
ನಾಗ್ಪುರ, ನವೆಂಬರ್ 14: ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 2018-19ರ ಎಲೈಟ್ ಗ್ರೂಪ್ ಎಯ ಎರಡನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ತಂಡ ವಿದರ್ಭ ಎದುರು ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆಯತ್ತ ಸಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಆತಿಥೇಯ ವಿದರ್ಭ ತಂಡ ಮಂಗಳವಾರ (ನವೆಂಬರ್ 13) ಎರಡನೇ ದಿನದಾಂತ್ಯದಲ್ಲಿ 102.2 ಓವರ್ ನಲ್ಲಿ ಎಲ್ಲಾ ವಿಕೆಟ್ ಕಳೆದು 307 ರನ್ ಪೇರಿಸಿತ್ತು. ಗಣೇಶ್ ಸತೀಶ್ 57, ವಾಸಿಮ್ ಜಾಫರ್ 41, ಶ್ರೀಕಾಂತ್ ವಾಘ್ 57 ರನ್ ಪೇರಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ನೆರವಾದರು.
ವಿದರ್ಭ ಮೊದಲ ಇನ್ನಿಂಗ್ಸ್ ನಲ್ಲಿ ಕರ್ನಾಟಕ ಪರ ಅಭಿಮನ್ಯು ಮಿಥುನ್ 3, ಜಗದೀಶ್ ಸುಚಿತ್ 4, ನಾಯಕ ವಿನಯ್ ಕುಮಾರ್ 2 ವಿಕೆಟ್ ಕೆಡವಿ ರನ್ ಕದಿಯುವಿಕೆಗೆ ತಡೆಯೊಡ್ಡಿದರು. ಮೊದಲ ಇನ್ನಿಂಗ್ಸ್ ಗೆ ಇಳಿದ ಕರ್ನಾಟಕ ಮಂಗಳವಾರ ದಿನದಾಂತ್ಯಕ್ಕೆ ಡಿ. ನಿಶ್ಚಲ್ 66, ಶರತ್ ಬಿಆರ್ 46 ರನ್ ನೆರವಿನೊಂದಿಗೆ 72 ಓವರ್ ಮುಕ್ತಾಯಕ್ಕೆ 5 ವಿಕೆಟ್ ಕಳೆದು 208 ರನ್ ಪೇರಿಸಿದೆ.
ಕರ್ನಾಟಕ ಆರಂಭಕ ಆಟಗಾರರಾದ ರವಿಕುಮಾರ್ ಸಮರ್ಥ್ 1, ಕೃಷ್ಣಮೂರ್ತಿ ಸಿದ್ಧಾರ್ಥ್ 19, ಸ್ಟುವರ್ಟ್ ಬಿನ್ನಿ 30 ರನ್ನಿಗೆ ವಿಕೆಟ್ ಒಪ್ಪಿಸಿದ್ದು ಕೊಂಚ ಹಿನ್ನಡೆಯಾಗಿ ಪರಿಣಮಿಸಿತು. ಆದರೆ ಮೂರನೇ ದಿನದಾಟದಲ್ಲಿ ಕರ್ನಾಟಕ ಉತ್ತಮ ರನ್ ಕಲೆ ಹಾಕುವ ಸಾಧ್ಯತೆಯಿದೆ. ನಿಶ್ಚಲ್ ಮತ್ತು ಶರತ್ ಕ್ರೀಸ್ ನಲ್ಲಿದ್ದಾರೆ.