ಮುಂಬೈ: ಭರವಸೆಯ ಬೌಲರ್ಗಳ ಬಿಗುವಿನ ದಾಳಿ ಹಾಗೂ ಅನುಭವಿ ಬ್ಯಾಟರ್ ಮಯಾಂಕ್ ಅಗರ್ವಾಲ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಕರ್ನಾಟಕ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಇನಿಂಗ್ಸ್ ಮುನ್ನಡೆಯ ಹೊಸ್ತಿಲಲ್ಲಿ ನಿಂತಿದೆ. ಎರಡನೇ ದಿನದಾಟದ ಆರಂಭದಲ್ಲಿ ಕರ್ನಾಟಕ 11 ರನ್ ಬಾರಿಸಿದಲ್ಲಿ ಕರ್ನಾಟಕ ಮುನ್ನಡೆ ಸಾಧಿಸಲಿದೆ.
ಶುಕ್ರವಾರದಿಂದ ಆರಂಭವಾದ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಮೊದಲು ಬ್ಯಾಟ್ ಮಾಡಲು ಮುಂದಾಯಿತು. ನಾಯಕ ಶರ್ದೂಲ್ ಠಾಕೂರ್ ಅವರ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಬ್ಯಾಟರ್ಗಳು ಸಹ ವಿಫಲರಾದರು. ಗಾಯದಿಂದ ಬಳಲುತ್ತಿದ್ದ ಯಶಸ್ವಿ ಜೈಸ್ವಾಲ್ ಫಿಟ್ ಆಗಿ ಮಹತ್ವದ ಪಂದ್ಯದಲ್ಲಿ ತಂಡ ಸೇರಿದರು. ಇವರು 5 ರನ್ ಬಾರಿಸಿ ವಿದ್ಯಾಧರ್ ಪಾಟೀಲ್ ತೋಡಿದ ಖೆಡ್ಡಾಗೆ ಬಲಿಯಾದರು.

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಮುಶೀರ್ ಖಾನ್ (1), ಅನುಭವಿ ಬ್ಯಾಟರ್ ಸಿದ್ಧೇಶ್ ಲಾಡ್ (12) ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. 39 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಮುಂಬೈ ತಂಡಕ್ಕೆ ಆರಂಭಿಕ ಅಖಿಲ್ ಹೆರ್ವಾಡ್ಕರ್ ಹಾಗೂ ಸೂರ್ಯಾಂಶ್ ಶೆಡ್ಗೆ ಕೊಂಚ ಆಧಾರವಾದರು. ಈ ಜೋಡಿ ತಂಡಕ್ಕೆ 31 ರನ್ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಸೂರ್ಯಾಂಶ್ ಶೆಡ್ಗೆ 10 ರನ್ ಬಾರಿಸಿದ್ದಾಗ ಔಟ್ ಆದರು. ನಂತರ ಬಂದ ಯಾವೊಬ್ಬ ಬ್ಯಾಟರ್ ನೆಲಕಚ್ಚಿನಿಂತು ಬ್ಯಾಟ್ ಮಾಡಲಿಲ್ಲ.
ಆರಂಭಿಕ ಆಟಗಾರರ ಅಖಿಲ್ ಹೆರ್ವಾಡ್ಕರ್ 9 ಬೌಂಡರಿ ನೆರವಿನಿಂದ 60 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ಮುಂಬೈ ಮೊದಲ ಇನಿಂಗ್ಸ್ನಲ್ಲಿ 120 ರನ್ಗಳಿಗೆ ಸರ್ವಪತನ ಕಂಡಿತು. ಕರ್ನಾಟಕದ ಪರ ವೇಗದ ಬೌಲರ್ ವಿದ್ವತ್ ಕಾವೇರಪ್ಪ, ಪ್ರಸಿದ್ಧ್ ಕೃಷ್ಣಾ, ಶ್ರೇಯಸ್ ಗೋಪಲ ತಲಾ 3 ವಿಕೆಟ್ ಪಡೆದರು.
ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕದ ಆರಂಭ ಭರ್ಜರಿಯಾಗಿತ್ತು. ಅನುಭವಿ ಬ್ಯಾಟರ್ಗಳಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಜೊಡಿ ಸೊಗಸಾದ ಆಟವನ್ನು ಆಡಿ ತಂಡಕ್ಕೆ ಆಧಾರವಾಯಿತು. ಈ ಆಟಗಾರರು ಮೊದಲ ವಿಕೆಟ್ಗೆ 50 ರನ್ ಸೇರಿಸಿತು. ಈ ಅವಧಿಯಲ್ಲಿ ಕೆಎಲ್ ರಾಹುಲ್ 6 ಬೌಂಡರಿ ನೆರವಿನಿಂದ 28 ರನ್ ಬಾರಿಸಿ ಔಟ್ ಆದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ದೇವದತ್ ಪಡಿಕ್ಕಲ್ 17 ರನ್ಗಳಿಗೆ ಆಟ ಮುಗಿಸಿದರು. ಅನುಭವಿ ಮಯಾಂಕ್ ಅಗರ್ವಾಲ್ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 54 ರನ್ ಬಾರಿಸಿದ್ದು, ಇವರಿಗೆ ಕರುಣ್ ನಾಯರ್ (ಅಜೇಯ 3) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.