ನವದೆಹಲಿ, ಅಕ್ಟೋಬರ್. 24: ರಣಜಿ ಪಂದ್ಯಾವಳಿ ವೇಳೆ ಭಾರತದ ಇಬ್ಬರು ಆಟಗಾರರು ಕೈ ಕೈ ಮಿಲಾಯಿಸುವ ಹಂತಕ್ಕೆ ತೆರಳಿದ ಘಟನೆಗೆ ಶನಿವಾರ ದೆಹಲಿ ಫಿರೋಜ್ ಶಾ ಕೋಟ್ಲಾ ಮೈದಾನ ಸಾಕ್ಷಿಯಾಯಿತು.
ದೆಹಲಿ ಮತ್ತು ಬಂಗಾಳದ ನಡುವೆ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಉಭಯ ತಂಡಗಳ ನಾಯಕರಾದ ಗೌತಮ್ ಗಂಭೀರ್ ಮತ್ತು ಮನೋಜ್ ತಿವಾರಿ ನಡುವೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತ ತಲುಪಿದರು. ಈ ವೇಳೆ ಅಡ್ಡ ಬಂದ ಅಂಪೈರ್ ಕೆ. ಶ್ರೀನಾಥ್ ಅವರನ್ನು ಗಂಭೀರ್ ತಳ್ಳಿದ್ದು ನಿಷೇಧಧ ಭಿತಿಗೆ ಒಳಗಾಗಿದ್ದಾರೆ.[ಎರಡು ವರ್ಷ ಬಳಿಕ ಮತ್ತೆ ಕೊಹ್ಲಿ- ಗಂಭೀರ್ ಕಿತ್ತಾಟ!]
ಸಾಮಾಜಿಕ ಜಾಲತಾಣಗಳಲ್ಲೂ ಗಂಭಿರ್ ವರ್ತನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅಂಪೈರ್ ಮೈ ಮುಟ್ಟುವುದು ಕ್ರಿಕೆಟ್ನಲ್ಲಿ ಗಂಭೀರ ಅಪರಾಧವಾಗಿದ್ದು, ಗಂಭೀರ್ ಕ್ರಿಕೆಟ್ನಿಂದ ನಿಷೇಧದ ಶಿಕ್ಷೆಗೆ ಗುರಿಯಾದರೂ ಆಶ್ಚರ್ಯವಿಲ್ಲ.
ಆದದ್ದೇನು?
ಬಂಗಾಳ ಬ್ಯಾಟಿಂಗ್ ನಡೆಸುತ್ತಿತ್ತು. ಈ ವೇಳೆ ಬಂಗಾಳದ ಪಾರ್ಥಸಾರಥಿ ಭಟ್ಟಾಚಾರ್ಯ ತಔಟಾದ ನಂತರ ಮನೋಜ್ ತಿವಾರಿ ಆಡಲು ಕಣಕ್ಕಿಳಿದರು. ಆದರೆ ತಿವಾರಿ ಕ್ಯಾಪ್ ಧರಿಸಿ ಆಗಮಿಸಿದ್ದರು. ಬೌಲ್ ಎಸೆಯಲು ಬಂದ ಮನನ್ ಶರ್ಮಾ ಅವರಿಗೆ ನಿಲ್ಲುವಂತೆ ಸೂಚಿಸಿದ ತಿವಾರಿ ಹೆಲ್ಮೆಟ್ ತರುವಂತೆ ಡ್ರೆಸ್ಸಿಂಗ್ ರೂಂ ಗೆ ಮನವಿ ಮಾಡಿದರು.[ಗೌತಿ ಬ್ಯಾಟ್ ಮುರಿದ ವಿನಯ್, ಪಕ ಪಕ ನಕ್ಕ]
ತಿವಾರಿ ಕಾಲಹರಣ ಮಾಡುತ್ತಿದ್ದಾರೆ ಎಂದು ಭಾವಿಸಿ ಸ್ಲಿಪ್ ನಲ್ಲಿ ನಿಂತಿದ್ದ ಗಂಭಿರ್ ಗೊಣಗಾಟ ಶುರುಹಚ್ಚಿಕೊಂಡರು. ಇದನ್ನು ಕೇಳಿಸಿಕೊಂಡ ತಿವಾರಿ ಪ್ರತ್ಯುತ್ತರ ನೀಡಲು ಆರಂಭಿಸಿದರು.
ಆಕ್ರೋಶಗೊಂಡ ಗಂಭಿರ್ ತಿವಾರಿಗೆ ನಿನಗೆ ಹೊಡೆಯುತ್ತೇನೆ ಎಂದು ಹೇಳಿದರು. ಸಂಜೆ ವರೆಗೆ ಕಾದು ಯಾಕೆ ಹೊಡೆಯುತ್ತಿಯಾ ಈಗಲೇ ಇತ್ಯರ್ಥವಾಗಲಿ ಎಂದು ತಿವಾರಿ ಉತ್ತರ ನೀಡಿದರು. ಇವರ ಗಲಾಟೆ ಬಿಡಿಸಲು ಬಂದ ಅಂಪೈರ್ ಅಂಪೈರ್ ಶ್ರೀನಾಥ್ ಅವರನ್ನು ಗಂಭೀರ್ ಕೈ ನಿಂದ ತಳ್ಳಿದರು.