ಬೆಂಗಳೂರು: ಆರಂಭಿಕ ಆಟಗಾರ ಹಿಮಾಂಶು ಮಂತ್ರಿ (ಅಜೇಯ 89) ಇವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮಧ್ಯಪ್ರದೇಶ ರಣಜಿ ಟ್ರೋಫಿ ಎಲೈಟ್ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ವಿರುದ್ಧ 336 ರನ್ಗಳ ಮುನ್ನಡೆ ಸಾಧಿಸಿದೆ.
ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 8 ವಿಕೆಟ್ಗೆ 168 ರನ್ಗಳಿಂದ ಆಟವನ್ನು ಮುಂದುವರೆಸಿತು. ಆರಂಭಿಕ ಕೆವಿ ಅನೀಶ್ 9 ಬೌಂಡರಿ, 1 ಸಿಕ್ಸರ್ ಸಹಾಯದಿಂದ 92 ರನ್ ಬಾರಿಸಿ ಔಟ್ ಆದರು. ಉಳಿದ ಬ್ಯಾಟರ್ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 191 ರನ್ಗಳಿಗೆ ಸರ್ವಪತನ ಕಂಡಿತು.

ಇನಿಂಗ್ಸ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಮಧ್ಯಪ್ರದೇಶ ತಂಡದ ಆರಂಭ ಸಾಧಾರಣವಾಗಿತ್ತು. ಯಶ್ ದುಬೆ (17), ಹಿಮಾಂಶು ಮಂತ್ರಿ ಅವರೊಂದಿಗೆ ಮೊದಲ ವಿಕೆಟ್ಗೆ 38 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಎರಡನೇ ವಿಕೆಟ್ಗೆ ಹಿಮಾಂಶು ಅವರನ್ನು ಸೇರಿಕೊಂಡ ಶುಭಂ ಶರ್ಮಾ ಉತ್ತಮ ಜೊತೆಯಾಟವನ್ನು ನೀಡಿ ತಂಡಕ್ಕೆ ಆಸರೆಯಾದರು. ಈ ಜೋಡಿ 2ನೇ ವಿಕೆಟ್ಗೆ 58 ರನ್ಗಳ ಜೊತೆಯಾಟದ ಕಾಣಿಕಡ ನೀಡಿತು. ಶುಭಂ 3 ಬೌಂಡರಿ ಸಹಾಯದಿಂದ 32 ರನ್ ಸಿಡಿಸಿದರು.
ನಾಯಕ ರಜತ್ ಪಾಟಿದಾರ್ (0), ವೆಂಕಟೇಶ್ ಅಯ್ಯರ್ (1) ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಅಕ್ಷತಾ ರಘುವಂಶಿ (13), ಸರಾಂಶ್ ಜೈನ್ (15), ಸಾಗರ್ ಸೋಳಂಕಿ (13) ರನ್ ಕಲೆ ಹಾಕುವಲ್ಲಿ ವಿಫಲರಾದರು. ಆಯನ್ ಪಾಂಡೆ (ಅಜೇಯ 13) ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅಂತಿಮವಾಗಿ ಮಧ್ಯಪ್ರದೇಶ ಎರಡನೇ ಇನಿಂಗ್ಸ್ನಲ್ಲಿ ಮೂರನೇ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 204 ರನ್ ಕಲೆ ಹಾಕಿದೆ.
ಕರ್ನಟಕ ಮೂರನೇ ದಿನದಾಟದಲ್ಲಿ ಮಧ್ಯಪ್ರದೇಶ ತಂಡವನ್ನು ಬೇಗನೆ ಆಲೌಟ್ ಮಾಡಿ, ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಪೂರ್ಣ ಅಂಕವನ್ನು ಕಲೆ ಹಾಕುವ ಕನಸು ನನಸಾಗುತ್ತದೆ.
ಕರ್ನಾಟಕದ ಪರ ವಿದ್ವತ್ ಕಾವೇರಪ್ಪಾ 3, ಶಿಖರ್ ಶೆಟ್ಟಿ 2 ವಿಕೆಟ್ ಉರುಳಿಸಿದರು.