

ಜಾಮ್ ನಗರ್(ಗುಜರಾತ್), ಮಾರ್ಚ್ 04: ಭಾರತದ ತಂಡದ ಸ್ಟಾರ್ ಆಟಗಾರ ರವೀಂದ್ರ ಜಡೇಜಾ ಅವರ ಪತ್ನಿ ರೀವಾ ಸೋಲಂಕಿ ಅಲಿಯಾಸ್ ರಿವಾಬಾ ಜಡೇಜಾ ಅವರು ಬಿಜೆಪಿ ಪರ ಪ್ರಚಾರಕ್ಕೆ ಅಣಿಯಾಗುತ್ತಿದ್ದಾರೆ.
ಕಾರ್ಣಿ ಸೇನಾದ ಮಹಿಳಾ ಘಟಕದ ಮಹಿಳಾ ಘಟಕದ ಮುಖ್ಯಸ್ಥೆಯಾಗಿರುವ ರಿವಾಬಾ ಅವರು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಸಕ್ರಿಯವಾಗಿ ರಾಜಕೀಯ ಕಣದಲ್ಲಿ ಕಾಣಿಸಿಕೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಂದು ಜಾಮ್ ನಗರದಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ರಿವಾಬಾ ಅವರು ಕೇಸರಿ ಬಾವುಟ ಹಿಡಿದು ಸ್ವಾಗತಿಸಲು ಸಜ್ಜಾಗಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ಸೆಲೆಬ್ರಿಟಿಗಳಿಗೆ ಬಿಜೆಪಿ ಗಾಳ ಹಾಕುತ್ತಿದೆ.ಅನೇಕ ಮಾಜಿ ಕ್ರಿಕೆಟರ್ ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಕೆಲವರನ್ನು ಸ್ಟಾರ್ ಪ್ರಚಾರಕರನ್ನಾಗಿ ಬಳಸಲು ಯೋಜನೆ ಹಾಕಿಕೊಂಡಿದೆ.
ರಿವಾಬಾ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದೇ ಬಿಂಬಿಸಲಾಗುತ್ತಿದೆ. ಪದ್ಮಾವತ್ ಚಿತ್ರ ಬಿಡುಗಡೆಗೆ ವಿರೋಧಿಸಿದ್ದ ಕಾರ್ಣಿ ಸೇನೆ ಸಾಕಷ್ಟು ಸದ್ದು ಮಾಡಿದ್ದು ಸುಳ್ಳಲ್ಲ.
ಗುಜರಾತ್ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಲವಾರು ಜಾತಿ, ಧರ್ಮ, ಮತ, ಪಂಥಗಳ ಜತೆ ಗುರುತಿಸಿಕೊಂಡ ಸಂಘಟನೆಗಳು ಕಣದಲ್ಲಿ ಕಾಣಿಸಿಕೊಂಡಿದ್ದವು. ಸ್ಟಾರ್ ಪ್ರಚಾರಕರನ್ನು ಕರೆ ತಂದು ಮತ ಸೆಳೆಯಲು ಯತ್ನಿಸುತ್ತಿವೆ. ಕ್ರಿಕೆಟರ್ ರವೀಂದ್ರ ಜಡೇಜ ಅವರ ಪತ್ನಿಯನ್ನು ಸ್ಟಾರ್ ಪ್ರಚಾರಕರಾಗಿ ಬಳಸಿಕೊಂಡಿದ್ದ ಕಾರ್ಣಿ ಸೇನಾ ಬೃಹತ್ ಸಮಾವೇಶ ನಡೆಸಿತ್ತು.
ರವೀಂದ್ರ ಜಡೇಜಾ ಹಾಗೂ ರಿವಾಬಾ ಅವರ ಮದುವೆಗೆ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಲಾಗಿತ್ತು. ನಂತರ ಮೋದಿ ನಿವಾಸಕ್ಕೆ ಭೇಟಿ ನೀಡಿದ ದಂಪತಿ ಮಾತುಕತೆ ನಡೆಸಿದ್ದರು. ಬಿಜೆಪಿ ಸರ್ಕಾರದ ಯೋಜನೆಗಳ ಪ್ರಚಾರವನ್ನು ದಂಪತಿ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.