ಮೋಹಾಲಿ: ಭರವಸೆಯ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಬಾರಿಸಿದ ಅರ್ಧಶತಕ ಹಾಗೂ ವಿದ್ಯಾಧರ್ ಪಾಟೀಲ್ ಅವರ ಸಮಯೋಚಿತ ಆಟದ ನೆರವಿನಿಂದ ಕರ್ನಾಟಕ ರಣಜಿ ಟ್ರೋಫಿ ಎಲೈಟ್ ಬಿ ಗುಂಪಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ಶನಿವಾರ 6 ವಿಕೆಟ್ ನಷ್ಟಕ್ಕೆ 255 ರನ್ಗಳಿಂದ ಮೊದಲ ಇನಿಂಗ್ಸ್ ಮುಂದುವರೆಸಿದ ಕರ್ನಾಟಕ 316 ರನ್ಗಳಿಗೆ ಆಲೌಟ್ ಆಯಿತು. ಕರ್ನಾಟಕದ ಪರ ಸ್ಟಾರ್ ಆಲ್ರೌಂಡರ್ ಶ್ರೇಯಸ್ ಗೋಪಾಲ್ 195 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 77 ರನ್ ಬಾರಿಸಿ ಮಿಂಚಿದರು. ಇವರ ಸಮಯೋಚಿತ ಆಟದ ಪರಿಣಾಮವೇ ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಲು ನೆರವಾಯಿತು. ವಿದ್ಯಾಧರ್ ಪಾಟೀಲ್ 6 ಬೌಂಡರಿ ನೆರವಿನಿಂದ 34 ರನ್ ಸಿಡಿಸಿದರು.

ಎರಡನೇ ಇನಿಂಗ್ಸ್ ಆರಂಭಿಸಿದ ಪಂಜಾಬ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಪ್ರಭಸಿಮ್ರನ್ ಸಿಂಗ್ ಎರಡನೇ ಇನಿಗ್ಸ್ನಲ್ಲೂ ನಿರಾಸೆ ಅನುಭವಿಸಿದರು. ಇವರು 11 ರನ್ ಬಾರಿಸಿ ಮುನ್ನಗುತ್ತಿದ್ದಾಗ ಶಿಖರ್ ಶೆಟ್ಟಿ ತೋಡಿದ ಖೆಡ್ಡಾಗೆ ಬಲಿಯಾದರು. ಎರಡನೇ ವಿಕೆಟ್ಗೆ ಅಭಿಜೀತ್ ಗರ್ಗ್, ಉದಯ್ ಸಹಾರನ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 53 ರನ್ ಸೇರಿಸಿ ಮುನ್ನಗುತ್ತಿದ್ದಾಗ ಅಭಿಜೀತ್ ಗರ್ಗ್ 4 ಬೌಂಡರಿ ನೆರವಿನಿಂದ 33 ರನ್ ಸಿಡಿಸಿ ಔಟ್ ಆದರು. ಜಶನ್ಪ್ರೀತ್ ಸಿಂಗ್ 5 ರನ್ಗಳಿಗೆ ಆಟ ಮುಗಿಸಿದರು.
ಮೂರನೇ ದಿನಕ್ಕೆ ನಾಯಕ ಉದಯ್ ಸಹಾರನ್ ಹಾಗೂ ಅನ್ಮೋಲ್ಪ್ರೀತ್ ಸಿಂಗ್ ಜೋಡಿ ಬ್ಯಾಟಿಂಗ್ ಕಾಯ್ದುಕೊಡಿದೆ. ಈ ವೇಳೆ ನಾಯಕ ಉದಯ್ ಸಹಾರನ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ಅರ್ಧಶತಕ ಸಿಡಿಸಿದ್ದಾರೆ. ಅಂತಿಮವಾಗಿ ಪಂಜಾಬ್ ದಿನದಾಟದಂತ್ಯಕ್ಕೆ 3 ವಿಕೆಟ್ಗೆ 119 ರನ್ ಕಲೆ ಹಾಕಿದೆ. ನಾಲ್ಕನೇ ದಿನದಾಟದಲ್ಲಿ ಕರ್ನಾಟಕ ಮೊದಲ ಅವಧಿಯಲ್ಲಿ ಬಿಗುವಿನ ದಾಳಿ ನಡೆಸಿ ಎದುರಾಳಿಗಳನ್ನು ಕಾಡುವ ಅನಿವಾರ್ಯತೆ ಇದೆ. ಇನ್ನು ಕರ್ನಾಟಕ ಈ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಸಾಧಿಸಿ ಮುಂದಿನ ಹಂತವನ್ನು ಪ್ರವೇಶಿಸುವ ಆಸೆ ಜೀವಂತವಾಗಿರಿಸಿಕೊಂಡಿದೆ. ಕರ್ನಾಟಕ ಬಿ ಗುಂಪಿನ ಪಂದ್ಯದಲ್ಲಿ ಆಡಿದ 6 ಪಂದ್ಯಗಳಲ್ಲಿ 2 ಜಯ, 1 ಸೋಲು ಕಂಡಿದೆ. ಅಲ್ಲದೆ 3 ಡ್ರಾ ಸಾಧಿಸಿದ್ದು, 21 ಅಂಕವನ್ನು ಕಲೆ ಹಾಕಿದೆ.