Ranji Trophy: ಶ್ರೇಯಸ್ ಗೋಪಾಲ್ ಶತಕ: ಉತ್ತರಾಖಂಡ ವಿರುದ್ಧ 358 ರನ್ಗಳ ಬೃಹತ್ ಮುನ್ನಡೆ

ಉತ್ತರಾಖಂಡದ ವಿರುದ್ಧದ ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕ ಸ್ಪಷ್ಟ ಮೇಲುಗೈ ಸಾಧಿಸಿದೆ. ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 474 ರನ್ ಗಳಿಸಿರುವ ಕರ್ನಾಟಕ 358 ರನ್ಗಳ ಬೃಹತ್ ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಉತ್ತರಾಖಂಡ ಕರ್ನಾಟಕದ ಮಾರಕ ಬೌಲಿಂಗ್ ದಾಲಿಕೆ ಸಿಲುಕಿ 116 ರನ್ಗಳಿಗೆ ಆಲೌಟ್ ಆಗಿತ್ತು. ಮುರಳೀಧರ ವೆಂಕಟೇಶ್ 5 ವಿಕೆಟ್ ಪಡೆದು ಮಿಂಚಿದರು.
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ನಾಯಕ ಮಯಾಂಕ್ ಅಗರ್ವಾಲ್ 83 ರನ್ ಗಳಿಸಿದರೆ, ಮತ್ತೊಬ್ಬ ಆರಂಭಿಕ ಆಟಗಾರ ರವಿಕುಮಾರ್ ಸಮರ್ಥ್ 82 ರನ್ ಗಳಿಸುವ ಮೂಲಕ ಕರ್ನಾಟಕದ ಬೃಹತ್ ಇನ್ನಿಂಗ್ಸ್ಗೆ ಉತ್ತಮ ಅಡಿಪಾಯ ಹಾಕಿದರು. ಮೊದಲನೇ ದಿನ ಇಬ್ಬರೂ ವಿಕೆಟ್ ಕಳೆದುಕೊಳ್ಳದೆ ಆಡಿದ್ದರೆ, ಎರಡನೇ ದಿನ ಬೇಗನೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ದೇವದತ್ ಪಡಿಕ್ಕಲ್ ಮತ್ತು ನಿಕಿನ್ ಜೋಸ್ ಇಬ್ಬರೂ ಉತ್ತಮ ಬ್ಯಾಟಿಂಗ್ ಮಾಡಿದರು.ಈ ಜೋಡಿ 118 ರನ್ಗಳ ಅಮೋಘ ಜೊತೆಯಾಟ ಆಡಿದರು. ದೇವದತ್ ಪಡಿಕ್ಕಲ್ 96 ರನ್ ಗಳಿಸಿದರೆ, ನಿಕಿನ್ ಜೋಸ್ 62 ರನ್ ಗಳಿಸಿದರು.
ನಂತರ ಬಂದ ಮನೀಶ್ ಪಾಂಡೆ 39 ರನ್ ಗಳಿಸುವಷ್ಟರಲ್ಲಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಆದರೂ ಶ್ರೇಯಸ್ ಗೋಪಾಲ್ಗೆ ಉತ್ತಮ ಸಾಥ್ ನೀಡುವ ಮೂಲಕ ಶತಕದ ಜೊತೆಯಾಟ ಆಡಿದರು. ಮನೀಶ್ ಪಾಂಡೆ ಮತ್ತು ಶ್ರೇಯಸ್ ಗೋಪಾಲ್ ಜೋಡಿ 108 ರನ್ಗಳನ್ನು ಕಲೆಹಾಕಿತು.

ಶ್ರೇಯಸ್ ಗೋಪಾಲ್ ಭರ್ಜರಿ ಶತಕ
ಶ್ರೇಯಸ್ ಗೋಪಾಲ್ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದರು. ಉಳಿದ ಬ್ಯಾಟರ್ ಗಳು ಭದ್ರ ಬುನಾದಿ ಹಾಕಿದರೆ ಶ್ರೇಯಸ್ ಗೋಪಾಲ್ ಶತಕ ಗಳಿಸುವ ಮೂಲಕ ಕರ್ನಾಟಕ ತಂಡ ಬೃಹತ್ ಮುನ್ನಡೆ ಪಡೆದುಕೊಳ್ಳಲು ಕಾರಣವಾದರು. 153 ಎಸೆತಗಳಲ್ಲಿ 13 ಬೌಂಡರಿ ಒಂದು ಭರ್ಜರಿ ಸಿಕ್ಸರ್ ಸಹಿತ ಅಜೇಯ 103 ರನ್ ಗಳಿಸುವ ಮೂಲಕ ಮೂರನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.
ಶ್ರೇಯಸ್ ಗೋಪಾಲ್ಗೆ ಜೊತೆಯಾಗಿರುವ ಬಿ ಆರ್ ಶರತ್ ಅಜೇಯ 23 ರನ್ ಗಳಿಸಿದ್ದು ಮೂರನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. ಈಗಾಗಲೇ 358 ರನ್ಗಳ ಬೃಹತ್ ಮುನ್ನಡೆ ಪಡೆದುಕೊಂಡಿರುವ ಕರ್ನಾಟಕ ಮೂರನೇ ದಿನ ಡಿಕ್ಲೇರ್ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಬೇಗನೆ ಪಂದ್ಯವನ್ನು ಗೆಲ್ಲುವ ಲೆಕ್ಕಾಚಾರದಲ್ಲಿದೆ.

ಸೆಮಿಫೈನಲ್ ಸನಿಹದಲ್ಲಿ ಕರ್ನಾಟಕ
ಈ ಬಾರಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದ್ದ ಉತ್ತರಾಖಂಡ ಮೊದಲನೇ ಸೋಲಿನ ಭೀತಿಯಲ್ಲಿದೆ. ಕರ್ನಾಟಕ ಕೂಡ ಇದುವರೆಗೂ ಅಜೇಯವಾಗಿ ಉಳಿದಿದ್ದು, ಈ ಪಂದ್ಯವನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸುವ ಉತ್ಸಾಹದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications