ಅನುಭವಿ ಸ್ಪಿನ್ ಬೌಲರ್ ಧರ್ಮೆಂದ್ರ ಸಿಂಗ್ ಜಡೇಜಾ ಅವರ ಮಾರಕ ದಾಳಿಯ ನೆರವಿನಿಂದ ರಣಜಿ ಟ್ರೋಫಿಯ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ, ಸೌರಾಷ್ಟ್ರ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ 372 ರನ್ಗಳಿಗೆ ಆಲೌಟ್ ಆಗಿದೆ.
ಕರ್ನಾಟಕ ಗುರುವಾರ ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ಗೆ 295 ರನ್ಗಳಿಂದ ಆಟವನ್ನು ಮುಂದುವರೆಸಿತು. ಈ ವೇಳೆ ರವಿಚಂದ್ರನ್ ಸ್ಮರಣ್ ಹಾಗೂ ಶ್ರೇಯಸ್ ಗೋಪಾಲ್ ಎರಡನೇ ದಿನಕ್ಕೆ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಬಂದರು. ಸ್ಮರಣ್ ಸ್ಥಿರ ಪ್ರದರ್ಶನ ನೀಡುತ್ತಿದ್ದರು. ಆದರೆ ಇವರ ಆಟಕ್ಕೆ ಜಡೇಜಾ ಬ್ರೇಕ್ ಹಾಕಿದರು. ಸ್ಮರಣ್ 143 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ನೆರವಿನಿಂದ 77 ರನ್ ಬಾರಿಸಿದರು.

ಕರ್ನಾಟಕದ ಸ್ಟಾರ್ ಭರವಸೆಯ ಆಟಗಾರ ಶ್ರೇಯಸ್ ಗೋಪಾಲ್ 56 ರನ್ ಬಾರಿಸಿದರು. ಇವರ ಅಮೋಘ ಇನಿಂಗ್ಸ್ನಲ್ಲಿ 4 ಬೌಂಡರಿ, 3 ಸಿಕ್ಸರ್ ಸೇರಿವೆ. ಇನ್ನು ಶಿಖರ್ ಶೆಟ್ಟಿ 57 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ನೆರವಿನಿಂದ 41 ರನ್ ಸಿಡಿಸಿದರು. ಅಂತಿಮವಾಗಿ ಕರ್ನಾಟಕ 117.3 ಓವರ್ಗಳಲ್ಲಿ 372 ರನ್ಗಳಿಗೆ ಆಲೌಟ್ ಆಯಿತು.
ಸೌರಾಷ್ಟ್ರ ತಂಡದ ಪರ ಸ್ಪಿನ್ ಬೌಲರ್ ಧರ್ಮೆಂದ್ರ ಸಿಂಗ್ ಜಡೇಜಾ ಅಬ್ಬರಿಸಿದರು. ಇವರು 42 ಓವರ್ ಬೌಲಿಂಗ್ ಮಾಡಿ 124 ರನ್ ನೀಡಿ 7 ವಿಕೆಟ್ ಕಬಳಿಸಿದರು.
ಮೊದಲ ಇನಿಂಗ್ಸ್ ಆರಂಭಿಸಿದ ಸೌರಾಷ್ಟ್ರ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಹರ್ವಿಕ್ ದೇಸಾಯಿ ಹಾಗೂ ಚಿರಾಗ್ ಜಾನಿ ಮೊದಲ ವಿಕೆಟ್ಗೆ 39.4 ಓವರ್ಗಳಲ್ಲಿ 140 ರನ್ ಸೇರಿಸಿತು. ಹರ್ವಿಕ್ ದೇಸಾಯಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 41 ರನ್ ಬಾರಿಸಿ ಔಟ್ ಆದರು. ಆರಂಭಿಕ ಆಟಗಾರ ಚಿರಾಗ್ 148 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಸಹಾಯದಿಂದ 90 ರನ್ ಬಾರಿಸಿದರು. ನಂತರ ಬಂದ ಜಯ್ ಗೋಹಿಲ್ (3), ಅನುಶ್ ಗೋಸಾಯಿ (19) ಬಿಗ್ ಇನಿಂಗ್ಸ್ ಕಟ್ಟುವಲ್ಲಿ ಎಡವಿದರು. ಅರ್ಪಿತ್ ವಸವದ್ ಅಜೇಯ 12, ಪ್ರೇರಕ್ ಮುಕುಂದ್ ಅಜೇಯ 20 ರನ್ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕರ್ನಾಟಕದ ಪರ ಶ್ರೇಯಸ್ ಅಯ್ಯರ್ 3, ಮೋಹ್ಸಿನ್ ಖಾನ್ 1 ವಿಕೆಟ್ ಉರುಳಿಸಿದರು.
ಶುಭಂ ಶರ್ಮಾ ಬದಲಿಗೆ ಮಧ್ಯ ಪ್ರದೇಶವನ್ನು ತಂಡವನ್ನು ಮುನ್ನಡೆಸುತ್ತಿರುವ ರಜತ್ ಪಟಿದಾರ್ ಅವರನ್ನು ನಾಯಕನನ್ನಾಗಿ ಘೋಷಿಸಿದ ಬೆನ್ನಲ್ಲೆ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಇಂದೋರ್ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮಧ್ಯ ಪ್ರದೇಶ 232 ರನ್ಗಳಿಗೆ ಪಂಜಾಬ್ ತಂಡವನ್ನು ಆಲೌಟ್ ಮಾಡಿತು. ಎರಡನೇ ದಿನ 6 ರನ್ಗಳಿಂದ ವಿಕೆಟ್ ನಷ್ಟವಿಲ್ಲದೆ ಬ್ಯಾಟ್ ಮಾಡಿದ ಮಧ್ಯ ಪ್ರದೇಶ 6 ವಿಕೆಟ್ಗೆ 305 ರನ್ ಕಲೆ ಹಾಕಿದೆ. ನಾಯಕ ರಜತ್ ಪಟಿದಾರ್ ಅಜೇಯ 107 ರನ್ ಸಿಡಿಸಿದರು.