
ಬೆಂಗಳೂರು, ಜನವರಿ 19: ಜನವರಿ 24ರ ಗುರುವಾರ ಆರಂಭಗೊಳ್ಳಲಿರುವ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ಸೌರಾಷ್ಟ್ರ ತಂಡಗಳು ಮುಖಾಮುಖಿಯಾಗಲಿವೆ. ಕೆಎಸ್ಸಿಎಯು ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸೋದು ಬಹುತೇಕ ಖಚಿತವಾಗಿದೆ.
ಶುಕ್ರವಾರ (ಜನವರಿ 18) ಮುಕ್ತಾಯಗೊಂಡ ರಣಜಿ ಟ್ರೋಫಿ 3ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ರಾಜಸ್ತಾನ ತಂಡಗಳು ಕಾದಾಡಿದ್ದವು. ದ್ವಿತೀಯ ಇನ್ನಿಂಗ್ಸ್ ನಲ್ಲಿ ಮನೀಷ್ ಪಾಂಡೆಯ ನಾಯಕನ ಆಟ (ಅಜೇಯ 87 ರನ್) ಮತ್ತು ಕರುಣ್ ನಾಯರ್ ಅಜೇಯ 61 ರನ್ ಕೊಡುಗೆಯಿಂದ ರಾಜ್ಯತಂಡ 6 ವಿಕೆಟ್ ಗೆಲುವನ್ನಾಚರಿಸಿತ್ತು.
ಲಕ್ನೋದಲ್ಲಿರುವ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮುಕ್ತಾಯಗೊಂಡ ರಣಜಿ ಟ್ರೋಫಿ 2ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆತಿಥೇಯ ಉತ್ತರ ಪ್ರದೇಶದ ವಿರುದ್ಧ ಸೌರಾಷ್ಟ್ರ ತಂಡ ಕೂಡ 6 ವಿಕೆಟ್ ಜಯದೊಂದಿಗೆ ಸೆಮಿಫೈನಲ್ಗೆ ಪ್ರವೇಶ ಗಿಟ್ಟಿಸಿಕೊಂಡಿತ್ತು.
ಹೀಗಾಗಿ ಗುರುವಾರ ರಣಜಿ ಟ್ರೋಫಿ ಸೆಮಿಫೈನಲ್ 2ನೇ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಬಳಗ ಮತ್ತು ಮನೀಶ್ ಪಾಂಡೆ ಬಳದ ಮುಖಾಮುಖಿ ಕುತೂಹಲ ಮೂಡಿಸಿದೆ. 1ನೇ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ಮತ್ತು ಕೇರಳಾ ತಂಡಗಳು ಸೆಣಸಾಡಲಿವೆ.