
ನವದೆಹಲಿ, ಜನವರಿ 27: ಆಕ್ಲೆಂಡ್ನಲ್ಲಿ ನಡೆದಿದ್ದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ಬೌಲರ್ಗಳು ಮಹತ್ವದ ಪಾತ್ರ ವಹಿಸಿದ್ದರು. ಇಲ್ಲದಿದ್ದರೆ ಆರಂಭಿಕ ಪಂದ್ಯವನ್ನು ಸೋತಿದ್ದ ನ್ಯೂಜಿಲೆಂಡ್, ಎರಡನೇ ಪಂದ್ಯವನ್ನು ಗೆದ್ದುಕೊಳ್ಳುವ ಸಾಧ್ಯತೆಯಿತ್ತು.
ದ್ವಿತೀಯ ಪಂದ್ಯದಲ್ಲಿ ಮುಖ್ಯವಾಗಿ ಜಸ್ಪ್ರೀತ್ ಬೂಮ್ರಾ (21ಕ್ಕೆ 1 ವಿಕೆಟ್) ಮತ್ತು ರವೀಂದ್ರ ಜಡೇಜಾ (18ಕ್ಕೆ 2 ವಿಕೆಟ್) ಉತ್ತಮ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್ ವಿಭಾಗದಲ್ಲಿ ಕನ್ನಡಿಗ ಕೆಎಲ್ ರಾಹುಲ್ 57, ಶ್ರೇಯಸ್ ಐಯ್ಯರ್ 44 ರನ್ ಸೇರ್ಪಡೆಯೊಂದಿಗೆ ಟೀಮ್ ಇಂಡಿಯಾ 7 ವಿಕೆಟ್ ಸುಲಭ ಜಯ ಗಳಿಸಿತ್ತು.
ಉತ್ತಮ ಬ್ಯಾಟಿಂಗ್ ನೀಡಿದ್ದರಿಂದ ಪಂದ್ಯಶ್ರೇಷ್ಠ ಪ್ರಶಸ್ತಿ ರಾಹುಲ್ಗೆ ಲಭಿಸಿತ್ತು. ಆದರೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, ಪಂದ್ಯದ ಗೆಲುವಿನ ಕ್ರೆಡಿಟನ್ನು ಬೌಲರ್ಗಳಿಗೆ ನೀಡಿ ಟ್ವೀಟ್ ಮಾಡಿದ್ದರು. 'ಮ್ಯಾನ್ ಆಫ್ ದ ಮ್ಯಾಚ್ ನಿಜಕ್ಕೂ ಬೌಲರ್ಗೆ ಲಭಿಸಿಬೇಕಿತ್ತು,' ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದರು.
ಮಂಜ್ರೇಕರ್ ಕಾಲೆಳೆಯಲು ಬಯಸಿದ ಆಲ್ ರೌಂಡರ್ ಜಡೇಜಾ, 'ಹಾಗಾದರೆ ಆ ಬೌಲರ್ನ ಹೆಸರೇನು? ದಯವಿಟ್ಟು ತಿಳಿಸಿ' ಎಂದು ಮಂಜ್ರೇಕರ್ ಟ್ವೀಟ್ಗೆ ಪ್ರತಿಕ್ರಿಯಿಸಿದ್ದರು. ಇದಕ್ಕೆ ಉತ್ತರಿಸಿದ ಮಂಜ್ರೇಕರ್, 'ಒಂದೋ ನೀನು ಅಥವಾ ಬೂಮ್ರ. ಬೂಮ್ರಾ ಯಾಕೆಂದರೆ ಆತ 3, 10, 18, 20 ಓವರ್ಗಳನ್ನು ಮಾಡುವಾಗ ಉತ್ತಮ ಎಕಾನಮಿ ತೋರಿಸುತ್ತಾರೆ,' ಎಂದು ಬರೆದುಕೊಂಡಿದ್ದಾರೆ.
ಇಲ್ಲಿ ಗಮ್ಮತ್ತಿನ ಸಂಗತಿಯೆಂದರೆ ದ್ವಿತೀಯ ಟಿ20ಯಲ್ಲಿ ಅಸಲಿಗೆ ಬೂಮ್ರಾಗಿಂತ ಜಡೇಜಾ ಉತ್ತಮ ಸಾಧನೆ ತೋರಿದ್ದರು. ಮಂಜ್ರೇಕರ್ ನಿಜಕ್ಕೂ ಜಡೇಜಾ ಅವರನ್ನೇ ಹೆಸರಿಸಬೇಕಿತ್ತು. ಆದರೆ ಮಂಜ್ರೇಕರ್ಗೂ ಜಡೇಜಾಗೂ ಹಿಂದಿನಿಂದಲೂ ಅಷ್ಟಾಗಿ ಆಗಿಬರೋಲ್ಲ. ಹಾಗಾಗಿ ಜಡೇಜಾಗಿಂತ ಬೂಮ್ರಾರನ್ನು ಎತ್ತಿ ತೋರಿಸೋ ಪ್ರಯತ್ನ ಮಾಡಿ ಸಂಜಯ್ ತಮಾಷೆಗೀಡಾಗಿದ್ದಾರೆ.