ಭಾರತ ತಂಡ ಸದ್ಯ ವಿಶ್ರಾಂತಿಯಲ್ಲಿದೆ. ಬಳಿಕ ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್ಗಳ ಪಂದ್ಯವನ್ನು ತವರಿನಲ್ಲಿ ಆಡಲಿದೆ. ಇದಾದ ಬಳಿಕ ಪಾಕಿಸ್ತಾನ ಆಯೋಜಿಸಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲಿದೆ. ಇನ್ನೇನು ಟೀಮ್ ಇಂಡಿಯಾವನ್ನು ಚಾಂಪಿಯನ್ಸ್ ಟ್ರೋಫಿಗೆ ಪ್ರಕಟಿಸಬೇಕಿದೆ. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಒಬ್ಬರು ಇನ್ಸ್ಟಾಗ್ರಾಮ್ನಲ್ಲಿ ಮಾಡಿರುವ ಪೋಸ್ಟ್ ಒಂದು ಸಖತ್ ಸುದ್ದಿ ಮಾಡುತ್ತಿದೆ. ಹಾಗಿದ್ದರೆ ಆ ಪೋಸ್ಟ್ ಮಾಡಿದ ಆಟಗಾರ ಯಾರು? ಪೋಸ್ಟ್ ನಲ್ಲಿ ಏನಿದೆ ಎಂಬ ಕುರಿತಾದ ಸ್ಟೋರಿ ಇಲ್ಲಿದೆ.
ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ಈ ಸೋಲಿನ ನೋವಿಗಿಂತ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಬೇಸರ ತರಿಸಿದ ಸಂಗತಿ ಅಂದರೆ, ಸ್ಟಾರ್ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಿಸಿರುವುದು. ಸ್ಟಾರ್ ಸ್ಪಿನ್ ಬೌಲರ್ ಬ್ರಿಸ್ಬೇನ್ ನಲ್ಲಿ ನಡೆದ ಟೆಸ್ಟ್ ಬಳಿಕ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಇವರು ಕ್ರಿಕೆಟ್ಗೆ ಗುಡ್ ಬಾಯ್ ಹೇಳಿದ್ದು ಏಕೆ ಎಂಬ ಪ್ರಶ್ನೆಗಳಿಗೆ ಇನ್ನು ಅಭಿಮಾನಿಗಳಿಗೆ ಸರಿಯಾದ ಉತ್ತರ ಸಿಕ್ಕಿಲ್ಲ. ಈ ಮಧ್ಯೆ ಇನ್ನೊಬ್ಬ ಕ್ರಿಕೆಟ್ ಪ್ಲೇಯರ್ ಪೋಸ್ಟ್ ಸದ್ದು ಮಾಡುತ್ತಿದೆ.

ಭಾರತದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ತಮ್ಮ ಇನ್ಸ್ಟಾಗ್ರಾಮ್ ಒಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಬಳಿಕ ಹಲವು ಊಹಾಪೋಹಗಳು ಹುಟ್ಟಿಕೊಂಡಿವೆ. ಇವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಫೋಟೋ ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ಇತ್ತೀಚಿಗೆ ಸಿಡ್ನಿಯಲ್ಲಿ ತಾವು ಆಡಿದ ಜೆರ್ಸಿಯನ್ನು ಹಾಕಿದ್ದಾರೆ. ಈ ಫೋಟೋಗೆ ಯಾವುದೇ ಶೀರ್ಷಿಕೆ ಇಲ್ಲ. ಹೀಗಾಗಿ ನಿವೃತ್ತಿಯ ಬಗ್ಗೆ ಊಹಾಪೋಹಗಳು ತೀವ್ರ ಗೊಂಡಿವೆ.
2027ರ ವಿಶ್ವಕಪ್ ದೃಷ್ಟಿಯಿಂದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಟೀಮ್ ಮ್ಯಾನೇಜ್ಮೆಂಟ್ ನಿರತವಾಗಿದೆ. ಹೀಗಾಗಿ ಯುವ ಆಟಗಾರರತ್ತ ಮುಖ ಮಾಡಿದೆ. ಆಯ್ಕೆ ಸಮಿತಿ ಯಾವ ರೀತಿ ನಿರ್ಧಾರ ಕೈಗೊಳ್ಳುತ್ತದೆ ಎಂಬುದರ ಮೇಲೆ ಎಲ್ಲವೂ ನಿರ್ಧಾರವಾಗಲಿದೆ. ಆಯ್ಕೆ ಸಮಿತಿ ಚಾಂಪಿಯನ್ಸ್ ಟ್ರೋಫಿಗೆ ರವೀಂದ್ರ ಜಡೇಜಾ ಅವರ ಅನುಭವಕ್ಕೆ ಮಣೆ ಹಾಕುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ರವೀಂದ್ರ ಜಡೇಜಾ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ಬೌಲಿಂಗ್ನಲ್ಲೂ ಚುರುಕು ತನ ಕಡಿಮೆ ಆದಂತೆ ಕಾಣುತ್ತಿದೆ. ಹೀಗಾಗಿ ಇವರನ್ನು ಆಯ್ಕೆ ಸಮಿತಿ ಪರಿಗಣಿಸುತ್ತದೋ ಇಲ್ಲವೋ ಎಂಬುದೇ ದೊಡ್ಡ ಪ್ರಶ್ನೆ ಆಗಿದೆ. ಇತ್ತೀಚಿಗೆ ಮುಕ್ತಾಯಗೊಂಡ ಬಾರ್ಡರ್ ಗವಾಸ್ಕರ್ ಸರಣಿಯಲ್ಲೂ ಟೀಮ್ ಇಂಡಿಯಾ ಪರ ರವೀಂದ್ರ ಜಡೇಜಾ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರಿಗೆ ಅವಕಾಶ ನೀಡುವ ಬಗ್ಗೆಯೂ ಆಯ್ಕೆ ಸಮಿತಿ ಚಿಂತನೆ ನಡೆಸಲಿದೆ. ರವೀಂದ್ರ ಜಡೇಜಾ 2024 ಟಿ20 ವಿಶ್ವಕಪ್ ಬಳಿಕ ಚುಟುಕು ಫಾರ್ಮೆಟ್ಗೆ ವಿದಾಯ ಹೇಳಿದ್ದರು.
ಚಾಂಪಿಯನ್ಸ್ ಟ್ರೋಫಿಗೂ ಭಾರತ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಹಾಗೂ ಏಕದಿನ ಸರಣಿಗಳನ್ನು ಆಡಲಿದೆ. ಈ ವೇಳೆಯೂ ಇವರಿಗೆ ಅವಕಾಶ ಸಿಗುತ್ತದಾ ಎಂಬುದನ್ನು ಕಾದು ನೋಡಬೇಕಿದೆ.