ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಮೊದಲ ಸೆಮಿಫೈನಲ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬ್ಲಾಕ್ ಬ್ಲಾಸ್ಟರ್ ಪಂದ್ಯವು ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2:30 ಗಂಟೆಗೆ ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ ಯಾವ ತಂಡ ಸೆಮಿಫೈನಲ್ ಗೆಲ್ಲಲಿದೆ ಎಂಬ ಚರ್ಚೆ ಶುರುವಾಗಿದೆ. ವಿಶ್ವ ಕ್ರಿಕೆಟ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಬಲಿಷ್ಠ ತಂಡಗಳಾಗಿವೆ.
ಟೀಮ್ ಇಂಡಿಯಾ ಯಾವುದೇ ಬದಲಾವಣೆಯಿಲ್ಲದೆ ಆಸ್ಟ್ರೇಲಿಯಾ ವಿರುದ್ಧ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯವನ್ನು ಪ್ರವೇಶಿಸಬೇಕು ಎಂದು ಮಾಜಿ ಆಟಗಾರ ರವಿಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ 44 ರನ್ಗಳ ಗೆಲುವಿನ ಸಂದರ್ಭದಲ್ಲಿ ಟೀಮ್ ಇಂಡಿಯಾ ದುಬೈನಲ್ಲಿನ ಪರಿಸ್ಥಿತಿಗಳ ಉತ್ತಮ ಲಾಭವನ್ನು ಪಡೆದುಕೊಂಡಿದೆ ಎಂದು ರವಿಶಾಸ್ತ್ರಿ ಇದಕ್ಕೆ ಕಾರಣ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹಂಚಿಕೊಂಡಿರುವ ವಿಡಿಯೋದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ ಪಂದ್ಯದ ಬಗ್ಗೆ ರವಿಶಾಸ್ತ್ರಿ ಮಾತನಾಡಿದ್ದಾರೆ. ತಂಡದಲ್ಲಿ ಯಾವುದೇ ಬದಲಾವಣೆಗಳು ಇರಬಾರದು ಅಂದುಕೊಂಡಿದ್ದೇನೆ. ಭಾರತ ತಂಡದ ಸ್ಪಿನ್ನರ್ಗಳ ಪಾತ್ರ ಮತ್ತೆ ಮುಖ್ಯವಾಗಲಿದೆ. ಭಾನುವಾರ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ದುಬೈನ ನಿಧಾನಗತಿಯ ಪಿಚ್ ಅನ್ನು ಪರಿಗಣಿಸಿ ಭಾರತ ತಂಡವು ನಾಲ್ವರು ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಅವರನ್ನು ಆಡಿಸಿತ್ತು. ಈ ನಾಲ್ವರು ಒಟ್ಟು 9 ವಿಕೆಟ್ಗಳನ್ನು ಕಬಳಿಸಿದ್ದರು. ಅದರಲ್ಲಿ ವರುಣ್ ಚಕ್ರವರ್ತಿ ಅತ್ಯಂತ ಯಶಸ್ವಿ ಬೌಲರ್ ಆದರು. ಅವರು 10 ಓವರ್ಗಳಲ್ಲಿ 42 ರನ್ಗಳಿಗೆ 5 ವಿಕೆಟ್ಗಳನ್ನು ಕಬಳಿಸಿದ್ದರು ಎಂದಿದ್ದಾರೆ.
ವರುಣ್ ಚಕ್ರವರ್ತಿಗೆ ಸರಿಯಾದ ಸಮಯದಲ್ಲಿ ಅವಕಾಶ ನೀಡಿದ್ದಕ್ಕಾಗಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅನ್ನು ರವಿಶಾಸ್ತ್ರಿ ಶ್ಲಾಘಿಸಿದ್ದಾರೆ.'ನೀವು ಅವರ ಪ್ರಸ್ತುತ ಫಾರ್ಮ್ ಅನ್ನು ನೋಡಿದರೆ, ಅದ್ಭುತವಾಗಿದೆ. ಪ್ರಸ್ತುತ ಫಾರ್ಮ್ ಅತ್ಯಂತ ಮುಖ್ಯ ಎಂದು ನಾನು ಯಾವಾಗಲೂ ನಂಬುತ್ತೇನೆ. ಅವರ ಆತ್ಮವಿಶ್ವಾಸ ಅತ್ಯುತ್ತಮವಾಗಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಂತಹ ತಂಡಗಳು ಇನ್ನೂ ಈ ಟೂರ್ನಿಯಲ್ಲಿವೆ. ಆದರೆ ಅವುಗಳಲ್ಲಿ ಯಾವ ತಂಡವೂ ವರುಣ್ ಚಕ್ರವರ್ತಿ ವಿರುದ್ಧ ಹೆಚ್ಚು ಆಡಿಲ್ಲ ಅಥವಾ ಅವರ ಬಗ್ಗೆ ಹೆಚ್ಚು ಅಧ್ಯಯನ ಮಾಡಿಲ್ಲ ಹೀಗಾಗಿ ಅವರನ್ನು ಕಣಕ್ಕಿಳಿಸಬೇಕು ಎಂದು ಸಲಹೆ ನೀಡಿದ್ದಾರೆ.
ದುಬೈ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ ಮಾಡುವಾಗ 240-250 ರನ್ ಗಳಿಸುವುದು ಸೆಮಿಫೈನಲ್ನಲ್ಲಿ ಗೆಲುವಿಗೆ ಪ್ರಮುಖವಾಗಬಹುದು ಎಂದು ರವಿಶಾಸ್ತ್ರಿ ಹೇಳಿದ್ದಾರೆ. 'ನೀವು ಮೊದಲು ಬ್ಯಾಟ್ ಮಾಡಿ 240-250 ಕ್ಕಿಂತ ಹೆಚ್ಚು ರನ್ ಗಳಿಸಿದರೆ, ಇಷ್ಟು ದೊಡ್ಡ ಪಂದ್ಯದಲ್ಲಿ ಅದು ತುಂಬಾ ಸವಾಲಿನ ಗುರಿಯಾಗಿರುತ್ತದೆ. ಹೀಗಾಗಿ ಮೊದಲು ಟಾಸ್ ಗೆದ್ದ ತಂಡ ಬ್ಯಾಟಿಂಗ್ ಮಾಡಬೇಕು ಎಂದು ಭವಿಷ್ಯ ನುಡಿದ್ದಾರೆ.