ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್ ಪಂದ್ಯ ಗುವಾಹಟಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಮೊದಲ ಇನಿಂಗ್ಸ್ ಆರಂಭಿಸಿದೆ. ಇನ್ನು ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ನಲ್ಲಿ 489 ರನ್ ಸೇರಿಸಿತು. ಈಗ ಈ ಟೆಸ್ಟ್ ಡ್ರಾನತ್ತ ಮುಖಮಾಡಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಈ ಪಂದ್ಯವನ್ನು ಗೆಲ್ಲಲು ಏನು ಮಾಡಬೇಕು ಎಂಬುದನ್ನು ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ತಂಡಕ್ಕೆ ಕಿವಿ ಮಾತು ನೀಡಿದ್ದಾರೆ.
ದಕ್ಷಿಣ ಆಫ್ರಿಕಾ ಪರ ಮೊದಲ ಇನಿಂಗ್ಸ್ನಲ್ಲಿ ಸೆನುರಾನ್ ಮುತ್ತುಸಾಮಿ ಅಮೋಘ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದರು. ಇನ್ನು ಆಲ್ರೌಂಡರ್ ಮಾರ್ಕೊ ಜಾನ್ಸೆನ್ 93 ರನ್ ಬಾರಿಸಿದರು. ಪರಿಣಾಮ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ನಲ್ಲಿ 489 ರನ್ ಕಲೆ ಹಾಕಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕಾದಲ್ಲಿ ದಿಟ್ಟ ಹೆಜ್ಜೆಯನ್ನು ಇಡುವ ಅವಶ್ಯಕತೆ ಇದೆ ಎಂದು ರವಿ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ದೊಡ್ಡ ಮುನ್ನಡೆಯನ್ನು ಸಾಧಿಸಿ ಡಿಕ್ಲೇರ್ ಮಾಡಿಕೊಂಡರೆ ಬೆಸ್ಟ್. ಇನ್ನು ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಆಕ್ರಮಣಕಾರಿ ಆಟವನ್ನು ಆಡಬೇಕಿದೆ ಎಂದು ರವಿ ಶಾಸ್ತ್ರಿ ವಿಭಿನ್ನ ಯೋಚನೆಯನ್ನು ತಿಳಿಸಿದ್ದಾರೆ. ಟೆಸ್ಟ್ ಪಂದ್ಯದ ಕೊನೆಯ ದಿನಗಳಲ್ಲಿ ನಿಧಾನವಾಗುವುದರಿಂದ ಭಾರತ ಬೇಗನೆ ರನ್ಗಳನ್ನು ಕಲೆ ಹಾಕುವತ್ತ ದೃಷ್ಟಿ ಇದೆ. ಭಾರತ ಈ ಹಂತದಲ್ಲಿ 150 ರಿಂದ 200 ರನ್ ಮುನ್ನಡೆ ಸಾಧಿಸಿ ಡಿಕ್ಲೇರ್ ಮಾಡಿಕೊಳ್ಳಬೇಕು. ಅಲ್ಲದೆ ನಾಲ್ಕನೇ ದಿನದ ಕೊನೆಯ ಅವಧಿಯಲ್ಲಿ ದಕ್ಷಿಣ ಆಪ್ರಿಕಾ ತಂಡಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಬೇಕು. ಭಾರತೀಯ ಬೌಲರ್ಗಳು ಹಳೆಯ ಚೆಂಡಿನಲ್ಲಿ ಎದುರಾಳಿಯ ಮೇಲೆ ಒತ್ತಡವನ್ನು ಹೇರಬೇಕು ಎಂದು ಶಾಸ್ತ್ರಿ ತಿಳಿಸಿದ್ದಾರೆ.
ಭಾರತ ಈ ಪಂದ್ಯದಲ್ಲಿ ಗೆಲ್ಲುವ ಕನಸು ಕಂಡಿದ್ದರೆ, ಪಂತ್ ಪಡೆ ಆಕ್ರಮಣಕಾರಿ ಆಟವನ್ನು ಆಡಬೇಕು. ಅಲ್ಲದೆ 150 ರಿಂದ 200 ರನ್ ಮುನ್ನಡೆ ಸಾಧಿಸಿದರೂ, ಟೀಮ್ ಇಂಡಿಯಾ ಬೇಗನೆ ಡಿಕ್ಕೇರ್ ಮಾಡಿಕೊಳ್ಳಬೇಕು ಎಂದು ಶಾಸ್ತ್ರಿ ಟೀಮ್ ಇಂಡಿಯಾಕ್ಕೆ ಕಿವಿ ಮಾತು ನೀಡಿದ್ದಾರೆ.

ಭಾರತ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸುವ ಕನಸು ಕಾಣುತ್ತಿದೆ. ಈಗಾಗಲೇ ದಕ್ಷಿಣ ಆಫ್ರಿಕಾ ಕೋಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 30 ರನ್ಗಳಿಂದ ಗೆದ್ದಿದೆ. ಭಾರತ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲ ಸಾಧಿಸುವ ಗುರಿ ಹೊಂದಿದೆ.