ಇನ್ನೇನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಬಹು ನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸಲಿದೆ. ಈ ಮೆಗಾ ಟೂರ್ನಿಯಲ್ಲಿ ಭಾರತ ಸೇರಿದಂತೆ ಒಟ್ಟು ಎಂಟು ತಂಡಗಳು ಭಾಗವಹಿಸುತ್ತವೆ. ಪ್ರಕಟಿತ ತಂಡದಲ್ಲಿ ಫೆಬ್ರವರಿ 11 ರಂದು ಭಾರತ ತಂಡ ಎರಡು ಬದಲಾವಣೆಗಳನ್ನು ಮಾಡಿದೆ. ಈ ವೇಳೆ ಟೀಮ್ ಇಂಡಿಯಾ ಮತ್ತೊಬ್ಬ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಅವರಿಗೆ ಸ್ಥಾನ ನೀಡಲಾಗಿದೆ. ಈ ಬದಲಾವಣೆಯ ಬಗ್ಗೆ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಪ್ರಶ್ನೆ ಮಾಡಿದ್ದಾರೆ.
ಭಾರತ ತಂಡದಲ್ಲಿ ಪ್ರಮುಖ ಸ್ಪಿನ್ ಬೌಲರ್ಗಳು ನಾಲ್ಕು ಜನರಿದ್ದರು. ಆದಾಗಲೂ ಇನ್ನೊಬ್ಬ ಸ್ಪಿನ್ ಬೌಲರ್ನನ್ನು ತಂಡಕ್ಕೆ ಸೇರಿಸಿಕೊಂಡ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಈಗ ಅಶ್ವಿನ್ ಸಹ ವರುಣ್ ಚಕ್ರವರ್ತಿ ಅವರ ಆಯ್ಕೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಟೀಮ್ ಇಂಡಿಯಾದ ತಂಡದ ಬಗ್ಗೆ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ.

"ನಾವು ಚಾಂಪಿಯನ್ಸ್ ಟ್ರೋಫಿಯ ವೇಳೆ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿದ್ದೇವೆ. ದುಬೈಗೆ ಎಷ್ಟು ಸ್ಪಿನ್ನರ್ಗಳನ್ನು ಕರೆದೊಯ್ಯುತ್ತಿದ್ದೇವೆಂದು ನನಗೆ ಅರ್ಥವಾಗುತ್ತಿಲ್ಲ. ಭಾರತ ತಂಡದಲ್ಲಿ 5 ಸ್ಪಿನ್ ಬೌಲರ್ಗಳಿಗೆ ಸ್ಥಾನ ನೀಡಲಾಗಿದೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಕೈ ಬಿಟ್ಟ ತಂಡ ವರುಣ್ ಚಕ್ರವರ್ತಿ ಅವರಿಗೆ ಸ್ಥಾನ ನೀಡಲಾಗಿದೆ. ಚಾಂಪಿಯನ್ಸ್ ಟ್ರೋಫಿಯ ವೇಳೆ ತಂಡದ ಸಂಯೋಜನೆ ಹೇಗಿರಲಿದೆ ಎಂಬುದು ಕುತೂಹಲ ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.
ಒಂದು ಪ್ರವಾಸ ಆರಂಭಿಸುವಾಗ ಭಾರತ ತಂಡದಲ್ಲಿ ಮೂರರಿಂದ ನಾಲ್ಕು ಸ್ಪಿನ್ ಬೌಲರ್ಗಳಿಗೆ ಅವಕಾಶ ನೀಡುವುದು ಸಾಮಾನ್ಯ. ನನಗೆ ಅನಿಸಿದ ಮಟ್ಟಿಗೆ ಒಬ್ಬರು ಅಥವಾ ಇಬ್ಬರು ಸ್ಪಿನ್ ಬೌಲರ್ಗಳು ಹೆಚ್ಚಾಗಿದ್ದಾರೆ. ಇಬ್ಬರು ಎಡಗೈ ಸ್ಪಿನ್ ಬೌಲರ್ ಹಾಗೂ ಹಾರ್ದಿಕ್ ಪಾಂಡ್ಯ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯುವುದು ಖಚಿತ ಎಂದು ಹೇಳಲಾಗುತ್ತದೆ. ಇನ್ನು ಕುಲ್ದೀಪ್ ಯಾದವ್ ಸಹ ತಂಡದಲ್ಲಿ ಸ್ಥಾನ ಪಡೆಯಬಹುದು. ಇನ್ನು ನೀವು ಇನ್ನೊಬ್ಬ ಸ್ಪಿನ್ ಬೌಲರ್ಗೆ ಅವಕಾಶ ಕಲ್ಪಿಸಿದರೆ, ಇನ್ನೊಬ್ಬ ವೇಗದ ಬೌಲರ್ನನ್ನು ಕೈ ಬಿಡಬೇಕಾಗುತ್ತದೆ. ಹೀಗೆ ಆದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಎರಡನೇ ವೇಗದ ಬೌಲರ್ ಆಗಿ ತಂಡದಲ್ಲಿ ಸ್ಥಾನ ಪಡೆಯಬಹುದಾಗಿದೆ ಎಂದು ಅಶ್ವಿನ್ ಅಭಿಪ್ರಾಯ ಪಟ್ಟಿದ್ದಾರೆ.

ಕುಲ್ದೀಪ್ ಯಾದವ್ ಆಡುವ ತಂಡದಲ್ಲಿ ಸ್ಥಾನ ಪಡೆದರೆ, ವರುಣ್ ಚಕ್ರವರ್ತಿ ಅವರಿಗೆ ಸ್ಥಾನ ಹೇಗೆ ಲಭಿಸುತ್ತದೆ. ನಾವು ಇತ್ತೀಚಿಗೆ ಐಎಲ್ಟಿ20 ಟೂರ್ನಿ ದುಬೈನಲ್ಲಿ ನಡೆದಾಗ ಟರ್ನ್ ಹೆಚ್ಚಾಗಿ ಕಾಣಲಿಲ್ಲ ಎಂದು ತಿಳಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ಆಯೋಜಿಸಲಿದ್ದು, ಭಾರತ ಈ ಟೂರ್ನಿಗಾಗಿ ಪ್ರವಾಸ ಬೆಳೆಸುತ್ತಿಲ್ಲ. ಹೀಗಾಗಿ ಹೈಬ್ರೀಡ್ ಮಾಡೇಲ್ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ವೇಳೆ ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಇನ್ನು ಈ ಟೂರ್ನಿಯಲ್ಲಿ ಭಾರತ ತನ್ನ ಅಭಿಯಾನವನ್ನು ಫೆಬ್ರವರಿ 20 ರಿಂದ ಆರಂಭಿಸಲಿದೆ.