ಕೊರೋನಾವೈರಸ್ ಕಾರಣದಿಂದಾಗಿ ಕಳೆದೆರಡು ವರ್ಷಗಳಲ್ಲಿ ನಡೆಯದೇ ಇದ್ದ ಜನಪ್ರಿಯ ದೇಸಿ ಕ್ರಿಕೆಟ್ ಟೂರ್ನಮೆಂಟ್ ರಣಜಿ ಟ್ರೋಫಿ ಇದೀಗ ಮರಳಿ ಬಂದಿದೆ. ಭಾರತದ ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ವೇದಿಕೆ ಇದಾಗಿದ್ದು, ಟೀಮ್ ಇಂಡಿಯಾದಲ್ಲಿ ಕಳಪೆ ಪ್ರದರ್ಶನ ನೀಡಿ ಹೊರಬಿದ್ದಿರುವ ಹಿರಿಯ ಕ್ರಿಕೆಟಿಗರಿಗೂ ಕೂಡ ರಣಜಿ ಟ್ರೋಫಿ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ವೇದಿಕೆಯನ್ನು ಕಲ್ಪಿಸಿಕೊಡಲಿದೆ. ಹೀಗೆ ಸಾಕಷ್ಟು ಮಹತ್ವವನ್ನು ಹೊಂದಿರುವ ರಣಜಿ ಟ್ರೋಫಿ 2022ನೇ ಸಾಲಿನ ಟೂರ್ನಿ ಫೆಬ್ರವರಿ 17ರಿಂದ ಆರಂಭವಾಗಿದೆ.
ಇನ್ನು ಟೂರ್ನಿಯಲ್ಲಿನ ಎಲ್ಲಾ ತಂಡಗಳ ದ್ವಿತೀಯ ಪಂದ್ಯ ಫೆಬ್ರವರಿ 24ರಿಂದ ಆರಂಭವಾಗಿದ್ದು ಮೊದಲನೇ ಪಂದ್ಯವನ್ನು ಡ್ರಾ ಮಾಡಿಕೊಂಡಿರುವ ಕರ್ನಾಟಕ ದ್ವಿತೀಯ ಪಂದ್ಯದಲ್ಲಿ ಜಮ್ಮು ಕಾಶ್ಮೀರ ವಿರುದ್ಧ ಸೆಣಸಾಟ ನಡೆಸುತ್ತಿದೆ. ಮೊದಲನೇ ಇನ್ನಿಂಗ್ಸ್ನಲ್ಲಿ ಜಮ್ಮು ಕಾಶ್ಮೀರ ಬೌಲಿಂಗ್ ದಾಳಿಗೆ ಮಂಕಾದ ಕರ್ನಾಟಕ ಕರುಣ್ ನಾಯರ್ 175 ರನ್ ಗಳಿಸಿದ ಕಾರಣ 302 ರನ್ ಗಳಿಸಿ ಆಲ್ ಔಟ್ ಆಯಿತು. ಹೀಗೆ ಮೊದಲನೇ ಇನ್ನಿಂಗ್ಸ್ನಲ್ಲಿ ಪೈಪೋಟಿ ನೀಡಬಹುದಾದಂತಹ ಮೊತ್ತವನ್ನು ಗುರಿ ನೀಡಿದ್ದ ಕರ್ನಾಟಕ ಎದುರಾಳಿ ಜಮ್ಮು ಕಾಶ್ಮೀರ ತಂಡವನ್ನು 93 ರನ್ಗಳಿಗೆ ಆಲ್ ಔಟ್ ಮಾಡಿತ್ತು. ಈ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಪಡೆದ ಪ್ರಸಿದ್ಧ್ ಕೃಷ್ಣ ಆಪದ್ಬಾಂಧವನಾದರು. ಹೀಗೆ ಜಮ್ಮು ಕಾಶ್ಮೀರ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ ಉತ್ತಮ ಲೀಡ್ ಪಡೆದುಕೊಂಡ ಕರ್ನಾಟಕ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 3 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿ ಡಿಕ್ಲೇರ್ ನೀಡಿತು. ಈ ಮೂಲಕ ಜಮ್ಮು ಕಾಶ್ಮೀರ ತಂಡಕ್ಕೆ 509 ರನ್ಗಳ ಬೃಹತ್ ಗುರಿಯನ್ನು ನೀಡಿರುವ ಕರ್ನಾಟಕ ದ್ವಿತೀಯ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಜಮ್ಮು ಕಾಶ್ಮೀರ ತಂಡದ 4 ವಿಕೆಟ್ಗಳನ್ನು ಈಗಾಗಲೇ ಪಡೆದಿದೆ.
