
ನಾಗ್ಪುರ, ಫೆಬ್ರವರಿ 7: ಸೌರಾಷ್ಟ್ರ ದ್ವಿತೀಯ ಇನ್ನಿಂಗ್ಸ್ನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಆದಿತ್ಯ ಸರ್ವತೆ, ನಾಗ್ಪುರದಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿದರ್ಭಕ್ಕೆ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದಾರೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಿದರ್ಭ ತಂಡ ಸೌರಾಷ್ಟ್ರ ವಿರುದ್ಧ 78 ರನ್ ಅಮೋಘ ಜಯ ಸಾಧಿಸಿದೆ.
ದ್ವಿತೀಯ ಇನ್ನಿಂಗ್ಸ್ನಲ್ಲಿ ವಿದರ್ಭ ನೀಡಿದ್ದ 205 ರನ್ ಗುರಿ ಬೆನ್ನತ್ತಿದ ಸೌರಾಷ್ಟ್ರ, ಕಳಪೆ ಬ್ಯಾಟಿಂಗ್ ಬೆಲೆ ತೆರಬೇಕಾಯ್ತು. ದ್ವಿತೀಯ ಇನ್ನಿಂಗ್ಸ್ನಲ್ಲಿ ಸೌರಾಷ್ಟ್ರದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಸೊನ್ನೆಗೆ ಔಟ್ ಆಗಿದ್ದೂ ಹಿನ್ನಡೆಗೆ ಕಾರಣವಾಯ್ತು. ಜಯದೇವ್ ಉನಾದ್ಕತ್ ಬಳಗ ದ್ವಿತೀಯ ಇನ್ನಿಂಗ್ಸ್ನಲ್ಲಿ 58.4 ಓವರ್ಗೆ 127 ರನ್ ಪೇರಿಸಿ ಶರಣಾಯಿತು.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಆತಿಥೇಯ ವಿದರ್ಭ ತಂಡಕ್ಕೆ ಆರಂಭಿಕ ಇನ್ನಿಂಗ್ಸ್ನಲ್ಲಿ ಅಕ್ಷಯ್ ಕಾರ್ನೇವಾರ್ 73, ಅಕ್ಷಯ್ ವಾಡೇಕರ್ 45 ರಸ್ ಸೇರಿಸಿ ಬಲ ತುಂಬಿದರು. ತಂಡ 120.2 ಓವರ್ಗಳಲ್ಲಿ 312 ರನ್ ಗಳಿಸಿತ್ತು. ಸ್ನೆಲ್ ಪಟೇಲ್ 102, ನಾಯಕ ಜಯದೇವ್ ಉನಾದ್ಕತ್ 46 ರನ್ ನೆರವಿನಿಂದ ಸೌರಾಷ್ಟ್ರ 117 ಓವರ್ಗಳಲ್ಲಿ 307 ರನ್ ಕಲೆ ಹಾಕಿತು.
ದ್ವಿತೀಯ ಇನ್ನಿಂಗ್ಸ್ನಲ್ಲಿ ವಿದರ್ಭ 92.5 ಓವರ್ಗಳಲ್ಲಿ 200 ರನ್ ಸೇರಿಸಿತ್ತು. ಅಂತಿಮ ಇನ್ನಿಂಗ್ಸ್ಗೆ ಇಳಿದ ಸೌರಾಷ್ಟ್ರ ಪ್ರಮುಖ ವಿಕೆಟ್ ಗಳನ್ನು ಬೇಗನೆ ಕಳೆದುಕೊಂಡಿತು. ಹಾರ್ವಿಕ್ ದೇಸಾಯ್ 8, ಸ್ನೆಲ್ 12, ಪೂಜಾರ 0, ಆರ್ಪಿತ್ ವಾಸವಾಡ 7 ರನ್ನಿಗೆ ನಿರ್ಗಮಿಸಿದರು. ಅಂತೂ ಪ್ರಶಸ್ತಿ ಗೆಲ್ಲುವ ಸೌರಾಷ್ಟ್ರ ಕನಸು ಮಣ್ಣುಪಾಲಾಗಿದೆ.
ಸೌರಾಷ್ಟ್ರಪರ ನಾಯಕ ಉನಾದ್ಕತ್ 3+1, ಧರ್ಮೇಂದ್ರ ಸಿಂಹ ಜಡೇಜಾ 1+6, ಕಮಲೇಶ್ ಮಕ್ವಾನ 2+2 ವಿಕೆಟ್ ಪಡೆದರೆ, ವಿದರ್ಭ ಪರ ಆದಿತ್ಯ ಸರ್ವತೆ 5+6, ಅಕ್ಷಯ್ ವಾಖರೆ 4+3 ವಿಕೆಟ್ನೊಂದಿಗೆ ಮಿಂಚಿದರು. ಆದಿತ್ಯ ಸರ್ವತೆ ಪಂದ್ಯಶ್ರೇಷ್ಠರೆನಿಸಿದರು.