತು ಶಹಬಾಜ್ ಅಹ್ಮದ್ ಮತ್ತಷ್ಟು ರನ್ ಗಳಿಸಿದರೆ, ಬೆಂಗಾಲ್ ಸವಾಲಿನ ಮೊತ್ತ ಕಲೆಹಾಕುವ ಸಾಧ್ಯತೆ ಇದೆ.
ಮಧ್ಯಪ್ರದೇಶದ ಪರವಾಗಿ ಅನುಭವ್ ಅಗರ್ವಾಲ್ 2 ವಿಕೆಟ್ ಪಡೆದರೆ, ಆವೇಶ್ ಖಾನ್ ಮತ್ತು ಗೌರವ್ ಯಾದವ್ ತಲಾ ಒಂದು ವಿಕೆಟ್ ಪಡೆದುಕೊಂಡರು.