ಮಂಗಳವಾರದಿಂದ ಯುಎಇನಲ್ಲಿ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾಗವಹಿಸಲು ಟೀಮ್ ಇಂಡಿಯಾ ಸೇರಿದಂತೆ ಎಂಟು ರಾಷ್ಟ್ರಗಳು ಯುಎಇನತ್ತ ಮುಖ ಮಾಡಿವೆ. ಇನ್ನು ಪ್ರತಿಷ್ಠಿತ ಟೂರ್ನಿಗಾಗಿ ಟೀಮ್ ಇಂಡಿಯಾ ಬಲಾಢ್ಯ ತಂಡವನ್ನು ಪ್ರಕಟಿಸಿದೆ. ಈ ವೇಳೆ ತಂಡದಲ್ಲಿ ಸ್ಟಾರ್ ಆಟಗಾರರ ಗೊಂಚಲೇ ಇದ್ದು, ಯಾರಿಗೆ ಸ್ಥಾನ ಲಭಿಸುತ್ತದೆ ಎಂಬುದೇ ಕುತೂಹಲ ಹೆಚ್ಚಿಸಿದೆ. ಭಾರತ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಸಂಜು ಸ್ಯಾಮ್ಸನ್ ಅವರ ಸ್ಥಾನ ಇನ್ನು ಖಚಿತವಾಗಿಲ್ಲ. ಈ ಬಗ್ಗೆ ಟೀಮ್ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ ಮೌನ ಮುರಿದಿದ್ದಾರೆ.
ಟೀಮ್ ಇಂಡಿಯಾಕ್ಕೆ ಶುಭಮನ್ ಗಿಲ್ ಒಂದು ವರ್ಷದ ಬಳಿಕ ಚುಟುಕು ಫಾರ್ಮೆಟ್ಗೆ ಕಂ ಬ್ಯಾಕ್ ಮಾಡಿದ್ದಾರೆ. ಅಲ್ಲದೆ ಇವರಿಗೆ ಆಯ್ಕೆ ಸಮಿತಿ ಉಪನಾಯಕನ ಜವಾಬ್ದಾರಿಯನ್ನು ನೀಡಿದೆ. ಹೀಗಾಗಿ ಇವರನ್ನು ಪ್ಲೇಯಿಂಗ್ ಇಲೆವೆನ್ ನಿಂದ ಕೈ ಬಿಡುವುದು ಕಷ್ಟ. ಹೀಗಾಗಿ ಸಂಜು ಸ್ಯಾಮ್ಸನ್ ಅವರ ಸ್ಥಾನದ ಮೇಲೆ ಅಪಾಯದ ತೂಗುತ್ತಿ ನೇತಾಡುತ್ತಿದೆ. ಕಳೆದ ವರ್ಷ ಟಿ20 ವಿಶ್ವಕಪ್ ನಂತರ ಆರಂಭಿಕ ಆಟಗಾರನ ಜವಾಬ್ದಾರಿಯನ್ನು ಸಾಮನ್ಸ್ ಸಮರ್ಥವಾಗಿ ನಿಭಾಯಿಸಿದ್ದಾರೆ.

ರೋಹಿತ್ ಶರ್ಮಾ ಅವರಿಂದ ತೆರವಾದ ಸ್ಥಾನಕ್ಕೆ ನ್ಯಾಯ ತುಂಬಿದ ಆಟಗಾರ ಸಂಜು ಸ್ಯಾಮ್ಸನ್. ಇವರು ಕಳೆದ ವರ್ಷ ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡಿದ್ದಾರೆ. ಇವರು ಆಡಿದ12 ಪಂದ್ಯಗಳಲ್ಲಿ 37.90 ಸರಾಸರಿಯಲ್ಲಿ, 417 ರನ್ ಗಳಿಸಿದ್ದಾರೆ. ಈಗ ಇವರನ್ನು ತಂಡದಿಂದ ಕೈ ಬಿಟ್ಟರೆ ಹೇಗೆ ಎಂಬ ಪ್ರಶ್ನೆಗಳನ್ನು ಮಾಜಿ ಆಟಗಾರರು ಕೇಳುತ್ತಿದ್ದಾರೆ. ಅಲ್ಲದೆ ಶುಭಮನ್ ಗಿಲ್ ಅವರ ಹಠಾತ್ ಎಂಟ್ರಿ ಸಮಸ್ಯೆಗಳನ್ನು ಹೆಚ್ಚಿಸಿದೆ.
ಸಂಜು ಸ್ಯಾಮ್ಸನ್ ಅವರ ಬಗ್ಗೆ ಟೀಮ್ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ ದೊಡ್ಡ ಹೇಳಿಕೆ ನೀಡಿದ್ದಾರೆ. ಸಂಜು ಅವರನ್ನು ಆರಂಭಿಕ ಸ್ಥಾನದಿಂದ ತೆಗೆಯುವುದು ಸರಿಯಲ್ಲ. ಇವರು ಅಗ್ರ ಕ್ರಮಾಂಕದಲ್ಲಿ ಅಪಾಯಕಾರಿ ಬ್ಯಾಟರ್. ಇವರನ್ನು ಟಾಪ್ ಆರ್ಡರ್ನಲ್ಲಿ ಮಾತ್ರ ಆಡಿಸಬೇಕು ಎಂದು ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.

ಪ್ಲೇಯಿಂಗ್ ಇಲೆವೆನ್ನಲ್ಲಿ ಶುಭಮನ್ ಗಿಲ್ ಸ್ಥಾನ ಪಡೆಯಬೇಕಾದಲ್ಲಿ ಬೇರೆ ಆಟಗಾರನ ಸ್ಥಾನಕ್ಕೆ ಕುತ್ತು ಬರಬಹುದು. ಆದರೆ ಸಂಜು ಸ್ಥಾನಕ್ಕೆ ಕುತ್ತು ತರವುದು ತಂಡದ ಹಿತದ ದೃಷ್ಟಿಯಿಂದ ಸರಿಯಲ್ಲ ಎಂದು ತಿಳಿಸಿದ್ದಾರೆ. ಏಷ್ಯಾ ಕಪ್ಗೆ ಟೀಮ್ ಇಂಡಿಯಾ ಯುಎಇಗೆ ಪ್ರವಾಸ ಬೆಳೆಸುವ ಮುನ್ನ, ಸಂಜು ಸ್ಯಾಮ್ಸನ್ ಕೇರಳ ಟಿ20 ಲೀಗ್ನಲ್ಲಿ ಆಡಿದ್ದಾರೆ. ಈ ಟೂರ್ನಿಯಲ್ಲಿ ಸಂಜು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಿದ್ದಾರೆ. ಅಲ್ಲದೆ ಬ್ಯಾಕ್ ಟು ಬ್ಯಾಕ್ ಅರ್ಧಶತಕಗಳನ್ನು ಸಿಡಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಇವರು ಭರ್ಜರಿ ಲಯದಲ್ಲಿದ್ದಾಗ ಇವರನ್ನು ತಂಡದಿಂದ ಕೈ ಬಿಡುವುದು ಸರಿಯಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.