
ವಡೋದರಾ, ಡಿಸೆಂಬರ್ 12: ದೇಸಿ ಕ್ರಿಕೆಟ್ನಲ್ಲಿ ಕೆಟ್ಟ ಅಂಪೈರಿಂಗ್ಗೆ ಮತ್ತೊಂದು ಪಂದ್ಯ ಸಾಕ್ಷಿಯಾಗಿದೆ. ಮುಂಬೈ ಮತ್ತು ಬರೋಡಾ ನಡುವಿನ ರಣಜಿ ಟ್ರೋಫಿ ಮೊದಲ ಸುತ್ತಿನ ಪಂದ್ಯದಲ್ಲಿ ಕೆಟ್ಟ ಅಂಪೈರಿಂಗ್ಗೆ ಬರೋಡಾ ಆಲ್ ರೌಂಡರ್ ಯೂಸುಫ್ ಪಠಾಣ್ ಬಲಿಯಾಗಬೇಕಾಯಿತು.
ವಡೋದರದ ರಿಲಯನ್ಸ್ ಸ್ಟೇಡಿಯಂನಲ್ಲಿ ಗುರುವಾರ (ಡಿಸೆಂಬರ್ 12) ನಡೆದ, ರಣಜಿ ಟ್ರೋಫಿ ಎಲೈಟ್ ಗ್ರೂಪ್ ಎ ಮತ್ತು ಬಿ ಪಂದ್ಯದಲ್ಲಿ ಔಟಿಲ್ಲದೆಯೂ ಔಟ್ ತೀರ್ಪಿನ ಕಾರಣಕ್ಕಾಗಿ ಪಠಾಣ್ ಮತ್ತು ರಹಾನೆ ಮಧ್ಯೆ ಸಣ್ಣ ಮಟ್ಟಿನ ಮಾತಿನ ಚಕಮಕಿಯೂ ನಡೆದಿದ್ದು ಕಂಡುಬಂತು.
ಬರೋಡಾ ಇನ್ನಿಂಗ್ಸ್ನ 41ನೇ ಓವರ್ನಲ್ಲಿ ಮುಂಬೈ ಸ್ಪಿನ್ನರ್ ಶಶಾಂಕ್ ಅಥರ್ಡೆ ಪಠಾಣ್ರತ್ತ ಲೂಪಿ ಎಸೆತ ಎಸೆದರು. ಯೂಸುಫ್ ಹೊಡೆತಕ್ಕೆ ಮುಂದಾದರು. ಆದರೆ ಜಿಗಿದ ಚೆಂಡು ಪಠಾಣ್ ಎದೆಗೆ ಬಡಿದು ಶಾರ್ಟ್ ಲೆಗ್ ನಲ್ಲಿದ್ದ ಫೀಲ್ಡರ್ ಜಯ್ ಬಿಷ್ತಾ ಕೈ ಸೇರಿತು. ಮುಂಬೈ ಆಟಗಾರರ ದೀರ್ಘ ಅಪೀಲ್ನ ಬಳಿಕ ಅಂಪೈರ್ ಕೈ ಬೆರಳು ತೋರಿಸಿದರು.
ಅಂಪೈರ್ ನೀಡಿದ ಔಟ್ ತೀರ್ಪು ಯೂಸುಫ್ಗೆ ಆಘಾತ ನೀಡಿತು. ಅವರು ಕ್ರೀಸ್ ಬಿಟ್ಟು ಕದಲಲಿಲ್ಲ. ಮುಂಬೈ ಆಟಗಾರರು ವಿಕೆಟ್ ಲಭಿಸಿದ್ದಕ್ಕೆ ಸಂಭ್ರಮಾಚರಿಸಿದರೂ ಪಠಾಣ್ ಕ್ರೀಸ್ನಿಂದ ಅಲುಗಾಡಲಿಲ್ಲ. ಈ ವೇಳೆ ಮಂಬೈ ಆಟಗಾರ ಅಜಿಂಕ್ಯ ರಹಾನೆ ಮತ್ತು ಪಠಾಣ್ ಮಧ್ಯೆ ಮಾತಿನ ಗುದ್ದಾಟ ನಡೆಯಿತು. ಅಂದ್ಹಾಗೆ, ಪಂದ್ಯದಲ್ಲಿ ಮುಂಬೈ 309 ರನ್ ಜಯ ಗಳಿಸಿದೆ.