ಇಂಡಿಯನ್ ಪ್ರೀಮಿಯರ್ ಲೀಗ್ನ ಈ ಬಾರಿಯ ಆವೃತ್ತಿಯ ಕೊನೆಯ ಹಂತಕ್ಕೆ ತಲುಪಿದೆ. ಈ ಬಾರಿಯ ಐಪಿಎಲ್ನಲ್ಲಿ ಅನೇಕ ಆಟಗಾರರು ಸ್ಥಿರ ಪ್ರದರ್ಶನ ನೀಡಿ ಗಮನಸೆಳದಿದ್ದಾರೆ. ಟೂರ್ನಿಯಲ್ಲಿ ಒಂದು ತಂಡ ಮಾತ್ರವೇ ಅಧಿಕೃತವಾಗಿ ಪ್ಲೇಆಫ್ಗೆ ಅವಕಾಶ ಪಡದರೆ ಉಳಿದ ತಂಡಗಳು ಇನ್ನು ಕೂಡ ಆ ನಿಟ್ಟಿನಲ್ಲಿ ತಮ್ಮ ಹೋರಾಟವನ್ನು ಮುಂದುವರಿಸಿದೆ. ಈ ಸಂದರ್ಭದಲ್ಲಿ ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ಏಕದಿನ ವಿಶ್ವಕಪ್ ದೃಷ್ಟಿಯಿಂದ ಪ್ರಮುಖ ಹೇಳಿಕೆಯೊಂದನ್ನು ನೀಡಿದ್ದಾರೆ.
ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದ್ದು ಈ ಟೂರ್ನಿಯ ಆಯ್ಕೆಯಲ್ಲಿ ಐಪಿಎಲ್ನಲ್ಲಿ ಮಿಂಚಿದ ಕೆಲ ಯುವ ಆಟಗಾರರನ್ನು ಪರಿಗಣಿಸುವಂತೆ ರವಿ ಶಾಸ್ತ್ರಿ ಒತ್ತಾಯಿಸಿದ್ದಾರೆ. ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್ ಮತ್ತು ತಿಲಕ್ ವರ್ಮಾ ಅವರನ್ನು ಕೊನೆಯ ಹಂತದಲ್ಲಿ ಪರಿಗಣಿಸಬೇಕು ಎಂದಿದ್ದಾರೆ ಮಾಜಿ ಕೋಚ್ ರವಿ ಶಾಸ್ತ್ರಿ.

ಈ ಬಾರಿಯ ಐಪಿಎಲ್ನಲ್ಲಿ ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್ ಹಾಗೂ ತಿಲಕ್ ವರ್ಮಾ ಅವರಿಂದ ಅದ್ಭುತ ಪ್ರದರ್ಶನ ಬಂದಿದ್ದು ಈ ಆಟಗಾರರ ಪ್ರದರ್ಶನಕ್ಕೆ ಕ್ರಿಕೆಟ್ ದಿಗ್ಗಜರು ಕೂಡ ಬೆರಗಾಗಿದ್ದಾರೆ. ಅದರಲ್ಲೂ ಆರ್ಆರ್ ತಂಡದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಟೂರ್ನಿಯಲ್ಲಿ ಈವರೆಗೆ 13 ಪಂದ್ಯಗಳನ್ನಾಡಿದ್ದು 575 ರನ್ಗಳನ್ನು ಈಗಾಗಲೇ ಗಳಿಸಿದ್ದಾರೆ. ಅಲ್ಲದೆ ಐಪಿಎಲ್ ಇತಿಹಾಸದ ಅತ್ಯಂತ ವೇಗದ ಅರ್ಧ ಶತಕವನ್ನು ಕೂಡ ಅವರು ದಾಖಲಿಸಿದ್ದಾರೆ.
ಇನ್ನು ರಿಂಕು ಸಿಂಗ್ ಈ ಬಾರಿಯ ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸಿಕ್ಕ ಹೊಸ ಫಿನಿಷರ್ ಆಗಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ರಿಂಕಿ ಸಿಂಗ್ ಸತತ ಐದು ಎಸೆತಗಳಲ್ಲಿ ಐದು ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ಸಾರುವ ಮೂಲಕ ತಮ್ಮ ಸಾಮರ್ಥ್ಯವನ್ನು ಜಗಜ್ಜಾಹೀರುಗೊಳಿಸಿದ್ದರು. ಬಳಿಕವೂ ರಿಂಕು ಕೆಕೆಆರ್ ಪರವಾಗಿ ಕೆಲ ಅದ್ಭುತ ಇನ್ನಿಂಗ್ಸ್ ಆಡಿ ತಂಡಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಈ ಮೂಲಕ ರಿಂಕು ಸಿಂಗ್ ಬ್ಯಾಟಿಂಗ್ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ಹರಿದುಬರುತ್ತಿದೆ.