ಹೌದು, ಮೂರನೇ ದಿನದಾಟದಂದು ಜಮ್ಮು ಕಾಶ್ಮೀರ ತಂಡ 51 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿ 359 ರನ್ಗಳ ಹಿನ್ನಡೆಯನ್ನು ಅನುಭವಿಸಿದೆ. ಜಮ್ಮು ಕಾಶ್ಮೀರ ತಂಡದ ಆರಂಭಿಕ ಆಟಗಾರರು ಕೈಕೊಟ್ಟರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಕೆಟ್ ಕೀಪರ್ ಫಸಿಲ್ ರಶೀದ್ 65 ರನ್ ಗಳಿಸಿ ಜವಾಬ್ದಾರಿಯುತ ಆಟವನ್ನು ಆಡಿದರು. ಇನ್ನುಳಿದಂತೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಭಂ ಪುಂದಿರ್ 9 ರನ್ ಗಳಿಸಿದರೆ, ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಯಾನ್ ದೇವ್ ಸಿಂಗ್ ಅಜೇಯ 45 ರನ್ ಮತ್ತು ಅಬ್ದುಲ್ ಸಮದ್ ಅಜೇಯ 1 ರನ್ ಗಳಿಸಿದ್ದಾರೆ. ಈ ಇನ್ನಿಂಗ್ಸ್ನಲ್ಲಿ ಪ್ರಸಿದ್ಧ್ ಕೃಷ್ಣ 1 ವಿಕೆಟ್ ಪಡೆದಿದ್ದರೆ, ಶ್ರೇಯಸ್ ಗೋಪಾಲ್ 3 ವಿಕೆಟ್ಗಳನ್ನು ಪಡೆದಿದ್ದಾರೆ. ಸದ್ಯ ಮೂರನೇ ದಿನದಾಟದಂತ್ಯಕ್ಕೆ ಹಿನ್ನಡೆಯನ್ನು ಅನುಭವಿಸಿರುವ ಜಮ್ಮು ಕಾಶ್ಮೀರ ನಾಲ್ಕನೇ ದಿನದಾಟದ ಆರಂಭದಲ್ಲಿ ಜವಾಬ್ದಾರಿಯುತ ಆಟವನ್ನಾಡಬೇಕಾಗಿದೆ. ಒಂದುವೇಳೆ ಜಮ್ಮು ಕಾಶ್ಮೀರ ನಾಲ್ಕನೇ ದಿನದಾಟದ ಆರಂಭದಲ್ಲಿ ವಿಕೆಟ್ ಕಳೆದುಕೊಳ್ಳಲಾರಂಭಿಸಿದರೆ ಕರ್ನಾಟಕಕ್ಕೆ ಸುಲಭ ಜಯ ಲಭಿಸಲಿದೆ. ಹೀಗೆ ಪಂದ್ಯದ ಮೂರನೇ ದಿನದಾಟದಲ್ಲಿ ಜಮ್ಮು ಕಾಶ್ಮೀರ ವಿರುದ್ಧ ಕರ್ನಾಟಕ ಹಿಡಿತವನ್ನು ಹೊಂದಿದ್ದು, ಗೆಲುವಿಗೆ ಇನ್ನೂ 6 ವಿಕೆಟ್ಗಳ ಅಗತ್ಯತೆ ಇದೆ.
ಕರ್ನಾಟಕ ಆಡುವ ಬಳಗ: ದೇವದತ್ ಪಡಿಕ್ಕಲ್, ರವಿಕುಮಾರ್ ಸಮರ್ಥ್, ಕೃಷ್ಣಮೂರ್ತಿ ಸಿದ್ಧಾರ್ಥ್, ಮನೀಶ್ ಪಾಂಡೆ (ನಾಯಕ), ಕರುಣ್ ನಾಯರ್, ಶರತ್ ಬಿಆರ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ರೋನಿತ್ ಮೋರೆ, ವಿದ್ಯಾಧರ್ ಪಾಟೀಲ್, ಪ್ರಸಿದ್ಧ್ ಕೃಷ್ಣ
ಜಮ್ಮು ಕಾಶ್ಮೀರ ಆಡುವ ಬಳಗ: ಕಮ್ರಾನ್ ಇಕ್ಬಾಲ್, ಜತಿನ್ ವಾಧ್ವಾನ್, ಶುಭಂ ಪುಂಡೀರ್, ಇಯಾನ್ ದೇವ್ ಸಿಂಗ್ (ನಾಯಕ), ಅಬ್ದುಲ್ ಸಮದ್, ಪರ್ವೇಜ್ ರಸೂಲ್, ಫಾಜಿಲ್ ರಶೀದ್ (ವಿಕೆಟ್ ಕೀಪರ್), ಮುಜ್ತಾಬಾ ಯೂಸುಫ್, ಅಬಿದ್ ಮುಷ್ತಾಕ್, ಔಕಿಬ್ ನಬಿ, ಉಮ್ರಾನ್ ಮಲಿಕ್