
ಕೇರಳದ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. ತಿರುವನಂತಪುರಂನ ಸೈಂಟ್ ಕ್ಸೇವಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನ ಮಯಾಂಕ್ ದ್ವಿಶತಕ ಗಳಿಸಿದರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೇರಳ ತಂಡ ಸಚಿನ್ ಬೇಬಿ ಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್ನಲ್ಲಿ 342 ರನ್ ಗಳಿಸೊ ಆಲೌಟ್ ಆಯಿತು. ಸಚಿನ್ ಬೇಬಿ (141), ಜಲಜ್ ಸಕ್ಸೇನಾ (57) ರನ್ ಗಳಿಸಿದರು. ವಾಸುಕಿ ಕೌಶಿಕ್ 6 ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್ 2, ಕೃಷ್ಣಪ್ಪ ಗೌತಮ್ ಮತ್ತು ವಿಜಯ್ ಕುಮಾರ್ ವೈಶಾಕ್ ತಲಾ ಒಂದು ವಿಕೆಟ್ ಪಡೆದರು.
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ರವಿಕುಮಾರ್ ಸಮರ್ಥ್ ಅವರ ವಿಕೆಟ್ ಅನ್ನು ಬೇಗನೆ ಕಳೆದುಕೊಂಡರೂ ನಂತರ ಮಯಾಂಕ್ ಅಗರ್ವಾಲ್, ಪಡಿಕ್ಕಲ್ ಜೊತೆಯಾಟದಿಂದ ಚೇತರಿಸಿಕೊಂಡಿತು. 29 ರನ್ ಗಳಿಸಿದ್ದ ದೇವದತ್ ಪಡಿಕ್ಕಲ್ ಔಟಾದ ನಂತರ ಕಣಕ್ಕಿಳಿದ ನಿಖಿನ್ ಜೋಸ್ ತಾಳ್ಮೆಯ ಬ್ಯಾಟಿಂಗ್ ಮಾಡಿದರು. ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ಕಾಯ್ದುಕೊಂಡಿದ್ದ ಮಯಾಂಕ್ ಮತ್ತು ನಿಕಿನ್ ಜೋಸ್ ಮೂರನೇ ದಿನ ಉತ್ತಮ ಆಟ ಮುಂದುವರೆಸಿದರು.

ಮಯಾಂಕ್ ಅಗರ್ವಾಲ್ ಭರ್ಜರಿ ದ್ವಿಶತಕ
ಇವರಿಬ್ಬರೂ 151 ರನ್ಗಳ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಆಸರೆಯಾದರು. ನಿಕಿನ್ ಜೋಸ್ 54 ರನ್ ಗಳಿಸಿ ಔಟಾದರೆ, ನಂತರ ಬಂದ ಮನಿಶ್ ಪಾಂಡೆ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು.
ನಂತರ ಬಂದ ಶ್ರೇಯಸ್ ಗೋಪಾಲ್ ಮಯಾಂಕ್ ಅಗರ್ವಾಲ್ಗೆ ಸಾಥ್ ನೀಡಿದರು. ಈ ಜೋಡಿ 93 ರನ್ಗಳ ಜೊತೆಯಾಟ ಆಡಿದರು. ಮಯಾಂಕ್ ಅಗರ್ವಾಲ್ ಅಮೋಘ ದ್ವಿಶತಕ ಸಿಡಿಸಿ ಮಿಂಚಿದರು.
360 ಎಸೆತಗಳಲ್ಲಿ 17 ಬೌಂಡರಿ 5 ಭರ್ಜರಿ ಸಿಕ್ಸರ್ ನೆರವಿನಿಂದ 208 ರನ್ ಗಳಿಸಿದರು. ಅತ್ಯುತ್ತಮ ಫಾರ್ಮ್ನಲ್ಲಿರುವ ಮಯಾಂಕ್ ಅಗರ್ವಾಲ್ ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಟೀ ವಿರಾಮದ ವೇಳೆಗೆ 5 ವಿಕೆಟ್ ಕಳೆದುಕೊಂಡು 340 ರನ್ ಗಳಿಸಿರುವ ಕರ್ನಾಟಕ ಕೇವಲ 2 ರನ್ಗಳ ಹಿನ್ನಡೆಯಲ್ಲಿದೆ. ಶ್ರೇಯಸ್ ಗೋಪಾಲ್ ಅಜೇಯ 31 ಮತ್ತು ಬಿ ಆರ್ ಶರತ್ 3 ರನ್ ಗಳಿಸಿದ್ದು ಕ್ರೀಸ್ನಲ್ಲಿದ್ದಾರೆ.