ನಾಗಪುರದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿದರ್ಭ ಹಾಗೂ ಕೇಳರ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿದರ್ಭ ಮೊದಲ ಇನಿಂಗ್ಸ್ನಲ್ಲಿ 379 ರನ್ಗಳಿಗೆ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕೇರಳ ಎರಡನೇ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 131 ರನ್ ಸಿಡಿಸಿದೆ. ಕೇರಳ ಇನ್ನು 248 ರನ್ ಹಿನ್ನಡೆ ಅನುಭವಿಸುತ್ತಿದೆ.
ಎರಡನೇ ದಿನದಾಟವನ್ನು ವಿದರ್ಭ 4 ವಿಕೆಟ್ಗಳಿಂದ 254 ರನ್ಗಳಿಂದ ಆಟ ಮುಂದುವರಿಸಿ 379 ರನ್ಗಳಿಗೆ ಆಲೌಟ್ ಆಯಿತು. ದಾನೇಶ್ ಮಲೇವಾರ್ ವಿದರ್ಭ ಪರ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 285 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್ ಸಹಾಯದಿಂದ 153 ರನ್ ಸಿಡಿಸಿ ಔಟ್ ಆದರು. ಉಳಿದಂತೆ ಯಶ್ ಠಾಕೂರ್ 25, ಅಕ್ಷಯ್ ವಾಡ್ಕರ್ 23, ನಚಿಕೇತ್ ಭೂತೆ 32 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಕೇರಳ ಪರ ಎಂಡಿ ನಿದೇಶ್, ಈಡನ್ ಆಪಲ್ ಟಾಮ್ ತಲಾ ಮೂರು ವಿಕೆಟ್ ಕಬಳಿಸಿದರು. ನೆಡುಮಂಕುಳಿ ತುಳಸಿ 2 ವಿಕೆಟ್ ಕಬಳಿಸಿದರು.
ಮೊದಲ ಇನಿಂಗ್ಸ್ನಲ್ಲಿ ಆರಂಭಿಸಿದ ಕೇರಳದ ಆರಂಭಿಕರು ಉತ್ತಮ ಜೊತೆಯಾಟವನ್ನು ನೀಡಲಿಲ್ಲ. ಅಕ್ಷಯ್ ಚಂದ್ರನ್ (14), ರೋಹನ್ ಕುನ್ನುಮ್ಮಲ್ (0) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಮೂರನೇ ವಿಕೆಟ್ಗೆ ಆದಿತ್ಯ ಸರ್ವಟೆ ಹಾಗೂ ಅಹಮ್ಮದ್ ಇಮ್ರಾನ್ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟ ಕಾಣಿಕೆ ನೀಡಿತು. ಈ ಜೊಡಿ ಮೂರನೇ ವಿಕೆಟ್ಗೆ 178 ಎಸೆತಗಳಲ್ಲಿ 93 ರನ್ ಸೇರಿಸಿ ಮಿಂಚಿತು. ಇನ್ನು ಅಹಮ್ಮದ್ ಇಮ್ರಾನ್ ಇಲ್ಲದ ಶಾಟ್ ಪ್ರಯೋಗಿಸಿ ಔಟ್ ಆದರು.

ಭರವಸೆಯ ಆಟಗಾರ ಆದಿತ್ಯ ಸರ್ವಟೆ ಅಜೇಯ 66 ರನ್ ಬಾರಿಸಿ ತಂಡಕ್ಕೆ ಆಧಾರವಾಗಿದ್ದಾರೆ. ಇವರ ಅಮೋಘ ಇನಿಂಗ್ಸ್ನಲ್ಲಿ 10 ಬೌಂಡರಿಗಳು ಸೇರಿವೆ. ಇವರಿಗೆ ಮೂರನೇ ದಿನದಾಟದಲ್ಲಿ ಸಚಿನ್ ಬೇಬಿ (ಅಜೇಯ 7) ಸಾಥ್ ನೀಡಲಿದ್ದಾರೆ. ಈ ಇಬ್ಬರೂ ಆಟಗಾರರು ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ, ಇನಿಂಗ್ಸ್ ಮುನ್ನಡೆಯ ಕನಸುನ್ನು ಸಾಕಾರ ಗೊಳಿಸಬೇಕಿದೆ.
ಇನ್ನು ವಿದರ್ಭ ತಂಡದ ಪರ ದರ್ಶನ್ ನಾಳಕಂದೆ 2, ಯಶ್ ಠಾಕೂರ್ 1 ವಿಕೆಟ್ ಕಬಳಿಸಿದರು.