ರಿಂಕು ಸಿಂಗ್ ಕೊಲ್ಕತ್ತಾ ಪರವಾಗಿ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದಾರೆ. 50.88ರ ಸರಾಸರಿಯಲ್ಲಿ ರಿಂಕು ಈವರೆಗೆ 407 ರನ್ಗಳನ್ನು ಗಳಿಸಿದ್ದಾರೆ. ಇನ್ನು ತಿಲಕ್ ವರ್ಮಾ ಕೂಡ ತಮ್ಮ ಬ್ಯಾಟಿಂಗ್ ಸಾಮರ್ಥ್ಯದ ಮೂಲಕ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಕೆಲ ಪಂದ್ಯಗಳಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರೂ ವರ್ಮಾ 9 ಪಂದ್ಯಗಳಲ್ಲಿ 274 ರನ್ಗಳನ್ನು ಗಳಿಸಿದ್ದಾರೆ.
ಈ ಬಗ್ಗೆ ರವಿ ಶಾಸ್ತ್ರಿ ಐಸಿಸಿ ರಿವ್ಯೂ ಸಂಚಿಕೆಯಲ್ಲಿ ಮಾತನಾಡಿದ್ದು ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಬಹುದಾದ ಯುವ ಆಟಗಾರರನ್ನು ಹೆಸರಿಸಿದರು. "ಒಂದು ಯಶಸ್ವಿ ಜೈಸ್ವಾಲ್, ಕಾರಣ ಅವರು ಈ ಆವೃತ್ತಿಯಲ್ಲಿ ಆಡುತ್ತಿರುವ ರೀತಿಗೆ. ಅಲ್ಲದೆ ಮತ್ತೊಂದು ಪ್ರಮುಖ ಅಂಶವೆಂದರೆ ಕಳೆದ ಆವೃತ್ತಿಯಲ್ಲಿ ಹಾಗೂ ಈ ಆವೃತ್ತಿಯಲ್ಲಿ ಅವರ ಬ್ಯಾಟಿಂಗ್ನಲ್ಲಿನ ಸಕಾರಾತ್ಮಕ ಬದಲಾವಣೆಯನ್ನು ನಾನು ಪ್ರಮುಖವಾಗಿ ಪರಿಗಣಿಸುತ್ತೇನೆ" ಎಂದಿದ್ದಾರೆ ರವಿ ಶಾಸ್ತ್ರಿ.
ಮುಂದುವರಿದು ಅವರು "ಮತ್ತೊಂದು ಸ್ಥಾನ ರಿಂಕು ಸಿಂಗ್ಗೆ. ಆತನದ್ದು ಬಹಳ ಸ್ಪೂರ್ತಿಯ ಪ್ರಯಾಣ. ಆದರೆ ಆತನಲ್ಲಿ ನಾನು ಹೆಚ್ಚಾಗಿ ಗಮನಿಸುವುದು ಆತನಲ್ಲಿರುವ ಅದ್ಬುತವಾದ ಧೃಢತೆ. ಇವರಿಬ್ಬರು ಕೂಡ ಬಹಳ ಕಠಿಣವಾದ ಹಿನ್ನೆಲೆಯನ್ನು ಹೊಂದಿರುವಂತಾ ಆಟಗಾರರು. ತಮ್ಮ ಬದುಕಿನ ಆರಂಭದಲ್ಲಿ ಬಹಳ ಕಠಿಣವಾದ ಪರಿಶ್ರಮವನ್ನು ಇವರಿಬ್ಬರು ಪಟ್ಟಿದ್ದಾರೆ. ಈ ಹಾದಿ ಅವರಿಗೆ ಸುಲಭವಾಗಿರಲಿಲ್ಲ. ಅವರಲ್ಲಿದ್ದ ಹಸಿವು, ಬದ್ಧತೆ ಅವರನ್ನು ಈ ಹಂತಕ್ಕೆ ಬಂದು ನಿಲ್ಲಿಸಿದೆ" ಎಂದಿದ್ದಾರೆ ರವಿ ಶಾಸ್ತ್ರಿ.