
ಟೀಮ್ ಇಂಡಿಯಾದ ಮೂವರು ಕೋಚ್ಗಳ ಬದಲಾವಣೆ ಸಾಧ್ಯತೆ
ಇದೀಗ ಬಂದಿರುವ ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಟೀಮ್ ಇಂಡಿಯಾದ ಮೂವರು ತರಬೇತುದಾರರ ಬದಲಾವಣೆಯಾಗುವುದು ಖಚಿತ ಎನ್ನಲಾಗುತ್ತಿದೆ. ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಟೀಮ್ ಇಂಡಿಯಾದ ಹೆಡ್ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಈ ಮೂವರೂ ಸಹ ತಮ್ಮ ಸ್ಥಾನಗಳಿಂದ ಕೆಳಗಿಳಿಯಲಿದ್ದು ನೂತನ ತರಬೇತುದಾರರನ್ನು ಬಿಸಿಸಿಐ ಆಯ್ಕೆ ಮಾಡಲಿದೆ. ಆದರೆ ಬ್ಯಾಟಿಂಗ್ ಕೋಚ್ ಆಗಿರುವ ವಿಕ್ರಂ ರಾಥೋರ್ ಮಾತ್ರ ಸೇವೆಯಲ್ಲಿ ಮುಂದುವರಿಯಲಿದ್ದಾರೆ ಎನ್ನಲಾಗುತ್ತಿದೆ.

ಕೋಚ್ ಆಗಿ ಮುಂದುವರಿಯಲು ಶಾಸ್ತ್ರಿ ಸಹ ಸಿದ್ಧರಿಲ್ಲ
ಇನ್ನು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ನಂತರ ಟೀಮ್ ಇಂಡಿಯಾದ ಹೆಡ್ ಕೋಚ್ ಸ್ಥಾನದಿಂದ ರವಿಶಾಸ್ತಿ ಕೆಳಗಿಳಿಯಲಿದ್ದಾರೆ ಎನ್ನಲಾಗುತ್ತಿದ್ದು ಕೋಚ್ ಆಗಿ ಸೇವೆ ಸಲ್ಲಿಸಲು ಸ್ವತಃ ರವಿಶಾಸ್ತ್ರಿ ಅವರಿಗೂ ಇಷ್ಟವಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. ಈ ಹಿಂದೆ 2017ರಿಂದ 2019ರ ಅವಧಿಯವರೆಗೆ ತರಬೇತುದಾರನಾಗಿ ಸೇವೆಸಲ್ಲಿಸಿದ್ದ ರವಿಶಾಸ್ತ್ರಿ 2019ರ ನಂತರವೂ ಸಹ ಕೋಚ್ ಆಗಿ ಮುಂದುವರಿಯಲು ಇಚ್ಛಿಸಿ ಇಲ್ಲಿಯವರೆಗೂ ಸೇವೆ ಸಲ್ಲಿಸಿದ್ದಾರೆ. ಆದರೆ ಈ ಬಾರಿ ಪುನಃ ಕೋಚ್ ಆಗಿ ಮುಂದುವರಿಯಲು ರವಿಶಾಸ್ತ್ರಿ ಸಿದ್ಧರಿಲ್ಲ ಎನ್ನಲಾಗುತ್ತಿದೆ.

ನೂತನ ಕೋಚ್ ಆಯ್ಕೆಗೆ ಅರ್ಜಿ ಆಹ್ವಾನಿಸಲಿದೆ ಬಿಸಿಸಿಐ
ಇನ್ನು ಭಾರತದ ಮೂವರು ತರಬೇತುದಾರರು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ನಂತರ ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದು, ಆ ಸ್ಥಾನಗಳಿಗೆ ನೂತನ ತರಬೇತುದಾರರನ್ನು ಆಯ್ಕೆ ಮಾಡಲು ಬಿಸಿಸಿಐ ಅರ್ಜಿಗಳನ್ನು ಆಹ್ವಾನಿಸಲಿದೆ ಎನ್ನಲಾಗುತ್ತಿದೆ. ಅರ್ಜಿಗಳನ್ನು ಸಲ್ಲಿಸಿದ ಅಭ್ಯರ್ಥಿಗಳ ವಿಶೇಷ ಸಂದರ್ಶನವನ್ನು ಮಾಡಿದ ನಂತರ ಅರ್ಹ ಅಭ್ಯರ್ಥಿಗಳನ್ನು ತರಬೇತುದಾರರಾಗಿ ನೇಮಿಸಲಾಗುವುದು ಎಂಬ ಸುದ್ದಿ ಇದೆ.


Click it and Unblock the Notifications
