
ಬೆಂಗಳೂರು, ಜನವರಿ 7: ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಜನವರಿ 11ರಿಂದ 14ರ ವರೆಗೆ ನಡೆಯಲಿರುವ ಕರ್ನಾಟಕ ಮತ್ತು ಸೌರಾಷ್ಟ್ರ ನಡುವಿನ ರಣಜಿ ಟ್ರೋಫಿ ಎಲೈಟ್ ಗ್ರೂಪ್ 'ಎ' ಮತ್ತು 'ಬಿ' ಪಂದ್ಯಕ್ಕಾಗಿ ಕರ್ನಾಟಕ ತಂಡ ಪ್ರಕಟಗೊಂಡಿದೆ.
ಹಿಂದಿನ ಪಂದ್ಯದಲ್ಲಿ ಕರ್ನಾಟಕ ತಂಡ ಮುಂಬೈ ವಿರುದ್ಧ 5 ವಿಕೆಟ್ ಗೆಲುವು ಸಾಧಿಸಿತ್ತು. ಇದು ರಾಜ್ಯ ತಂಡಕ್ಕೆ ರಣಜಿಯಲ್ಲಿ ಲಭಿಸಿದ 200ನೇ ಗೆಲುವು. ಈ ಗೆಲುವಿನೊಂದಿಗೆ ಕರ್ನಾಟಕ ತಂಡ ರಣಜಿಯಲ್ಲಿ ಮುಂಬೈ (245 ಜಯ) ಬಳಿಕ ಅತೀ ಹೆಚ್ಚು ಗೆಲುವುಗಳನ್ನು ಕಂಡ ತಂಡವಾಗಿ ಗುರುತಿಸಿಕೊಂಡಿತ್ತು.
ಮುಂಬೈ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕತ್ವ ಕರುಣ್ ನಾಯರ್ ವಹಿಸಿಕೊಂಡಿದ್ದರು. ಆದರೆ ಮದುವೆಯ ಕಾರಣದಿಂದ ಸಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ನಾಯರ್ ಆಡುತ್ತಿಲ್ಲ. ಹೀಗಾಗಿ ಈ ಬಾರಿ ನಾಯಕತ್ವವನ್ನು ಆಲ್ ರೌಂಡರ್ ಶ್ರೇಯಸ್ ಗೋಪಾಲ್ ವಹಿಸಿಕೊಂಡಿದ್ದಾರೆ.
ಇತ್ತೀಚೆಗೆ ಕನ್ನಡಿಗ ಮನೀಷ್ ಪಾಂಡೆ ದಾಂಪಂತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದೀಗ ಕರುಣ್ ನಾಯರ್ ಕೂಡ ಜಂಟಿ ಜೀವನಕ್ಕೆ ಪಾದಾರ್ಪಣೆ ಮಾಡುವುದರಲ್ಲಿದ್ದಾರೆ. ತನ್ನ ಬಹುಕಾಲದ ಗೆಳತಿ ಸನಾಯಾ ಟಂಕರಿವಾಲಾ ಜೊತೆ ಕರುಣ್, ಬದುಕಿನ ಹೊಸ ಇನ್ನಿಂಗ್ಸ್ ಶುರು ಮಾಡಲಿದ್ದಾರೆ.
ಕರ್ನಾಟಕ ತಂಡ: ಶ್ರೇಯಸ್ ಗೋಪಾಲ್ (ನಾಯಕ), ದೇವದತ್ ಪಡಿಕ್ಕಲ್, ದೇಗಾ ನಿಶ್ಚಲ್, ರವಿಕುಮಾರ್ ಸಮರ್ಥ್, ಸಿದ್ಧಾರ್ಥ್ ಕೆವಿ, ಶರತ್ ಬಿಆರ್ (ವಿಕೆ), ರೋಹನ್ ಕದಮ್, ಪವನ್ ದೇಶಪಾಂಡೆ, ಜಗದೀಶ್ ಸುಚಿತ್, ಅಭಿಮನ್ಯು ಮಿಥುನ್, ವಿ ಕೌಶಿಕ್, ಪ್ರತೀಕ್ ಜೈನ್, ರೋನಿತ್ ಮೋರೆ, ಶರತ್ ಶ್ರೀನಿವಾಸ್ (ವಿಕೆ), ಪ್ರವೀಣ್ ದೂಬೆ.