ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಟಾರ್ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಸಂಚಲನ ಮೂಡಿಸಿದ್ದಾರೆ. ತವರು ನೆಲದ ಸ್ಟೇಡಿಯಂ ಲಾಭ ಪಡೆದ ಅಶ್ವಿನ್ ಟೀಮ್ ಇಂಡಿಯಾದ ಹೀರೋ ಆಗಿದ್ದಾರೆ.
ಭಾರತ ತಂಡ ಸಂಕಷ್ಟದಲ್ಲಿದ್ದಾಗ ಪಂದ್ಯದ ಮೊದಲ ದಿನ ಅಶ್ವಿನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ತಂಡದ 6 ವಿಕೆಟ್ಗಳು ಕೇವಲ 144 ರನ್ಗಳಿಗೆ ಪತನಗೊಂಡಿದ್ದವು. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅಶ್ವಿನ್, ರವೀಂದ್ರ ಜಡೇಜಾ ಅವರೊಂದಿಗೆ 199 ರನ್ಗಳ ಬೃಹತ್ ಜೊತೆಯಾಟವಾಡಿದರು.

ಈ ಇಬ್ಬರ ಅಮೋಘ ಇನ್ನಿಂಗ್ಸ್ ನೆರವಿನಿಂದ ಭಾರತ 376 ರನ್ಗಳ ಉತ್ತಮ ಮೊತ್ತ ಕಲೆ ಹಾಕಿತು. ಈ ವೇಳೆ ಅಶ್ವಿನ್ ತಮ್ಮ ಟೆಸ್ಟ್ ವೃತ್ತಿಜೀವನದ 6ನೇ ಶತಕವನ್ನು ಪೂರೈಸಿದರು. ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ ಅಶ್ವಿನ್ 11 ಬೌಂಡರಿ ಮತ್ತು 2 ಸಿಕ್ಸರ್ಗಳನ್ನು ಬಾರಿಸಿದರು.
ಇದೀಗ ಅಶ್ವಿನ್, ವಿಶ್ವದ ಶ್ರೇಷ್ಠ ಸ್ಪಿನ್ನರ್ ಮತ್ತು ಶ್ರೀಲಂಕಾ ಮಾಜಿ ಆಟಗಾರ ಮುತ್ತಯ್ಯ ಮುರಳೀಧರನ್ ಅವರ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ. ಅಶ್ವಿನ್ ಮೊದಲ ಇನ್ನಿಂಗ್ಸ್ನಲ್ಲಿ ಶತಕ ಬಾರಿಸುವ ಮೂಲಕ ಮುರಳೀಧರನ್ ಅವರ ವಿಶ್ವ ದಾಖಲೆಯನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬಾರಿ ಸರಣಿಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದ ದಾಖಲೆಯನ್ನು ಮುರಳೀಧರನ್ ಹೊಂದಿದ್ದಾರೆ. ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತದ ಸ್ಪಿನ್ನರ್ ಈ ದಾಖಲೆಯನ್ನು ಮುರಿಯುವ ತವಕದಲ್ಲಿದ್ದಾರೆ. ಅಶ್ವಿನ್ ಇದುವರೆಗೆ 10 ಬಾರಿ ಟೆಸ್ಟ್ ಕ್ರಿಕೆಟ್ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದು ಎರಡನೇ ಸ್ಥಾನದಲ್ಲಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಅಶ್ವಿನ್ ಅವರಿಂದ ಅಮೋಘ ಬ್ಯಾಟಿಂಗ್ ಕಂಡುಬಂದಿತ್ತು. ಅವರು ಬೌಲಿಂಗ್ನಲ್ಲಿ ಇದೇ ರೀತಿಯ ಮಿಂಚಿದರೆ, ಹಾಗು ಮುಂದಿನ ಟೆಸ್ಟ್ನಲ್ಲಿಯೂ ಅತ್ಯುತ್ತಮ ಆಲ್ರೌಂಡರ್ ಪ್ರದರ್ಶನವನ್ನು ನೀಡಿದರೆ, ಅವರು ಸರಣಿಯ ಶ್ರೇಷ್ಠ ಪ್ರಶಸ್ತಿಯನ್ನು ಗೆಲ್ಲಬಹುದು. ಆಗ ಅವರು ಮುರಳೀಧರನ್ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಬಳಿಕ ನಂಬರ್-1 ಆಗಲು, ಅವರು ಮತ್ತೊಮ್ಮೆ ಮತ್ತೊಂದು ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಬೇಕಾಗುತ್ತದೆ. ಇದರಿಂದಾಗಿ ಅವರು ವಿಶ್ವದ ಅತಿ ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರ ಎನಿಸಿಕೊಳ್ಳಲಿದ್ದಾರೆ.