ಬೆಂಗಳೂರು: ನಗರದ ಹೊರವಲಯದಲ್ಲಿ ನಡೆಯುತ್ತಿರುವ ರಣಜಿ ಬಿ ಗುಂಪಿನ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ, ಮಧ್ಯಪ್ರದೇಶ ವಿರುದ್ಧ ಇನಿಂಗ್ಸ್ ಹಿನ್ನಡೆಯ ಭೀತಿಯಲ್ಲಿದೆ. ಎರಡನೇ ದಿನದಾಟದ ಮುಕ್ತಾಯಕ್ಕೆ ಕರ್ನಾಟಕ 2 ವಿಕೆಟ್ ಉಳಿಸಿಕೊಂಡಿದ್ದು 155 ರನ್ ಹಿನ್ನಡೆ ಅನುಭವಿಸುತ್ತಿದೆ.
ಶುಕ್ರವಾರ ಎರಡನೇ ದಿನದಾಟವನ್ನು ಮಧ್ಯ ಪ್ರದೇಶ 5 ವಿಕೆಟ್ಗೆ 244 ರನ್ಗಳೊಂದಿಗೆ ಮೊದಲ ಇನಿಂಗ್ಸ್ ಆರಂಭಿಸಿತು. ಸರಾಂಶ್ ಜೈನ್ 32, ಅಕ್ಷತ್ ರಘುವಂಶಿ 22, ಸಾಗರ್ ಸೋಲಂಕಿ 20 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಮಧ್ಯ ಪ್ರದೇಶ ತಂಡ 323 ರನ್ಗಳಿಗೆ ಆಲೌಟ್ ಆಯಿತು. ಕರ್ನಾಟಕದ ಪರ ವಿದ್ಯಾಧರ್ ಪಾಟೀಲ್ 3, ವಿದ್ವತ್ ಕಾವೇರಪ್ಪ, ವಿಜಯ್ಕುಮಾರ್ ವೈಶಾಖ್, ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಕಬಳಿಸಿದರು.

ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕದ ತಂಡದ ಆರಂಭ ಕಳಪೆಯಾಗಿತ್ತು. ಅನುಭವಿ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ನಾಯಕ ಮಯಾಂಕ್ ಅಗರ್ವಾಲ್ (0), ಭರವಸೆಯ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ (0) ಖಾತೆ ತೆರೆಯುವ ಮುನ್ನವೇ ಪೆವೆಲಿಯನ್ ಸೇರಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಕರುಣ್ ನಾಯರ್ 12 ರನ್ ಬಾರಿಸಿ ಇಲ್ಲದ ರನ್ ಕದಿಯಲು ಹೋಗಿ ಔಟ್ ಆದರು.
ಮಧ್ಯಮ ಕ್ರಮಾಂಕದಲ್ಲಿ ಕೃಷ್ಣಾ ಶ್ರೀಜೇತ್ ಹಾಗೂ ಅಭಿನವ್ ಮನೋಹರ್ ಅವರು ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ಹಿನ್ನಡೆ ಅನುಭವಿಸಿದರು. 60 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆರಂಭಿಕ ಆಟಗಾರ ಕೆವಿ ಅನೀಶ್, ಶ್ರೇಯಸ್ ಗೋಪಾಲ್ ಜೋಡಿ ಆಧಾರವಾದರು. ಈ ಜೋಡಿ 6ನೇ ವಿಕೆಟ್ಗೆ 82 ರನ್ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ಹಂತದಲ್ಲಿ ಆಲ್ರೌಂಡರ್ ಶ್ರೇಯಸ್ ಗೋಪಾಲ್ 76 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 41 ರನ್ ಬಾರಿಸಿ ಔಟ್ ಆದರು.
ಆರಂಭಿಕ ಆಟಗಾರ ಅನೀಶ್ ಸೊಗಸಾದ ಬ್ಯಾಟಿಂಗ್ ನಡೆಸಿದರು. ಇವರು ತಾಳ್ಮೆಯಿಂದ ಇನಿಂಗ್ಸ್ ಕಟ್ಟುತ್ತಾ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅನೀಶ್ 153 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ ಅಜೇಯ 80 ರನ್ ಸಿಡಿಸಿದ್ದಾರೆ. ಇವರಿಗೆ ಶನಿವಾರ ವಿಜಯ್ ಕುಮಾರ್ ವೈಶಾಖ್ ಸಾಥ್ ನೀಡಲಿದ್ದಾರೆ. ದಿನದಾಟದಂತ್ಯಕ್ಕೆ ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 8 ವಿಕೆಟ್ಗೆ 168 ರನ್ ಕಲೆ ಹಾಕಿದೆ. ಮೂರನೇ ದಿನದಾಟದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸುವ ಅನಿವಾರ್ಯತೆ ಕರ್ನಾಟಕದ ಮೇಲಿದೆ. ಬಳಿಕ ಶಿಸ್ತು ಬದ್ಧ ದಾಳಿ ನಡೆಸಿ ಎದುರಾಳಿ ತಂಡಕ್ಕೆ ಕಾಟ ನೀಡಬೇಕಿದೆ.
ಮಧ್ಯ ಪ್ರದೇಶ ತಂಡದ ಪರ ಸರಾಂಶ್ ಜೈನ್ 42 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಆರ್ಯನ್ ಪಾಂಡೆ 25 ರನ್ ನೀಡಿ 2 ವಿಕೆಟ್ ಪಡೆದರು.