ರಣಜಿ ಟ್ರೋಫಿ ಟೂರ್ನಿಯಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಮುಂಬೈ ತಂಡವು ಜನವರಿ 23 ರಂದು ಆಡಲಿದೆ. ಈ ಪಂದ್ಯಕ್ಕಾಗಿ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ತಂಡವನ್ನು ಪ್ರಕಟಿಸಿದೆ. ಮುಂಬೈ ತಂಡದಲ್ಲಿ ಟೀಮ್ ಇಂಡಿಯಾದ ಅನುಭವಿ ಸ್ಟಾರ್ ಆಟಗಾರರ ದಂಡೆಯಿದೆ. ಜಮ್ಮು ಮತ್ತು ಕಾಶ್ಮೀರ ವಿರುದ್ಧ ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದಾರೆ. ಮುಂಬೈ ತಂಡದಲ್ಲಿ ರೋಹಿತ್ ಹೊರತಾಗಿ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ ಮತ್ತು ಶಾರ್ದೂಲ್ ಠಾಕೂರ್ ಅವರಂತಹ ಅನುಭವಿ ಆಟಗಾರರು ಕೂಡ ಸ್ಥಾನ ಪಡೆದಿದ್ದಾರೆ. ತಂಡದ ನಾಯಕತ್ವ ಅಜಿಂಕ್ಯ ರಹಾನೆ ಕೈಯಲ್ಲಿದೆ. ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ರೋಹಿತ್ ಆಡಲು ಸಜ್ಜಾಗಿದ್ದಾರೆ.
ಜನವರಿ 23ರಿಂದ ನಡೆಯಲಿರುವ ಪಂದ್ಯಕ್ಕೆ ಮಾತ್ರ ಎಂಸಿಎ ಮುಂಬೈ ತಂಡವನ್ನು ಪ್ರಕಟಿಸಿದೆ. ಟೀಮ್ ಇಂಡಿಯಾ ಪರ ಸ್ಥಿರ ಪ್ರದರ್ಶನ ನೀಡುತ್ತಿರುವ ಯುವ ಸ್ಟಾರ್ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕೂಡ ಮುಂಬೈ ತಂಡದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇದೀಗ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಪಂದ್ಯದಲ್ಲಿ ಮುಂಬೈ ಪರ ಯಶಸ್ವಿ ಮತ್ತು ರೋಹಿತ್ ಪಂದ್ಯವನ್ನು ತೆರೆಯುತ್ತಾರೆಯೇ? ಅಥವಾ ಇಲ್ಲವೇ? ಎಂಬುದು ಈಗ ಕುತೂಹಲ ಮೂಡಿಸಿದೆ.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಂಕಷ್ಟದ ಹಾದಿಯಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ರೋಹಿತ್ ಫಾರ್ಮ್ ಸಮಸ್ಯೆ ಎದುರಿಸಿದ್ದರು. ಪರಿಣಾಮ ಅವರು ಕೊನೆ ಟೆಸ್ಟ್ ಪಂದ್ಯದಿಂದ ಹೊರಗುಳಿಯಬೇಕಾಯಿತು. ಇದಾದ ನಂತರ ಹಿಟ್ಮ್ಯಾನ್ ನಿವೃತ್ತಿಯ ಬಗ್ಗೆ ಚರ್ಚೆಗಳು ತೀವ್ರವಾಗಿದ್ದವು. ಆದರೆ ಇದೀಗ ದೇಶಿಯ ಕ್ರಿಕೆಟ್ನಲ್ಲಿ ಮುಂಬೈ ಪರ ರೋಹಿತ್ ಶರ್ಮಾ ಆಡಲು ನಿರ್ಧರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯಕ್ಕೆ ರೋಹಿತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಮೂಲಕ ರೋಹಿತ್ ಶರ್ಮಾ ತಮ್ಮ ಲಯಕ್ಕೆ ಮರಳುವ ಸಾಧ್ಯತೆಯಿದೆ.
ಐಸಿಸಿ ಚಾಂಪಿಯನ್ ಟ್ರೋಫಿ 2025ರ ಟೂರ್ನಿಯ್ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಸ್ಥಾನ ಪಡೆದಿದ್ದಾರೆ. ಈ ಮೂವರು ಬ್ಯಾಟರ್ಗಳಿಗೆ ಅಭ್ಯಾಸ ನಡೆಸಲು ರಣಜಿ ಟ್ರೋಫಿ ಪಂದ್ಯ ಪ್ರಮುಖವಾಗಿದೆ. ಇದಲ್ಲದೆ, ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೂ ಈ ಮೂವರಿಗೆ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದೆ.
ಅಜಿಂಕ್ಯ ರಹಾನೆ (ನಾಯಕ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಆಯುಷ್ ಮ್ಹಾತ್ರೆ, ಶ್ರೇಯಸ್ ಅಯ್ಯರ್, ಸಿದ್ಧೇಶ್ ಲಾಡ್, ಶಿವಂ ದುಬೆ, ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಆಕಾಶ್ ಆನಂದ್ (ವಿಕೆಟ್ ಕೀಪರ್), ತನುಷ್ ಕೋಟ್ಯಾನ್, ಶಮ್ಸ್ ಮುಲಾನಿ, ಹಿಮಾಂಶುಕ್ ಸಿಂಗ್ , ಸಿಲ್ವೆಸ್ಟರ್ ಡಿಸೋಜಾ, ರಾಯ್ಸ್ಟನ್ ಡಯಾಸ್, ಕಾರ್ಶ್ ಕೊಠಾರಿ.