ಲಂಡನ್, ಜುಲೈ 03: ತಮ್ಮನ್ನು ಚೂರು ಪಾರು ಆಟಗಾರ ಎಂದು ಕರೆದು ಅಪಮಾನಿಸಿದ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೆಕರ್ಗೆ ಟೀಮ್ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಖಡಕ್ ಉತ್ತರದ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಕಳೆದ ಭಾನುವಾರ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿದ ಬಳಿಕ ಬಾಂಗ್ಲಾ ವಿರುದ್ಧದ ಪಂದ್ಯಕ್ಕೆ ಜಡೇಜಾ ಸೇರ್ಪಡೆಯ ಸಾಧ್ಯತೆ ಕುರಿತಾಗಿ ಮಾತನಾಡುವ ಸಂದರ್ಭದಲ್ಲಿ ಮಾಂಜ್ರೆಕರ್ "ಚೂರು ಪಾರು ಆಟಗಾರ'' ಎಂದು ಕರೆದು ಇದೀಗ ಸರ್ ಜಡೇಜಾ ಅವರ ಕೋಪಕ್ಕೆ ಗುರಿಯಾಗಿದ್ದಾರೆ.
ಸಂಜಯ್ ಅವರ ಈ ಹೇಳಿಕೆಗೆ ಟ್ವಿಟರ್ ಮೂಲಕ ಉತ್ತರ ನೀಡಿರುವ ಜಡೇಜಾ, "ನಿಮಗಿಂತಲೂ ನಾನು ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ, ಈಗಲೂ ಆಡುತ್ತಿದ್ದೇನೆ. ಸಾಧನೆ ಮಾಡಿರುವವರ ಬಗ್ಗೆ ಗೌರವವಿರಲಿ. ಸಂಜಯ್ ಮಾಂಜ್ರೆಕರ್ ನಿಮ್ಮ ಮಾತಿನ ಭೇದಿ ಕೇಳಿ ಸಾಕಾಗಿದೆ,'' ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.
ಅಂಬಾಟಿ ರಾಯುಡು ನಿವೃತ್ತಿ ಬಗ್ಗೆ ಗುಡುಗಿದ ಗೌತಮ್ ಗಂಭೀರ್!
ಇದಕ್ಕೂ ಮುನ್ನ "ನಾನು ಚೂರು ಪಾರು ಆಟಗಾರನ ಅಭಿಮಾನಿಯಲ್ಲ. ರವೀಂದ್ರ ಜಡೇಜಾ ತಮ್ಮ ವೃತ್ತಿ ಬದುಕಿನ ಈ ಘಟ್ಟದಲ್ಲಿ ಚೂರು ಪಾರು ಆಟಗಾರನಾಗಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅವರು ಅಪ್ಪಟ ಬೌಲರ್. ಆದರೆ ಒಡಿಐ ಕ್ರಿಕೆಟ್ಗೆ ನಾನು ಜಡೆಜಾ ಬದಲಾಗಿ ಸಂಪೂರ್ಣ ಬ್ಯಾಟ್ಸ್ಮನ್ ಅಥವಾ ಸ್ಪಿನ್ನರ್ ಆಯ್ಕೆ ಮಾಡಿಕೊಳ್ಳುತ್ತೇನೆ," ಎಂದು ಕುಲ್ದೀಪ್ ಅಥವಾ ಚಹಲ್ ಅವರ ಬದಲಾಗಿ ಜಡೇಜಾಗೆ ಸ್ಥಾನ ಸಿಗಬಲ್ಲದೆ ಎಂದು ಕೇಳಲಾದ ಪ್ರಶ್ನೆಗೆ ಮಾಂಜ್ರೆಕರ್ ಉತ್ತರಿಸಿದ್ದರು.
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ರವೀಂದ್ರ ಜಡೇಜಾಗೆ ಆಡುವ 11ರ ಬಳಗದಲ್ಲಿ ಅವಕಾಶ ಲಭ್ಯವಾಗಿಲ್ಲ. ತಂಡದ ಕೆಳ ಕ್ರಮಾಂಕದ ಬ್ಯಾಟಿಂಗ್ ದುರ್ಬಲವಾಗಿದ್ದು, ಬ್ಯಾಟಿಂಗ್ ಬಲ ಹೆಚ್ಚಿಸಲು ಕುಲ್ದೀಪ್ ಅಥವಾ ಚಹಲ್ ಅವರ ಬದಲಾಗಿ ಬೌಲಿಂಗ್ ಆಲ್ರೌಂಡರ್ ಜಡೇಜಾಗೆ ಅವಕಾಶ ನೀಡಬೇಕೆಂಬ ಕೂಗು ಸತತವಾಗಿ ಕೇಳಿಬಂದಿದೆ.
ರಾಯುಡು ಬೇಡ ಮಯಾಂಕ್ ಬೇಕೆಂದಿದ್ದು, ಕೊಹ್ಲಿ ಮತ್ತು ಶಾಸ್ತ್ರಿ!
ಅಂದಹಾಗೆ ಜಡೇಜಾ, ತಂಡದ ಫೀಲ್ಡಿಂಗ್ ವಿಭಾಗದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದು, ಬದಲಿ ಆಟಗಾರನಾಗಿ ಕ್ಷೇತ್ರ ರಕ್ಷಣಗೆ ಇಳಿದ ಸಂದರ್ಭದಲ್ಲೆಲ್ಲಾ ಅದ್ಭುತ ಕ್ಯಾಚ್ಗಳನ್ನು ಹಿಡಿದು ಮಿಂಚಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಡೈವಿಂಗ್ ಕ್ಯಾಚ್ ಮೂಲಕ ಜೇಸನ್ ರಾಯ್ ವಿಕೆಟ್ ಪತನಕ್ಕೆ ಕಾರಣರಾಗಿದ್ದರು. ಜಡೇಜಾ ಅವರ ಈ ಅದ್ಭುತ ಕ್ಯಾಚ್ನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದೇ ವೇಳೆ ಟೀಮ್ ಇಂಡಿಯಾದ ಸಹಾಯಕ ಕೋಚ್ ಸಂಜಯ್ ಬಾಂಗರ್, ಮುಂದಿನ ಪಂದ್ಯಗಳಲ್ಲಿ ಜಡೇಜಾ ಅವರನ್ನು ಆಡಿಸುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದರು.