ಟೀಮ್ ಇಂಡಿಯಾ ತಂಡದಲ್ಲಿ ಸ್ಥಾನ ದೊರೆಯದಿದ್ದರೂ ವಿಶ್ವಕಪ್ನ ತಂಡದ ಪ್ರಕಟವಾದ ಕೂಡಲೇ ಟೀಮ್ ಇಂಡಿಯಾ ಸ್ಕ್ವಾಡ್ ಹಂಚಿಕೊಂಡು ತಂಡಕ್ಕೆ ಶುಭಹಾರೈಸಿದ್ದರು ಅನುಭವಿ ಸ್ಪಿನ್ನರ್ ಆರ್ ಅಶ್ವಿನ್. ಭಾರತದಲ್ಲಿಯೇ ನಡೆಯಲಿರುವ ಈ ಬಾರಿಯ ವಿಶ್ವಕಪ್ನಲ್ಲಿ ಆರ್ ಅಶ್ವಿನ್ಗೆ ಅವಕಾಶ ದೊರೆಯದಿರುವುದು ತಂಡಕ್ಕೆ ದೊಡ್ಡ ಹಿನ್ನಡೆ ಎನ್ನುವುದು ಕೆಲ ಕ್ರಿಕೆಟ್ ಪಂಡಿತರ ಅಭಿಪ್ರಾಯ. ಸ್ಥಾನ ದೊರೆಯದಿರುವ ಬಗ್ಗೆ ಸಹಜವಾಗಿಯೇ ಬೇಸರವಿದ್ದರೂ ಪ್ರಬುದ್ಧತೆ ಮೆರೆದಿದ್ದಾರೆ ಹಿರಿಯ ಕ್ರಿಕೆಟಿಗ.
ಇದರ ಬೆನ್ನಿಗೇ ಟೀಮ್ ಇಂಡಿಯಾದ ಯುವ ಆಟಗಾರನ ವಿಶೇಷ ಸಾಮರ್ಥ್ಯವನ್ನು ಮನಃಪೂರ್ವಕವಾಗಿ ಪ್ರಶಂಸಿಸಿ ಬೆನ್ನುತಟ್ಟಿದ್ದಾರೆ ಆರ್ ಅಶ್ವಿನ್. ಏಕದಿನ ಮಾದರಿಯಲ್ಲಿ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡು ಮಿಂಚುತ್ತಿರುವ ಇಶಾನ್ ಕಿಶನ್ ಬಗ್ಗೆ ಆರ್ ಅಶ್ವಿನ್ ಮಾತನನಾಡಿದ್ದು ಆತನ ಆಟದಲ್ಲಿ ವೈವಿಧ್ಯತೆ ಇದೆ ಎಂದಿದ್ದಾರೆ. ಹೀಗಾಗಿ ಇಶಾನ್ ಕಿಶನ್ '2 in 1' ಆಟಗಾರ ಎಂದು ಬಣ್ಣಿಸಿದ್ದಾರೆ.

ತಮ್ಮ ಯೂಟ್ಯಬ್ ಚಾನೆಲ್ನಲ್ಲಿ ಮಾತನಾಡಿರುವ ಅವರು ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಮಧ್ಯೆ ಸ್ಥಾನಕ್ಕಾಗ ಯಾವುದೇ ಸ್ಪರ್ಧೆ ಇಲ್ಲ ಎಂದಿದ್ದಾರೆ. ಇಶಾನ್ ಕಿಶನ್ ತಂಡದಲ್ಲಿ ಸಾಕಷ್ಟು ಸ್ಥಾನಗಳನ್ನು ತುಂಬಬಲ್ಲವರಾಗಿರುವುದು ಇದಕ್ಕೆ ಕಾರಣ ಎಂದಿದ್ದಾರೆ ಅಶ್ವಿನ್. ಈ ಬಾರಿಯ ವಿಶ್ವಕಪ್ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕೆಎಲ್ ರಾಹುಲ್ ಜೊತೆಗೆ ಇಶಾನ್ ಆಯ್ಕೆಯಾಗಿದ್ದಾರೆ.
