ರಣಜಿ ಟ್ರೋಫಿ ಟೂರ್ನಿಯಲ್ಲಿ ಜನವರಿ 23ರಿಂದ ಆರಂಭವಾಗಲಿರುವ ಸೌರಾಷ್ಟ್ರ ವಿರುದ್ಧ ದೆಹಲಿಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಅವರ ಕುತ್ತಿಗೆಯಲ್ಲಿ ಉಳುಕು ಉಂಟಾಗಿದ್ದು, ನೋವು ಕಡಿಮೆ ಮಾಡಲು ಇಂಜೆಕ್ಷನ್ ಕೂಡ ತೆಗೆದುಕೊಂಡಿದ್ದಾರೆ. ಆದರೆ, ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ವಿರಾಟ್ ಕೊಹ್ಲಿ ಆಡುವ ಬಗ್ಗೆಇನ್ನೂ ಯಾವುದೇ ಅಪ್ಡೇಟ್ ನೀಡಿಲ್ಲ. ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಅವರ ಫಾರ್ಮ್ ಅನ್ನು ನೋಡಿದರೆ, ಅವರು ದೆಹಲಿ ಪರ ರಣಜಿ ಪಂದ್ಯವನ್ನಾಡುತ್ತಾರೆ ಎಂದು ಹಲವರು ನಿರೀಕ್ಷಿಸಿದ್ದರು. ಆದರೆ ಸದ್ಯಕ್ಕೆ ಇದು ನಡೆಯುವುದು ಕಷ್ಟ ಎಂದು ವರದಿಗಳಾಗಿವೆ.
ವಿರಾಟ್ ಕೊಹ್ಲಿ ಅವರ ಕುತ್ತಿಗೆ ಉಳುಕಿರುವುದರಿಂದ ಸೌರಾಷ್ಟ್ರ ವಿರುದ್ಧ ಬಹುತೇಕ ಅನುಮಾನವಾಗಿದೆ. ಇನ್ನುಳಿದ ಮೊದಲೆರಡು ರಣಜಿ ಪಂದ್ಯಗಳಲ್ಲಿ ಅವರು ಆಡದಿರುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ಕನಿಷ್ಠ ದೆಹಲಿ ತಂಡದೊಂದಿಗೆ ತರಬೇತಿಯಲ್ಲಿ ಭಾಗವಹಿಸಬಹುದು ಅಂದುಕೊಳ್ಳಲಾಗಿತ್ತು. ಆದರೆ, ಅವರ ಕುತ್ತಿಗೆಯ ಗಾಯವನ್ನು ಗಮನಿಸಿದರೆ, ವಿರಾಟ್ ಕೊಹ್ಲಿ ರಾಜ್ಕೋಟ್ನಲ್ಲಿ ದೆಹಲಿ ತಂಡವನ್ನು ಸೇರುವುದು ಕಷ್ಟಕರವಾಗಿದೆ.

ವಿರಾಟ್ ಕೊಹ್ಲಿ ಪ್ರಸ್ತುತ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂನಿಯಲ್ಲಿ ಭಾರತ ವಿಶೇಷ ಸಾಧನೆ ಮಾಡಲು ವಿರಾಟ್ ಕೊಹ್ಲಿ ಪ್ರದರ್ಶನ ಪ್ರಮುಖವಾಗಿದೆ. ಇದಕ್ಕೆ ಅವರು ಫಾರ್ಮ್ಗೆ ಮರಳಬೇಕಾಗಿದೆ. ಇಂತಹ ಸಂದರ್ಭದಲ್ಲಿ ಅವರು ರಣಜಿ ಪಂದ್ಯದಲ್ಲಿ ಹೊರಗುಳಿದಿರುವುದು ಕೊಹ್ಲಿ ಅಭಿಮಾನಿಗಳಿಗೆ ಬೇಸರ ತರಿಸಿದೆ.
ದೆಹಲಿ ತಂಡ ಜನವರಿ 20 ರಂದು ರಾಜ್ಕೋಟ್ಗೆ ತೆರಳಲಿದ್ದು, ಪಂದ್ಯದ ಆರಂಭಕ್ಕೂ ಮುನ್ನ ಎರಡು ದಿನ ಅಭ್ಯಾಸ ನಡೆಸಲಿದೆ. ವಿರಾಟ್ ಕೊಹ್ಲಿ ಲಭ್ಯವಿದ್ದರೆ ಅವರ ಹೆಸರು ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಡಿಡಿಸಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹಿಂದೆ ರಿಷಬ್ ಪಂತ್ ಸೌರಾಷ್ಟ್ರ ವಿರುದ್ಧದ ಪಂದ್ಯಕ್ಕೆ ಲಭ್ಯರಿರುವುದಾಗಿ ಘೋಷಿಸಿದ್ದರು.
ರಿಷಬ್ ಪಂತ್ ದೆಹಲಿ ತಂಡದ ನಾಯಕತ್ವ ವಹಿಸಲಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ರಾತ್ರಿಯೇ ಟೀ ಇಂಡಿಯಾದ ಆಟಗಾರರಿಗೆ ಹೊಸ ನೀತಿಯನ್ನು ಜಾರಿಗೆ ತಂದಿದೆ. ಈ ನೀತಿಯಲ್ಲಿ ಹಲವು ಕಟ್ಟುನಿಟ್ಟಿನ ನಿಯಮಗಳಿವೆ. ನಿಯಮ ಉಲ್ಲಂಘಿಸಿದ ಟೀಮ್ ಇಂಡಿಯಾ ಆಟಗಾರರಿಗೆ ಶಿಕ್ಷೆಯಾಗಲಿದೆ.
ಬಿಸಿಸಿಐನ ಹೊಸ ನಿಯಮಗಳಲ್ಲಿ ಎಲ್ಲಾ ಆಟಗಾರರು ದೇಶೀಯ ಪಂದ್ಯಗಳಲ್ಲಿ ಆಡುವುದು ಕಡ್ಡಾಯವಾಗಿದೆ. ಅದನ್ನು ಪಾಲಿಸದಿದ್ದರೆ ಬಿಸಿಸಿಐ ಶಿಸ್ತು ಕ್ರಮ ಕೈಗೊಳ್ಳಬಹುದು ಎಂದು ಹೊಸ ನಿಯಮದಲ್ಲಿ ಹೇಳಲಾಗಿದೆ. ಇದಲ್ಲದೆ, ಬಿಸಿಸಿಐ ಯಾವುದೇ ಆಟಗಾರನ ವಿರುದ್ಧ ಶಿಸ್ತಿನ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಕಾಯ್ದಿರಿಸಿದೆ. ಇದು ಐಪಿಎಲ್ ಸೇರಿದಂತೆ ಬಿಸಿಸಿಐ ನಡೆಸುವ ಎಲ್ಲಾ ಟೂರ್ನಿಗಳಲ್ಲಿ ಭಾಗವಹಿಸುವುದನ್ನು ತಡೆಯಲಿದೆ.