ಗುರುವಾರ ಆರಂಭವಾದ ಭಾರತ ಮತ್ತು ಬಾಂಗ್ಲಾದೇಶ ನಡುವೆ ಎರಡನೇ ಟೆಸ್ಟ್ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗಿದ್ದಾನೆ. ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ.
ಕಾನ್ಪುರ ಟೆಸ್ಟ್ ಪಂದ್ಯದ ಮೊದಲ ದಿನದ ಆಟ ಮಳೆಯಿಂದಾಗಿ ಪೂರ್ಣಗೊಂಡಿಲ್ಲ. ಪಂದ್ಯದ ಮಧ್ಯೆದಲ್ಲೇ ಶುರುವಾದ ಮಳೆಯಿಂದಾಗಿ ಪಂದ್ಯದ ಮೊದಲ ದಿನದಾಟವನ್ನು ನಿಗದಿತ ಸಮಯಕ್ಕೂ ಮುನ್ನ ರದ್ದುಗೊಳಿಸಬೇಕಾಯಿತು.

ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬಾಂಗ್ಲಾದೇಶ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ 35 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿತ್ತು. ಬಾಂಗ್ಲಾದೇಶ ಪರ ಮುಶ್ಫಿಕರ್ ರಹೀಮ್ (6) ಮತ್ತು ಮೊಮಿನುಲ್ ಹಕ್ (40) ಅಜೇಯರಾಗಿ ಕ್ರೀಸ್ನಲ್ಲಿ ಉಳಿದಿದ್ದಾರೆ. ಟೀಮ್ ಇಂಡಿಯಾ ಪರ ಆಕಾಶ್ ದೀಪ್ 2 ವಿಕೆಟ್ ಕಬಳಿಸಿ ಮಿಂಚಿದರೆ, ರವಿಚಂದ್ರನ್ ಅಶ್ವಿನ್ ಕೇವಲ 1 ವಿಕೆಟ್ ಪಡೆದು ದಾಖಲೆ ಸೃಷ್ಟಿಸಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಕೇವಲ ಒಂದು ವಿಕೆಟ್ ಪಡೆಯುವ ಮೂಲಕ ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿದ್ದಾರೆ. ಇದರೊಂದಿಗೆ ಅವರು ಏಷ್ಯಾದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಎರಡನೇ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂತೊ ಅವರ ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಈ ಸಾಧನೆ ಮಾಡಿದ್ದಾರೆ.
ಈಗ ಏಷ್ಯಾದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅಶ್ವಿನ್ 420 ವಿಕೆಟ್ಗಳನ್ನು ಹೊಂದಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 612 ವಿಕೆಟ್ಗಳೊಂದಿಗೆ ಆಗ್ರಸ್ಥಾನದಲ್ಲಿದ್ದಾರೆ. 419 ವಿಕೆಟ್ಗಳನ್ನು ಉರುಳಿಸಿರುವ ಭಾರತದ ಅನಿಲ್ ಕುಂಬ್ಳೆ ಮೂರನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾ ರಂಗನಾ ಹೆರಾತ್ 354 ವಿಕೆಟ್, ಭಾರತದ ದಿಗ್ಗಜ ಸ್ಪಿನ್ನರ್ ಹರ್ಭಜನ್ ಸಿಂಗ್ 300 ವಿಕೆಟ್ ಕಬಳಿಸಿ ನಾಲ್ಕು ಹಾಗು ಐದನೇ ಸ್ಥಾನದಲ್ಲಿದ್ದಾರೆ. ಈ ಸಾಧನೆ ಪಟ್ಟಿಯಲ್ಲಿರುವ ಟಾಪ್ ಐದು ಬೌಲರ್ಗಳು ಭಾರತ ಮತ್ತು ಶ್ರೀಲಂಕಾ ತಂಡದವರು ಎಂಬುದು ಮತ್ತೊಂದು ವಿಶೇಷ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯ ಮಳೆಯಿಂದಾಗಿ ಕೊಚ್ಚಿ ಹೋಗಿದೆ. ನಾಳೆ (ಶನಿವಾರ) ಪಂದ್ಯದ ಎರಡನೇ ದಿನ ಕಾನ್ಪುರದಲ್ಲಿ ಶೇ. 80 ರಷ್ಟು ಮಳೆಯಾಗುವ ಮುನ್ಸೂಚನೆ ಇದೆ. ಮೂರನೇ ದಿನವೂ ಶೇ. 59 ರಷ್ಟು ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಂದು ವೇಳೆ ಸತತ ಮೂರು ದಿನಗಳು ಕೂಡ ಮಳೆಯಿಂದಾಗಿ ಕಾನ್ಪುರದ ಟೆಸ್ಟ್ ಆಡಲು ಸಾಧ್ಯವಾಗದಿದ್ದರೆ, ಫೀಲ್ಡ್ ಅಂಪೈರ್ಗಳು ಪಂದ್ಯವನ್ನು ಡ್ರಾ ಎಂದು ಘೋಷಿಸುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿ ಮೇಲೂ ಪರಿಣಾಮ ಬೀರಲಿದೆ.