
ಮ್ಯಾಂಚೆಸ್ಟರ್, ಜುಲೈ 11: ಐಸಿಸಿ ವಿಶ್ವಕಪ್ 2019ರ ಸೆಮಿಫೈನಲ್ನಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ವಿರೋಚಿತ ಹೋರಾಟದ ಹೊರತಾಗಿಯೂ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿತು. ಈ ಪಂದ್ಯದ ಬಳಿಕ ಜಡೇಜಾ ಟ್ವಿಟರ್ ನಲ್ಲಿ ಸ್ಫೂರ್ತಿದಾಯಕ ಸಂದೇಶ ರವಾನಿಸಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಬುಧವಾರ (ಜುಲೈ 10) ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ ನಲ್ಲಿ ನಡೆದ ಸೆಮಿಫೈನಲ್ನಲ್ಲಿ ವಿರಾಟ್ ಕೊಹ್ಲಿ ಬಳಗ, ಕೇನ್ ವಿಲಿಯಮ್ಸನ್ ಪಡೆ ಎದುರು 18 ರನ್ನಿಂದ ಸೋತಿತ್ತು. ಪಂದ್ಯದಲ್ಲಿ ಜಡೇಜಾ 59 ಎಸೆತಗಳಿಗೆ 77, ಧೋನಿ 50 ರನ್ ಬಾರಿಸಿದ್ದರು. ಫಲಿತಾಂಶ ಭಾರತದತ್ತ ವಾಲುವ ನಿರೀಕ್ಷೆ ಹುಟ್ಟಿತ್ತಾದರೂ ಧೋನಿ, ಜಡೇಜಾ ವಿಕೆಟ್ ಪತನದ ಬಳಿಕ ಭಾರತ ಸೋಲೊಪ್ಪಿಕೊಳ್ಳಲೇಬೇಕಾಯ್ತು.
ಸೆಮಿಫೈನಲ್ ಸೋಲಿನ ಬಳಿಕ ಟ್ವೀಟ್ ಮಾಡಿರುವ ಜಡೇಜಾ, 'ಕೆಳಗೆ ಬಿದ್ದಾಗೆಲ್ಲ ಎದ್ದು ನಿಲ್ಲೋದನ್ನು, ಯಾವತ್ತಿಗೂ ಹೋರಾಟ ನಿಲ್ಲಿಸದಿರೋದನ್ನು ಕ್ರೀಡೆ ನನಗೆ ಕಲಿಸಿಕೊಟ್ಟಿದೆ. ನನ್ನ ಸ್ಫೂರ್ತಿಯ ಮೂಲವಾಗಿರುವ ಪ್ರತೀ ಅಭಿಮಾನಿಗಳಿಗೂ ಅವರ ಬೆಂಬಲಕ್ಕೆ ತಕ್ಕ ಧನ್ಯವಾದ ಸಲ್ಲಿಸುತ್ತೇನೆ ಎಂದು ಭಾವಿಸಲಾರೆ. ಬೆಂಬಲಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಹೀಗೆ ಸ್ಫೂರ್ತಿ ತುಂಬುತ್ತಲೇ ಇರಿ; ನನ್ನ ಕೊನೇ ಉಸಿರು ಇರೋವರೆಗೂ ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಲೇ ಇರುತ್ತೇನೆ. ಲವ್ ಯೂ ಆಲ್' ಎಂದು ಬರೆದುಕೊಂಡಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಭಾರತ ಪರ ಅದ್ಭುತ ಪ್ರದರ್ಶನ ನೀಡಿದವರಲ್ಲಿ ಜಡೇಜಾ ಮೊದಲಿಗರು. 34 ರನ್ನಿಗೆ 1 ವಿಕೆಟ್, 2 ಕ್ಯಾಚ್ ಮತ್ತು 1 ಅದ್ಭುತ ರನ್ ಔಟ್ ಮೂಲಕ ಫೀಲ್ಡಿಂಗ್ನಲ್ಲೂ ಭಾರತಕ್ಕೆ ನೆರವಾಗಿದ್ದರು. ಆದರೆ ಬ್ಯಾಟಿಂಗ್ ವಿಭಾಗದ ವೈಫಲ್ಯದಿಂದ ಭಾರತ, ಕಿವೀಸ್ ನೀಡಿದ್ದ 240 ರನ್ ಗುರಿ ತಲುಪಲಾಗದೆ 49.3 ಓವರ್ನಲ್ಲೇ ಎಲ್ಲಾ ವಿಕೆಟ್ ಕಳೆದು 221 ರನ್ ಬಾರಿಸಿ ಶರಣಾಗಿತ್ತು.