ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯಗಳು ಶುಕ್ರವಾರದಿಂದ ಆರಂಭವಾಗಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಭರ್ಜರಿ ಪ್ರದರ್ಶನ ನೀಡಿ ಮತ್ತೊಮ್ಮೆ ಸೆಮಿಫೈನಲ್ ಹಂತವನ್ನು ಪ್ರವೇಶಿಸುವ ಕನಸು ಕರ್ನಾಟಕ ತಂಡದ್ದಾಗಿದೆ.
ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಕರ್ನಾಟಕ ಅಸಾಧ್ಯವಾದುದನ್ನು ಸಾಧಿಸಿ ಬೀಗಿತ್ತು. ಈ ಗೆಲುವಿನ ಆತ್ಮವಿಶ್ವಾಸದಲ್ಲಿರುವ ಕರ್ನಾಟಕ ಮುಂಬೈ ವಿರುದ್ಧ ಸ್ಥಿರ ಪ್ರದರ್ಶನ ನೀಡುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದೆ. ಇವರು ತಂಡದ ಜಯದಲ್ಲಿ ತಮ್ಮದೇ ಆದ ಕಾಣಿಕೆ ನೀಡಬಲ್ಲರು.

ಟೂರ್ನಿಯ ಮಧ್ಯದಲ್ಲಿ ತಂಡದ ನಾಯಕತ್ವವನ್ನು ವಹಿಸಿಕೊಂಡಿರುವ ದೇವದತ್ ಪಡಿಕ್ಕಲ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇವರು ಆಡಿದ 3 ಪಂದ್ಯಗಳಲ್ಲಿ 244 ರನ್ ಬಾರಿಸಿ ಅಬ್ಬರಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಬ್ಬರಿಸಿರುವ ಕರ್ನಾಟಕದ ಕೆಎಲ್ ರಾಹುಲ್, ಮುಂಬೈ ವಿರುದ್ಧ ಕಣಕ್ಕೆ ಇಳಿಯಲಿದ್ದಾರೆ. ಇವರ ಆಗಮನ ನಿಶ್ಚಿತವಾಗಿ ತಂಡದ ಬಲವನ್ನು ಹೆಚ್ಚಿಸಿದೆ.
ಕರ್ನಾಟಕದ ಪರ ಗರಿಷ್ಠ ರನ್ ಸಾಧನೆ ಮಾಡಿರುವ ಕರುಣ್ ನಾಯರ್ (614 ರನ್) ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಇನ್ನು ಅನುಭವಿ ಮಯಾಂಕ್ ಅಗರ್ವಾಲ್ (397 ರನ್) ತಂಡಕ್ಕೆ ಆಧಾರವಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಆರ್ ಸ್ಮರಣ್ (605 ರನ್) ಹಾಗೂ ಆಲ್ರೌಂಡರ್ ಶ್ರೇಯಸ್ ಗೋಪಾಲ್ (441 ರನ್) ಪರಿಸ್ಥಿತಿಗೆ ತಕ್ಕಂತೆ ಆಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲೂ ಶ್ರೇಯಸ್ ಗೋಪಾಲ್ ಮುಂಚೂಣಿಯಲ್ಲಿದ್ದು, ಇವರು ಮುಂಬೈ ಬೌಲರ್ಗಳನ್ನು ಕಾಡಬಲ್ಲರು. ವಿದ್ವತ್ ಕಾವೇರಪ್ಪ, ವಿದ್ಯಾಧರ್ ಪಾಟೀಲ್, ಪ್ರಸಿದ್ಧ್ ಕೃಷ್ಣಾ, ಶಿಖರ್ ಶೆಟ್ಟಿ ತಮ್ಮ ಶಿಸ್ತು ಬದ್ಧ ದಾಳಿ ನಡೆಸಿ ಎದುರಾಳಿಗಳನ್ನು ಕಾಡಬಲ್ಲರು.
ಕರ್ನಾಟಕ ತಂಡ: ದೇವದತ್ ಪಡಿಕ್ಕಲ್ (ನಾಯಕ), ಮಯಾಂಕ್ ಅಗರವಾಲ್, ಕೆ.ಎಲ್ ರಾಹುಲ್, ಅನೀಶ್ ಕೆ.ವಿ, ಕರುಣ್ ನಾಯರ್, ಸ್ಮರಣ್ ಆರ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ವೆಂಕಟೇಶ್ ಎಂ, ವಿದ್ಯಾಧರ್ ಪಾಟೀಲ್, ಪ್ರಸಿದ್ಧ್ ಎಂ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಶ್ರೀಜಿತ್ ಕೆ.ಎಲ್ (ವಿಕೆಟ್ ಕೀಪರ್) ಮತ್ತು ವಿದ್ವತ್ ಕಾವೇರಪ್ಪ.
ಮುಂಬೈ ತಂಡದಲ್ಲೂ ಹೆಸರಾಂತ ಬ್ಯಾಟರ್ಗಳ ದಂಡೇ ಇದೆ. ಸಿದ್ದೇಶ್ ಲಾಡ್, ಸರ್ಫರಾಜ್ ಖಾನ್, ಮುಶೀರ್ ಖಾನ್, ಉತ್ತಮ ಲಯದಲ್ಲಿದ್ದು ತಂಡಕ್ಕೆ ಆಧಾರವಾಗಬಲ್ಲರು. ನಾಯಕ ಶಾರ್ದೂಲ್ ಠಾಕೂರ್ ಹಾಗೂ ಯಶಸ್ವಿ ಜೈಸ್ವಾಲ್ ಗಾಯದಿಂದ ಚೇತರಿಸಿಕೊಂಡಿದ್ದು, ಕರ್ನಾಟಕದ ವಿರುದ್ಧ ಕಣಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಶಮ್ಸ್ ಮುಲಾನಿ ಟೂರ್ನಿಯುದ್ದಕ್ಕೂ ಅಮೋಘ ದಾಳಿ ಸಂಘಟಿಸಿದ್ದು, ಇವರಿಗೆ ಬೇರೆ ಬೌಲರ್ಗಳ ಉತ್ತಮ ಸಾಥ್ ನೀಡಬೇಕಿದೆ. ಎಂಟರ ಘಟ್ಟದ ಪಂದ್ಯದಲ್ಲಿ ಯಾರ ಕೈ ಮೇಲಾಗುತ್ತದೆ ಎಂಬ ಕುತೂಹಲ ಮನೆ ಮಾಡಿದೆ.