ಬೆಂಗಳೂರು, ಜ. 05: ದೇವಧರ್ ಟ್ರೋಫಿಗಾಗಿ ಭಾರತ 'ಎ' ಹಾಗೂ 'ಬಿ' ತಂಡಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಪ್ರಕಟಿಸಿದೆ. ಎ ತಂಡಕ್ಕೆ ಬರೋಡಾ ಬ್ಯಾಟ್ಸ್ ಮನ್ ಅಂಬಟಿ ರಾಯುಡು ನಾಯಕರಾಗಿದ್ದರೆ, ಬಿ ತಂಡವನ್ನು ದೆಹಲಿಯ ಉನ್ಮುಕ್ತ್ ಚಂದ್ ಮುನ್ನಡೆಸಲಿದ್ದಾರೆ.
ದೇಶಿ ಪ್ರತಿಭೆಗಳನ್ನು ಗುರುತಿಸಲು ದೇವಧರ್ ಟ್ರೋಫಿ ಮಾನದಂಡವಾಗಿದ್ದು, ಈ ಬಾರಿಯ ರಣಜಿಯ ಸ್ಟಾರ್ ಆಟಗಾರರಾದ ಮುಂಬೈನ ಶ್ರೇಯಸ್ ಐಯರ್, ಬೆಂಗಾಲದ ಸುದೀಪ್ ಚಟರ್ಜಿ, ಅಸ್ಸಾಂನ ಪ್ರತಿಭೆ ಕೃಷ್ಣ ದಾಸ್ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕರ್ನಾಟಕದಿಂದ ಸ್ಟುವರ್ಟ್ ಬಿನ್ನಿ ಹಾಗೂ ಮಾಯಾಂಕ್ ಅಗರವಾಲ್ ಅವರು ಭಾರತ 'ಬಿ' ತಂಡದಲ್ಲಿ ಸ್ಥಾನ ಗಳಿಸಿದ್ದರೆ, ವೇಗಿ ಶ್ರೀನಾಥ್ ಅರವಿಂದ್ 'ಎ' ತಂಡದಲ್ಲಿದ್ದಾರೆ.
ಈ ಮುಂಚೆ ವಲಯವಾರು ಮಾದರಿಯಲ್ಲಿ ನಡೆಯುತ್ತಿದ್ದ ಟೂರ್ನಿಯ ಬದಲಿಗೆ ಭಾರತ 'ಎ' ಹಾಗೂ 'ಬಿ' ತಂಡಗಳು ವಿಜಯ್ ಹಜಾರೆ ಟ್ರೋಫಿ ವಿಜೇತ ಗುಜರಾತ್ ತಂಡದೊಡನೆ ಸೆಣಸಲಿವೆ. ತಲಾ 15 ಮಂದಿ ಸದಸ್ಯರಿರುವ ತಂಡಗಳಲ್ಲಿ ಹಿರಿಯ ಆಟಗಾರರ ಜೊತೆಗೆ ಯುವ ಪ್ರತಿಭೆಗಳು ಸ್ಥಾನ ಪಡೆದಿವೆ. ಜನವರಿ 24 ರಿಂದ 28ರ ತನಕ ನಡೆಯಲಿರುವ ಈ ಟೂರ್ನಿ 50 ನಿಗದಿತ ಓವರ್ ಗಳ ಪಂದ್ಯಾವಳಿಯಾಗಿದೆ.
ಭಾರತ 'ಎ': ಮುರಳಿ ವಿಜಯ್, ಜಲಜ್ ಸಕ್ಸೇನಾ, ಮಂದೀಪ್ ಸಿಂಗ್, ಅಂಬಟಿ ರಾಯುಡು (ನಾಯಕ), ಕೇದಾರ್ ಜಾಧವ್, ನಮನ್ ಓಝಾ, ಪರ್ವೇಜ್ ರಸೂಲ್, ಅಮಿತ್ ಮಿಶ್ರಾ, ಶಬಾಜ್ ನದೀಂ, ಸಿದ್ಧಾರ್ಥ್ ಕೌಲ್, ಶ್ರೀನಾಥ್ ಅರವಿಂದ್, ವರುಣ್ ಆರೋನ್, ಕೃಷ್ಣ ದಾಸ್, ಸುದೀಪ್ ಚಟರ್ಜಿ, ಫೈಜ್ ಫಜಲ್.
ಭಾರತ 'ಬಿ' : ಉನ್ಮುಕ್ತ್ ಚಂದ್ (ನಾಯಕ), ಮಾಯಾಂಕ್ ಅಗರವಾಲ್, ಬಾಬಾ ಅಪರಾಜಿತ್, ಶ್ರೇಯಸ್ ಐಯರ್, ಶೆಲ್ಡನ್ ಜಾಕ್ಸನ್, ದಿನೇಶ್ ಕಾರ್ತಿಕ್, ಸ್ಟುವರ್ಟ್ ಬಿನ್ನಿ, ಕರಣ್ ಶರ್ಮ, ಜಯಂತ್ ಯಾದವ್, ಧವಳ್ ಕುಲಕರ್ಣಿ, ನಾಥು ಸಿಂಗ್, ಶಾರ್ದೂಲ್ ಠಾಕೂರ್, ಪವನ್ ನೇಗಿ, ಸಚಿನ್ ಬೇಬಿ, ಸೂರ್ಯಕುಮಾರ್ ಯಾದವ್. (ಪಿಟಿಐ)