
ರವೀಂದ್ರ ಜಡೇಜಾ ಮತ್ತು ಶುಬ್ಮನ್ ಗಿಲ್ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವುದು ಅನುಮಾನ
ಟೀಮ್ ಇಂಡಿಯಾದ ಪ್ರಮುಖ ಆಲ್-ರೌಂಡರ್ ರವೀಂದ್ರ ಜಡೇಜಾ ಮತ್ತು ಆರಂಭಿಕ ಆಟಗಾರ ಶುಬ್ ಮನ್ ಗಿಲ್ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳುವುದು ಅನುಮಾನ ಎನ್ನಲಾಗುತ್ತಿದೆ. ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿರುವ ಪ್ರಕಾರ ರವೀಂದ್ರ ಜಡೇಜಾ ಮತ್ತು ಶುಬ್ ಮನ್ ಗಿಲ್ ಇಬ್ಬರೂ ಸಹ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಾಗುವುದಿಲ್ಲ ಎನ್ನಲಾಗಿದೆ.

ಜಡೇಜಾ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿಯೂ ಹೊರಗುಳಿದಿದ್ದರು
ಬಲ ಮುಂದೋಳಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ರವೀಂದ್ರ ಜಡೇಜಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ತಪ್ಪಿಸಿಕೊಳ್ಳುವುದು ಮಾತ್ರವಲ್ಲದೇ ಇತ್ತೀಚೆಗಷ್ಟೇ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿಯೂ ಕೂಡ ಇದೇ ಗಾಯದ ಸಮಸ್ಯೆಯಿಂದ ಹೊರ ಬಿದ್ದಿದ್ದರು. ಹೌದು, ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಿದ್ದ ರವೀಂದ್ರ ಜಡೇಜಾ ನಂತರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.

ಟೀಮ್ ಇಂಡಿಯಾ ಆಟಗಾರರಿಗೆ ಕಾಡುತ್ತಿದೆ ಗಾಯದ ಸಮಸ್ಯೆ
ರವೀಂದ್ರ ಜಡೇಜಾ, ಶುಬ್ ಮನ್ ಗಿಲ್ ಮಾತ್ರವಲ್ಲದೇ ಅಕ್ಷರ್ ಪಟೇಲ್ ಹಾಗೂ ಇಶಾಂತ್ ಶರ್ಮಾ ಕೂಡ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ರವೀಂದ್ರ ಜಡೇಜಾ ಹಾಗೂ ಶುಬ್ ಮನ್ ಗಿಲ್ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳುವುದರಲ್ಲಿ ಅನುಮಾನ ಮೂಡಿಸಿದ್ದರೆ, ಅಕ್ಷರ್ ಪಟೇಲ್ ಅವರನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕಳುಹಿಸಬೇಕಾ ಅಥವಾ ಇಲ್ಲವಾ ಎಂಬ ವಿಷಯವನ್ನು ಆಯ್ಕೆಗಾರರು ಅಕ್ಷರ್ ಪಟೇಲ್ ಅವರ ವೈದ್ಯಕೀಯ ಚಿಕಿತ್ಸೆಯ ನಂತರ ತೀರ್ಮಾನಿಸಲಿದ್ದಾರೆ.


Click it and Unblock the Notifications
