ಭರವಸೆಯ ಆಟಗಾರ ಆರ್ ಸ್ಮರಣ್ ಬಾರಿಸಿದ ಚೊಚ್ಚಲ ದ್ವಿಶತಕದ ಸಹಾಯದಿಂದ ಕರ್ನಾಟಕ ರಣಜಿ ಟ್ರೋಫಿಯ ಸಿ ಗುಂಪಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಬೃಹತ್ ಮೊತ್ತ ದಾಖಲಿಸಿದೆ. ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 475 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ 420 ರನ್ ಗಳ ಭರ್ಜರಿ ಮುನ್ನಡೆಯನ್ನು ಸಾಧಿಸಿದೆ. ಈ ಮೂಲಕ ಕರ್ನಾಟಕ ತಂಡ ಈ ಪಂದ್ಯದಲ್ಲಿ ಬಿಗಿ ಹಿಡಿತವನ್ನು ಸಾಧಿಸಿದೆ.
ಕರ್ನಾಟಕ ಎರಡನೇ ದಿನದಾಟವನ್ನು 4 ವಿಕೆಟ್ಗೆ 199 ರನ್ಗಳಿಂದ ಆಟ ಮುಂದುವರಿಸಿದ ಕರ್ನಾಟಕ ಉತ್ತಮ ಆರಂಭವನ್ನು ಕಂಡಿತು. ದಿನದಾಟವನ್ನು ಅಜೇಯ 83 ರನ್ಗಳಿಂದ ಆರಂಭಿಸಿದ ಸ್ಮರಣ್ ಮ್ಯಾರಥಾನ್ ಇನಿಂಗ್ಸ್ ಕಟ್ಟಿದರು. ಕೆಳ ಕ್ರಮಾಂಕದಲ್ಲಿ ಪ್ರಸಿದ್ಧ ಕೃಷ್ಣ ಏಕದಿನ ಕ್ರಿಕೆಟ್ ಶೈಲಿಯಲ್ಲಿ ಬ್ಯಾಟ್ ಮಾಡಿ 30 ರನ್ ಬಾರಿಸಿ ತಂಡಕ್ಕೆ ನೆರವಾದರು.

ಕರ್ನಾಟಕ ತಂಡದ ಪರ ರವಿಚಂದ್ರನ್ ಸ್ಮರಣ್ ಹಾಗೂ ಭರವಸೆಯ ಆಟಗಾರ ಅಭಿನವ್ ಮನೋಹರ್ ಕ್ಲಾಸಿಕ್ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಎರಡನೇ ದಿನದಾಟದಲ್ಲಿ ಸುಮಾರು 20 ಓವರ್ ಬ್ಯಾಟ್ ನಡಿಸಿತು. ಅಲ್ಲದೆ ಮೊದಲಾವಧಿಯಲ್ಲಿ ರಾಜ್ಯ ತಂಡಕ್ಕೆ ಹೆಚ್ಚಿನ ಪೆಟ್ಟು ಬೀಳದಂತೆ ನೋಡಿಕೊಂಡರು. ಈ ಜೋಡಿ ತಂಡಕ್ಕೆ ಶತಕದ ಜೊತೆಯಾಟದ ಕಾಣಿಕೆ ನೀಡಿತು. ಅಭಿನವ್ ಮನೋಹರ್ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 34 ರನ್ ಸಿಡಿಸಿ ಔಟ್ ಆದರು.
ರವಿಚಂದ್ರನ್ ಸ್ಮರಣ್ ತಮ್ಮ ಸೊಗಸಾದ ಬ್ಯಾಟಿಂಗ್ ಶೈಲಿಯನ್ನು ರಣಜಿ ಟ್ರೋಫಿಯಲ್ಲೂ ಮುಂದುವರೆಸಿದರು. ಇತ್ತೀಚಿಗೆ ವಿದರ್ಭ ವಿರುದ್ಧ ವಿಜಯ್ ಹಜಾರೆ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದರು. ಅದೇ ಧಾಟಿಯಲ್ಲೂ ರಣಜಿಯಲ್ಲೂ ಬ್ಯಾಟ್ ಮಾಡಿದ ಸ್ಮರಣ್ ತಂಡಕ್ಕೆ ನೆರವಾದರು. 21 ವರ್ಷದ ಸ್ಮರಣ್ ರಣಜಿ ಟ್ರೋಫಿಯಲ್ಲಿ ಶತಕ ಬಾರಿಸಿ ಅಬ್ಬರಿಸಿದರು. ಈಗ ಪಂಜಾಬ್ ವಿರುದ್ಧ ದ್ವಿಶತಕದ ಸಾಧನೆಯನ್ನು ಮಾಡಿದರು. ಇವರು 25 ಬೌಂಡರಿ, 3 ಸಿಕ್ಸರ್ ನೆರವಿನಿಂದ 203 ರನ್ ಸಿಡಿಸಿ ಔಟ್ ಆದರು.
ಕರ್ನಾಟಕದ ಪರ ಶ್ರೇಯಸ್ ಗೋಪಾಲ್ 31, ಯಶೋವರ್ಧನ್ 26, ಪ್ರಸಿದ್ಧ ಕೃಷ್ಣ 30 ಹಾಗೂ ವಾಸುಕಿ ಕೌಶಿಕ್ ಅಜೇಯ 10 ರನ್ ಬಾರಿಸಿ ತಂಡಕ್ಕೆ ಆಧಾರವಾದರು.