
ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿಉತ್ತರಾಖಂಡದ ವಿರುದ್ಧ ಟಾಸ್ ಗೆದ್ದಿರುವ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಎರಡೂ ತಂಡಗಳು ಈ ಬಾರಿ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಸೋಲು ಕಂಡಿಲ್ಲ ಎನ್ನುವುದು ವಿಶೇಷ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ.
ತವರಿನ ಅಂಗಳದಲ್ಲಿ ಕ್ವಾರ್ಟರ್ ಫೈನಲ್ ಪಂದ್ಯ ನಡೆಯುತ್ತಿರುವುದು ಕರ್ನಾಟಕ ತಂಡಕ್ಕೆ ಅನುಕೂಲಕರವಾಗಿದೆ. ತವರಿನ ಪರಿಸ್ಥಿತಿಯ ಲಾಭ ಪಡೆದು ಉತ್ತರಾಖಂಡದ ವಿರುದ್ಧ ಗೆಲುವು ಸಾಧಿಸಿ ಸೆಮಿ ಫೈನಲ್ ತಲುಪುವ ಲೆಕ್ಕಾಚಾರದಲ್ಲಿದೆ.
ಗುಂಪು ಹಂತದಲ್ಲಿ ಕರ್ನಾಟಕ ಆಡಿರುವ 7 ಪಂದ್ಯಗಳಲ್ಲಿ 4 ರಲ್ಲಿ ಗೆಲುವು, ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವ ಎಲೈಟ್ ಸಿ ಗುಂಪಿನಲ್ಲಿ 35 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಎಲೈಟ್ ಎ ಗುಂಪಿನಲ್ಲಿ ಉತ್ತಾರಖಂಡ 7 ಪಂದ್ಯಗಳಲ್ಲಿ 3 ರಲ್ಲಿ ಜಯ ಮತ್ತು 4 ಪಂದ್ಯಗಳನ್ನು ಡ್ರಾ ಮಾಡಿಕೊಂಡು 29 ಅಂಕಗಳೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಇದೇ ಮೊದಲ ಬಾರಿಗೆ ತಂಡಗಳು ಮುಖಾಮುಖಿಯಾಗುತ್ತಿದ್ದು, ರೋಚಕ ಪಂದ್ಯವನ್ನು ನಿರೀಕ್ಷೆ ಮಾಡಬಹುದಾಗಿದೆ.

ಬ್ಯಾಟಿಂಗ್ಗೆ ಸಹಕಾರಿಯಾದ ಪಿಚ್
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್ಗೆ ಹೆಚ್ಚಿನ ಸಹಕಾರಿ ನೀಡುತ್ತದೆ. ಚಿಕ್ಕ ಬೌಂಡರಿಗಳನ್ನು ಹೊಂದಿದ್ದು, ಹೈ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷೆ ಮಾಡಬಹುದಾಗಿದೆ. ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್ರಂತಹ ಅನುಭವಿ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಕರ್ನಾಟಕ ಮೇಲ್ನೋಟಕ್ಕೆ ಪಂದ್ಯವನ್ನು ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ.
ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕರ್ನಾಟಕ 8 ವಿಕೆಟ್ಗಳ ಜಯ ಸಾಧಿಸಿತ್ತು. ಅದೇ ಪ್ರದರ್ಶನವನ್ನು ಉತ್ತರಾಖಂಡದ ವಿರುದ್ಧ ನೀಡಿದರೆ, ಸೆಮಿಫೈನಲ್ ತಲುಪುವುದು ಸುಲಭವಾಗಲಿದೆ.
ಉಭಯ ತಂಡಗಳ ಆಡುವ ಬಳಗ
ಕರ್ನಾಟಕ: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್(ನಾಯಕ), ದೇವದತ್ ಪಡಿಕ್ಕಲ್, ಶರತ್ ಬಿಆರ್(ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ಮನೀಶ್ ಪಾಂಡೆ, ನಿಕಿನ್ ಜೋಸ್, ಶ್ರೇಯಸ್ ಗೋಪಾಲ್, ವಿಜಯ್ ಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ, ವೆಂಕಟೇಶ್ ಎಂ.
ಉತ್ತರಾಖಂಡ: ಅಭಯ್ ನೇಗಿ, ಆದಿತ್ಯ ತಾರೆ, ಅಖಿಲ್ ರಾವತ್, ಅವನೀಶ್ ಸುಧಾ, ದೀಪಕ್ ಧಾಪೋಲಾ, ದೀಕ್ಷಾಂಶು ನೇಗಿ, ಜೀವನ್ಜೋತ್ ಸಿಂಗ್ (ನಾಯಕ), ಕುನಾಲ್ ಚಂಡೇಲಾ, ಮಯಾಂಕ್ ಮಿಶ್ರಾ, ನಿಖಿಲ್ ಕೊಹ್ಲಿ, ಸ್ವಪ್ನಿಲ್ ಸಿಂಗ್.