
ಬೆಂಗಳೂರು, ಜನವರಿ 22: ಟೀಂ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡಿದ ಬಳಿಕ ಮಯಾಂಕ್ ಅಗರವಾಲ್ ಅವರು ದೇಶಿ ಕ್ರಿಕೆಟ್ ಗೆ ಮರಳಿದ್ದಾರೆ. ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ನಲ್ಲಿ ಕರ್ನಾಟಕ ತಂಡದ ಪರ ಆಡಲಿದ್ದಾರೆ. ಸೌರಾಷ್ಟ್ರ ವಿರುದ್ಧದ ಪಂದ್ಯಕ್ಕೆ ಮಯಾಂಕ್ ಆಯ್ಕೆಯಾಗಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಕೊನೆ 2 ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡ ಮಯಾಂಕ್ ಅವರು ಆರಂಭಿಕ ಆಟಗಾರರಾಗಿ ಗಮನಾರ್ಹ ಪ್ರದರ್ಶನ ನೀಡಿದರು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಮಯಾಂಕ್ 2 ಅರ್ಧಶತಕ ಬಾರಿಸಿದ್ದರು. ಆದರೆ, ಮಯಾಂಕ್ ಸಣ್ಣ ಗಾಯಕ್ಕೆ ತುತ್ತಾಗಿದ್ದು, ಈಗ ಚೇತರಿಸಿಕೊಂಡಿದ್ದಾರೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರದಿಂದ ರಣಜಿ ಉಪಾಂತ್ಯ ಪಂದ್ಯ ಆರಂಭಗೊಳ್ಳಲಿದೆ.ಮನೀಷ್ ಪಾಂಡೆ ಸಾರಥ್ಯದ 15 ಸದಸ್ಯರ ತಂಡದಲ್ಲಿ ಮಯಾಂಕ್ ಮರಳಿದ್ದರಿಂದ ಪವನ್ ದೇಶಪಾಂಡೆ ಅವರು ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಆಸೀಸ್ ಪ್ರವಾಸದಲ್ಲಿ ಪದಾರ್ಪಣೆ ಟೆಸ್ಟ್ನಲ್ಲೇ ಮಿಂಚಿದ್ದ ಮಯಾಂಕ್ 2 ಅರ್ಧಶತಕ ಬಾರಿಸಿ 195ರನ್ ಗಳಿಸಿದರು. ಆದರೆ, ನಂತರ ಮಯಾಂಕ್ ಸಣ್ಣ ಗಾಯಕ್ಕೆ ತುತ್ತಾಗಿದ್ದರು.
2017-18ರ ಸೀಸನ್ ನಲ್ಲಿ ಕರ್ನಾಟಕ ಪರ ಮಯಾಂಕ್ ಅವರು 32 ಇನ್ನಿಂಗ್ಸ್ ಗಳಿಂದ 2,169 ರನ್ ಚೆಚ್ಚಿದ್ದನ್ನು ಇಲ್ಲಿ ಸ್ಮರಿಸಬಹುದು.
ಕರ್ನಾಟಕ ತಂಡ: ಮನೀಷ್ ಪಾಂಡೆ(ನಾಯಕ), ಶ್ರೇಯಸ್ ಗೋಪಾಲ್ (ಉಪ ನಾಯಕ), ಆರ್ ವಿನಯ್ ಕುಮಾರ್, ಡಿ ನಿಶ್ಚಿಲ್, ಮಯಾಂಕ್ ಅಗರ್ವಾಲ್, ಆರ್ ಸಮರ್ಥ್, ಕರುಣ್ ನಾಯರ್, ಅಭಿಮನ್ಯು ಮಿಥುನ್, ರೋನಿತ್ ಮೋರೆ, ಕೆ ಗೌತಮ್, ಪ್ರಸಿದ್ಧ್ ಕೃಷ್ಣ, ಸಿದ್ಧಾರ್ಥ್ ಕೆವಿ, ಶರತ್ ಶ್ರೀನಿವಾಸ್(ವಿಕೆಟ್ ಕೀಪರ್), ಶರತ್ ಬಿಆರ್(ವಿಕೆಟ್ ಕೀಪರ್), ಜೆ ಸುಚಿತ್.