"ಇದು ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಮಧ್ಯೆಯ ಸ್ಪರ್ಧೆ ಅಲ್ಲ. ಯಾಕೆಂದರೆ ಇಶಾನ್ ಕಿಶನ್ ಸಾಕಷ್ಟು ಸ್ಥಾನಗಳನ್ನು ತುಂಬಬಲ್ಲರು. 15 ಆಟಗಾರ ಪಡೆಯನ್ನು ಆಯ್ಕೆ ಮಾಡುವಾಗ ಬ್ಯಾಕ್ಅಪ್ ವಿಕೆಟ್ ಕೀಪರ್ಅನ್ನು ಆಯ್ಕೆ ಮಾಡಬೇಕಾಗುತ್ತದೆ. ರಣಜಿ ಟ್ರೋಫಿಗೆ ಆಯ್ಕೆ ಮಾಡುವಾಗಲೂ ಇಬ್ಬರು ವಿಕೆಟ್ ಕೀಪರನ್ನು ಆಯ್ಕೆ ಮಾಡುತ್ತೇವೆ" ಎಂದಿದ್ದಾರೆ ಆರ್ ಅಶ್ವಿನ್.
"ಇಶಾನ್ ಕಿಶನ್ ಬ್ಯಾಕಪ್ ವಿಕೆಟ್ ಕೀಪರ್ ಮಾತ್ರವಲ್ಲ, ಬ್ಯಾಕಪ್ ಆರಂಭಿಕ ಆಟಗಾರ ಕೂಡ. ಆತ 2 in 1 ಆಟಗಾರ. ಈಗ ಇಶಾನ್ ಕಿಶನ್ ಐದನೇ ಕ್ರಮಾಂಕದಲ್ಲಿಯೂ ಯಶಸ್ಸು ಕಂಡಿದ್ದಾರೆ. ಇದರಿಂದಾಗಿ ಭಾರತ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಇಬ್ಬರು ಎಡಗೈ ಬ್ಯಾಟರ್ಗಳು ಕೂಡ ದೊರೆತಂತಾಗುತ್ತದೆ. ಎಲ್ಲರೂ ಕೂಡ ಎಡಗೈ ಆಟಗಾರರ ಮೇಲೆ ಮುಗಿ ಬೀಳುತ್ತಿದ್ದರು ಮತ್ತು ಇಶಾನ್ ಕಿಶನ್ ಐದಮೇ ಕ್ರಮಾಂಕದಲ್ಲಿ ಆಡಲುಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಆದರೆ ಅವರು ಅದನ್ನು ಸಾಧ್ಯವಾಗಿಸಿದ್ದಾರೆ" ಎಂದಿದ್ದಾರೆ ಆರ್ ಅಶ್ವಿನ್.
2007ರ ವಿಶ್ವಕಪ್ನಲ್ಲಿ ಲೀಗ್ ಹಂತದಿಂದ ಹೊರಬಿದ್ದ ಬಳಿಕ ಭಾರತ ತಂಡ ವಿಶ್ವಕಪ್ನಲ್ಲಿ ಪ್ರತಿ ಬಾರಿಯೂ ಐಶಸ್ಸು ಕಾಣುತ್ತಾ ಬಂದಿದೆ. 2011ರಲ್ಲಿ ತವರಿನಲ್ಲಿ ವಿಶ್ವಕಪ್ ಗೆದ್ದು ಬೀಗಿದ್ದ ಬಾರತ 2015 ಹಾಗೂ 2019ರಲ್ಲಿ ಸೆಮಿಫೈನಲ್ಗೆ ಪ್ರವೇಶಿಸಿ ನಿರ್ಗಮಿಸಿತ್ತು. ಆದರೆ ಕಳೆದ ಒಂದು ದಶಕದಲ್ಲಿ ಯಾವುದೇ ಐಸಿಸಿ ಟ್ರೋಫಿ ಗೆಲ್ಲದ ಕಾರಣ ತಂಡದ ಮೇಲೆ ಒತ್ತಡ ಹೆಚ್ಚಾಗುತ್ತಲೇ ಬಂದಿದೆ.