ಲಕ್ನೋ: ಕರ್ನಾಟಕ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಹಂತದಲ್ಲಿ ಬಿಗಿ ಹಿಡಿತ ಸಾಧಿಸಿದ್ದು, ಉತ್ತರಾಖಂಡ ವಿರುದ್ಧ ಗೆಲುವಿನ ಕನಸು ಕಾಣುತ್ತಿದೆ. ಗುರುವಾರ ನಡೆಯಲಿರುವ ಕೊನೆಯ ದಿನದಾಟದಲ್ಲಿ ಉತ್ತರಾಖಂಡ ಗೆಲ್ಲಬೇಕಾದಲ್ಲಿ ಚಮತ್ಕಾರವೇ ನಡೆಯಬೇಕಿದೆ. ಈಗಾಗಲೇ ಕರ್ನಾಟಕ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಒಂದು ಕಾಲನ್ನು ಫೈನಲ್ಗೆ ಇಟ್ಟು ಆಗಿದೆ.
ನಾಲ್ಕನೇ ದಿನದಾಟವನ್ನು ಉತ್ತರಾಖಂಡ 5 ವಿಕೆಟ್ಗೆ 149 ರನ್ಗಳಿಂದ ಆಟ ಮುಂದುವರೆಸಿತು. ಅಲ್ಲದೆ 233 ರನ್ಗಳಿಗೆ ಆಲೌಟ್ ಆಯಿತು. ಉತ್ತರಾಖಂಡ ಪರ ಮೊದಲ ಇನಿಂಗ್ಸ್ನಲ್ಲಿ ಲಕ್ಷ ರಾಯಚಂದನಿ 55 ರನ್ ಬಾರಿಸಿದರೆ, ಕೆಳ ಕ್ರಮಾಂಕದಲ್ಲಿ ಆದಿತ್ಯ ರಾವತ್ 45 ರನ್ ಬಾರಿಸಿದರು. ಕರ್ನಾಟಕದ ಪರ ವಿದ್ಯಾಧರ್ ಪಾಟೀಲ್, ವಿಜಯ್ಕುಮಾರ್ ವೈಶಾಕ್ ತಲಾ ಮೂರು ವಿಕೆಟ್ ಕಬಳಿಸಿದರು. ಸ್ಪಿನ್ ಬೌಲರ್ ಶ್ರೇಯಸ್ ಗೋಪಾಲ್ 2 ವಿಕೆಟ್ ಉರುಳಿಸಿದರು.

ಉತ್ತರಾಖಂಡ ಮೇಲೆ ಫಾಲೋ ಆನ್ ಹೇರದೆ ಕರ್ನಾಟಕ ಎರಡನೇ ಇನಿಂಗ್ಸ್ ಆರಂಭಿಸಿತು. ಎರಡನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದು ಬ್ಯಾಟ್ ಮಾಡಿದ ಕೃತಿಕ್ ಕೃಷ್ಣ 52 ರನ್ಗಳ ಇನಿಂಗ್ಸ್ ಕಟ್ಟಿ ತಂಡಕ್ಕೆ ಆಧಾರವಾದರು. ಮಯಾಂಕ್ ಅಗರ್ವಾಲ್ 3 ಬೌಂಡರಿ ಸೇರಿದಂತೆ 21 ರನ್ ಸೇರಿಸಿ ತಂಡಕ್ಕೆ ನೆರವಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಶ್ರೇಯಸ್ ಗೋಪಾಲ್ (0), ಭರವಸೆಯ ಬ್ಯಾಟರ್ ಕರುಣ್ ನಾಯರ್ (8) ರನ್ ಬರವನ್ನು ಅನುಭವಿಸಿದರು.
59 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ತಂಡಕ್ಕೆ ಕೃತಿಕ್ ಕೃಷ್ಣ ಹಾಗೂ ರವಿಚಂದ್ರನ್ ಸ್ಮರಣ್ ಆಧಾರವಾದರು. ಈ ಜೋಡಿ 4ನೇ ವಿಕೆಟ್ಗೆ 63 ರನ್ ಸೇರಿಸಿತು. 5ನೇ ವಿಕೆಟ್ಗೆ ಸ್ಮರಣ್ ಜೊತೆಗೂಡಿದ ಭರವಸೆಯ ಬ್ಯಾಟರ್ ಕೆಎಲ್ ರಾಹುಲ್ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾದರು. ಅಲ್ಲದೆ ಶತಕದ ಜೊತೆಯಾಟವನ್ನು ನೀಡಿದರು. ಮೊದಲ ಇನಿಂಗ್ಸ್ನಲ್ಲಿ ಶತಕ ಬಾರಿಸಿದ್ದ ಸ್ಮರಣ್, ಎರಡನೇ ಇನಿಂಗ್ಸ್ನಲ್ಲೂ ಆರ್ಭಟಿಸಿದರು. ಅಲ್ಲದೆ 149 ಎಸೆತಗಳಲ್ಲಿ 12 ಬೌಂಡರಿ, 3 ಸಿಕ್ಸರ್ ನೆರವಿನಿಂದ 127 ರನ್ ಬಾರಿಸಿ ಔಟ್ ಆದರು.
ಕೆಎಲ್ ರಾಹುಲ್ 3 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 70 ರನ್ ಸಿಡಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.