ಆಸ್ಟ್ರೇಲಿಯಾದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಚೆನ್ನೈ ತಲುಪಿದ್ದಾರೆ. ಇಂದು (ಡಿಸೆಂಬರ್ 19) ಬೆಳಿಗ್ಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣದಿಂದ ಮನೆ ತಲುಪಿದ ಅಶ್ವಿನ್ ಅವರನ್ನು ಕುಟುಂಬಸ್ಥರು, ಆಪ್ತರು ಮತ್ತು ನೆರೆಹೊರೆಯವರು ಸಂಗೀತ ವಾದ್ಯಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಈ ವೇಳೆ ಅಶ್ವಿನ್ ಅವರ ತಂದೆ ತಮ್ಮ ಮಗನಿಗೆ ಅಪ್ಪುಗೆ ನೀಡುವ ಮೂಲಕ ಸ್ವಾತಗ ಕೋರಿದ್ದಾರೆ.
ಅಶ್ವಿನ್ ಚೆನ್ನೈ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಅವರನ್ನು ಸುತ್ತುವರೆದರು. ಆದರೆ, ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸದೆ ಅಶ್ವಿನ್ ಗೌಪ್ಯತೆಯನ್ನು ಕೋರಿದ್ದಾರೆ. ನಂತರ ಕಾರಿನಲ್ಲಿ ಚೆನ್ನೈನಲ್ಲಿರುವ ತಮ್ಮ ನೆಚ್ಚಿನ ಮನೆಗೆ ಆಗಮಿಸಿದರು. ಇತ್ತ ಅಶ್ವಿನ್ ಕುಟುಂಬಸ್ಥರು ಅವರನ್ನು ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಿದರು. ಅಶ್ವಿನ್ ಕೂಡ ತಮ್ಮ ಕುಟುಂಬವನ್ನು ಭೇಟಿಯಾದ ನಂತರ ಸಂತಸದಲ್ಲಿದ್ದರು. ಕೆಲವರು ಅಶ್ವಿನ್ಗೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಶ್ವಿನ್, ನಾನು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮಾತ್ರ ನಿವೃತ್ತಿ ಘೋಷಣೆ ಮಾಡಿದ್ದೇನೆ. ಇನ್ನಿ ಚೆನ್ನೈ ಸೂಪರ್ ಕಿಂಗ್ಸ್ (ಐಪಿಎಲ್) ಪರ ಆಡಲಿದ್ದೇನೆ. ನನ್ನಿಂದ ಎಲ್ಲಿಯವರೆಗೆ ಸಾಧ್ಯವೊ ಅಲ್ಲಿಯ ತನಕ ಐಪಿಎಲ್ನಲ್ಲಿ ಆಡುತ್ತೇನೆ ಎಂದಿದ್ದಾರೆ. 'ಯುವ ಆಟಗಾರರಿಗೆ ಏನು ಹೇಳುತ್ತೀರಾ?' ಎಂಬ ಮಾಧ್ಯಮಗಳ ಪ್ರಶ್ನೆಗೆ ಅಶ್ವಿನ್, 'ನಾನು ಏನು ಹೇಳುವುದಿಲ್ಲ' ಎಂದು ಉತ್ತರಿಸಿದ್ದಾರೆ. ಈ ಹೇಳಿಕೆಯಿಂದ ಅಶ್ವಿನ್ ನಿವೃತ್ತಿ ಬಗ್ಗೆ ಎಷ್ಟು ಬೇಸರಗೊಂಡಿದ್ದಾರೆ ಎಂಬುದು ತಿಳಿಯುತ್ತದೆ.
ಬ್ರಿಸ್ಬೇನ್ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯವು ಮಳೆಯಿಂದ ಡ್ರಾದಲ್ಲಿ ಕೊನೆಗೊಂಡಿತ್ತು. ಈ ಪಂದ್ಯದ ಬಳಿಕ ಅಶ್ವಿನ್ ಹಠಾತ್ ನಿವೃತ್ತಿ ಘೋಷಣೆ ಮಾಡಿದರು. ಅಧಿಕೃತ ಘೋಷಣೆ ಮಾಡಲು ರೋಹಿತ್ ಶರ್ಮಾ ಅವರೊಂದಿಗೆ ಅಶ್ವಿನ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಮಾದರಿಯ ಭಾರತೀಯ ಕ್ರಿಕೆಟಿಗನಾಗಿ ಇದು ನನ್ನ ಕೊನೆಯ ದಿನವಾಗಿದೆ' ಎಂದು ಅಶ್ವಿನ್ ಹೇಳಿದರು. ಇದನ್ನು ಕೇಳಿದ ಎಲ್ಲರೂ ಅಚ್ಚರಿಗೊಳಗಾದರು.