
ಮ್ಯಾಥ್ಯೂ ಕುಹ್ನೆಮನ್ ಆಸ್ಟ್ರೇಲಿಯಾದ ಭರವಸೆಯ ಸ್ಪಿನ್ ಬೌಲರ್, ದೆಹಲಿಯಲ್ಲಿ ನಡೆದ ಭಾರತದ ವಿರುದ್ಧದ ಸರಣಿಯ ಎರಡನೇ ಟೆಸ್ಟ್ನಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. 5 ಇನ್ನಿಂಗ್ಸ್ಗಳಲ್ಲಿ 9 ವಿಕೆಟ್ ಪಡೆಯುವ ಮೂಲಕ ಈಗಾಗಲೇ ಸಾಕಷ್ಟು ಭರವಸೆ ಮೂಡಿಸಿದ್ದಾರೆ.
ಇಂದೋರ್ ನಲ್ಲಿ ನಡೆದ ಮೂರನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಕುಹ್ನೆಮನ್ 5 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆಸ್ಟ್ರೇಲಿಯಾ ಈ ಟೆಸ್ಟ್ನಲ್ಲಿ 9 ವಿಕೆಟ್ಗಳ ಜಯ ಸಾಧಿಸಿ ವೈಟ್ ವಾಶ್ ಆಗುವುದನ್ನು ತಪ್ಪಿಸಿಕೊಂಡಿತ್ತು.
ಸದ್ಯ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮುಕ್ತಾಯವಾಗಿದ್ದು, ಯುವ ಬೌಲರ್ ಮ್ಯಾಥ್ಯೂ ಕುಹ್ನೆಮನ್ ಭಾರತದ ಪ್ರಮುಖ ಸ್ಪಿನ್ನರ್ ರವೀಂದ್ರ ಜಡೇಜಾರಿಂದ ಭಾರತದಲ್ಲಿ ಬೌಲಿಂಗ್ ಮಾಡುವ ಬಗ್ಗೆ ಮುಖ್ಯವಾದ ಸಲಹೆ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಸರಣಿ ಮುಕ್ತಾಯವಾದ ಬಳಿಕ ರವೀಂದ್ರ ಜಡೇಜಾ ಉಪಖಂಡದಲ್ಲಿ ಯಾವ ಲೈನ್, ಲೆಂಗ್ತ್ ಮತ್ತು ವೇಗದಲ್ಲಿ ಬೌಲಿಂಗ್ ಮಾಡಿದರೆ ಉತ್ತಮ ಎನ್ನುವ ಬಗ್ಗೆ ಕುಹ್ನೆಮನ್ಗೆ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಅಲ್ಲದೆ ಇನ್ಸ್ಟಾಗ್ರಾಂನಲ್ಲಿ ಕೂಡ ಹಲವು ಸಂದೇಶಗಳನ್ನು ಕಳುಹಿಸಿದ್ದಾರೆ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಜಡೇಜಾ ಜೊತೆ ಮಹತ್ವದ ಮಾತುಕತೆ
ಜಡೇಜಾ ಅವರೊಂದಿಗೆ ಬೌಲಿಂಗ್ ಬಗ್ಗೆ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿರುವುದಾಗಿ ಕುಹ್ನೆಮನ್ ಹೇಳಿದ್ದಾರೆ. ಉಪ-ಖಂಡದ ಪರಿಸ್ಥಿತಿಗಳಲ್ಲಿ ಬೌಲಿಂಗ್ ಮಾಡಲು ಸಲಹೆಗಳನ್ನು ನೀಡಿದ್ದು, ಆಸ್ಟ್ರೇಲಿಯಾದಲ್ಲಿ ಕೂಡ ಆ ಸಲಹೆಗಳನ್ನು ಬಳಸಬಹುದು ಎಂದು ಹೇಳಿದ್ದಾಗಿ ಕುಹ್ನೆಮನ್ ತಿಳಿಸಿದ್ದಾರೆ.
"ಸುಮಾರು 15 ನಿಮಿಷಗಳ ಕಾನ ಅವರು ನನಗೆ ಕೆಲವು ಅದ್ಭುತವಾದ ಸಲಹೆಗಳನ್ನು ನೀಡುತ್ತಿದ್ದರು. ನಾವು ಎಲ್ಲದರ ಬಗ್ಗೆ ಮಾತನಾಡಿದ್ದೇವೆ. ನಾಥನ್ ಲಿಯಾನ್ ಕೂಡ ನನಗೆ ಸಹಾಯ ಮಾಡಿದರು. ಜಡೇಜಾ ನನ್ನ ಬೌಲಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು, ಅದನ್ನು ಕೇಳಲು ಸಾಕಷ್ಟು ಖುಷಿಯಾಗಿದೆ" ಎಂದು ಹೇಳಿದರು.

ಮುಂದಿನ ಬಾರಿ ಭಾರತದಲ್ಲಿ ಆಡುವಾಗ ಸಹಾಯ
"ಮುಂದಿನ ಬಾರಿ ಉಪಖಂಡದಲ್ಲಿ ಆಡುವಾಗ ಬೌಲಿಂಗ್ ಮಾಡಲು ನನಗೆ ಕೆಲವು ಉತ್ತಮ ಸಲಹೆಗಳನ್ನು ನೀಡಿದರು, ಆಸ್ಟ್ರೇಲಿಯಾದಲ್ಲಿ ಬೌಲಿಂಗ್ ಮಾಡುವ ಬಗ್ಗೆ ಹಲವು ಸಲಹೆ ನೀಡಿದ್ದಾರೆ. ಅವರು ನಿಜಕ್ಕೂ ಉತ್ತಮವಾಗಿದ್ದರು, ಯಾವುದೇ ಸಮಯದಲ್ಲಿ ಸಲಹೆ ಪಡೆಯಲು ಸಂಪರ್ಕಿಸುವಂತೆ ಹೇಳಿದರು. ಇನ್ಸ್ಟಾಗ್ರಾಂನಲ್ಲಿ ನನಗೆ ಸಂದೇಶವನ್ನು ಸಹ ಕಳಿಸಿದ್ದಾರೆ, ಅವರೊಂದಿಗಿನ ಭೇಟಿ ಉತ್ತಮವಾಗಿತ್ತು" ಎಂದು ಹೇಳಿದರು.
ಮೊದಲನೇ ಟೆಸ್ಟ್ಗಾಗಿ ಕುಹ್ನೆಮನ್ರನ್ನು ಆಯ್ಕೆ ಮಾಡಿರಲಿಲ್ಲ, ಆದರೆ ನಾಗ್ಪುರ ಟೆಸ್ಟ್ನಲ್ಲಿ ಸೋತ ಬಳಿಕ ಕುಹ್ನೆಮನ್ರನ್ನು ಆಷ್ಟನ್ ಅಗರ್ ಬದಲಾಗಿ ತಂಡಕ್ಕೆ ಸೇರ್ಪಡೆ ಮಾಡಲಾಯಿತು. ಕುಹ್ನೆಮನ್ ಇಂದೋರ್ ಟೆಸ್ಟ್ನ ಎರಡೂ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಪಡೆದು ಸಂಭ್ರಮಿಸಿದ್ದರು.