
ಚೆನ್ನೈ: ಭಾರತದಲ್ಲಿ ಕೋವಿಡ್-19 ಎರಡನೇ ಅಲೆಯ ವೇಳೆ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್, ಆಮ್ಲಜನಕ ಪೂರೈಕೆಯ ಕೊರತೆಯಾಗುತ್ತಿದೆ. ದೇಶದಲ್ಲಿ ಮತ್ತೆ ಅಲ್ಲಲ್ಲಿ ಲಾಕ್ಡೌನ್ ಘೋಷಿಸಲಾಗಿದೆ. ಪಿಡುಗಿನಿಂದಾಗಿ ಜನಜೀವನ ಸಮಸ್ಯೆಗೆ ಸಿಲುಕುತ್ತಿದೆ.
ದೇಶದಲ್ಲಿ ಆತಂಕ ಮಟ್ಟದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸುವಂತೆ, ಸುರಕ್ಷಿತರಾಗಿರುವಂತೆ ಇಂಡಿಯನ್ ಪ್ರೀಮಿಯರ್ ಲೀಗ್ನ ಬಲಿಷ್ಠ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ನ ಆಲ್ ರೌಂಡರ್ಗಳಾದ ರವೀಂದ್ರ ಜಡೇಜಾ ಮತ್ತು ಸುರೇಶ್ ರೈನಾ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಟ್ವೀಟ್ ಮಾಡಿರುವ ರವೀಂದ್ರ ಜಡೇಜಾ, 'ಕೋವಿಡ್-19 ವಿರುದ್ಧ ನಾವು ಹೋರಾಡಬೇಕಾದರೆ ನಾವು ಹಿಂದೆಂದಿಗಿಂತಲೂ ಹೆಚ್ಚು ಒಗ್ಗಟ್ಟು ಪ್ರದರ್ಶಿಸಬೇಕಿದೆ. ದಯವಿಟ್ಟು ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಸರ್ಕಾರ ಹೇಳಿರುವ ನಿಯಮಗಳನ್ನು ಪಾಲಿಸಿ,' ಎಂದು ವಿನಂತಿಸಿಕೊಂಡಿದ್ದಾರೆ.
ಸುರೇಶ್ ರೈನಾ ಕೂಡ ಟ್ವೀಟ್ ಮಾಡಿದ್ದಾರೆ. ಟ್ವೀಟ್ನಲ್ಲಿ 'ಭಾರತವೀಗ ಕೊರೊನಾ ಬಿಕ್ಕಟ್ಟಿನ ಎದುರು ಹೋರಾಡುತ್ತಿದೆ. ಆರೋಗ್ಯ ಸೌಲಭ್ಯಗಳು ಮೆಲ್ಲನೆ ಹಾಳಾಗುತ್ತಿದೆ. ಸಂಪನ್ಮೂಲಗಳು ಬರಿದಾಗುತ್ತಿವೆ, ಹೆಚ್ಚು ಜೀವಗಳು ಸಮಸ್ಯೆಗೆ ಸಿಲುಕುತ್ತಿವೆ. ನಿಮ್ಮ ಪ್ರೀತಿಪಾತ್ರರು ಯುದ್ಧ ಮಾಡುವುದನ್ನು ನೋಡುವುದಕ್ಕೆ ಹೊರತಾಗಿ ಬೇರೆ ನೋವಿನ ಸಂಗತಿಯಿಲ್ಲ,' ಎಂದು ಬರೆದುಕೊಳ್ಳಲಾಗಿದೆ.