ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಪ್ರಮುಖ ಬ್ಯಾಟರ್ ರಜತ್ ಪಾಟಿದಾರ್ ಐಪಿಎಲ್ 2023ರ ಸಂಪೂರ್ಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹಿಮ್ಮಡಿ ಗಾಯದಿಂದ ಬಳಲುತ್ತಿರುವ ಅವರು ಎನ್ಸಿಎಯಲ್ಲಿ ಸದ್ಯ ಫಿಟ್ನೆಸ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಕೆಲವು ಪಂದ್ಯಗಳಿಗೆ ಅವರು ಲಭ್ಯವಿರುತ್ತಾರೆ ಎಂದು ಆರ್ ಸಿಬಿ ತಂಡ ಆಶಿಸಿತ್ತಾದರೂ, ಅವರು ಇಡೀ ಟೂರ್ನಿಗೆ ಅಲಭ್ಯರಾಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ. ಹಿಮ್ಮಡಿ ಗಾಯದ ಕಾರಣದಿಂದಾಗಿ ರಜತ್ ಪಾಟಿದಾರ್ ಐಪಿಎಲ್ 2023ರ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ ಎಂದು ಟ್ವಿಟರ್ ನಲ್ಲಿ ಪಾಟಿದಾರ್ ಭಾವಚಿತ್ರದ ಜೊತೆ ಸಂದೇಶವನ್ನು ಹಂಚಿಕೊಂಡಿದೆ.

ಕಳೆದ ಆವೃತ್ತಿಯಲ್ಲಿ ಆರ್ಸಿಬಿ ತಂಡದ ಪ್ರಮುಖ ಬ್ಯಾಟರ್ ಆಗಿದ್ದ ರಜತ್ ಪಾಟಿದಾರ್ ಈ ಬಾರಿ ಕೂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದರು. ಐಪಿಎಲ್ ಆರಂಭಕ್ಕೆ ಮುನ್ನವೇ ದೇಶೀಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಐಪಿಎಲ್ಗಾಗಿ ಆರ್ಸಿಬಿ ತಂಡವನ್ನು ಸೇರಿಕೊಳ್ಳುವ ಕೆಲವೇ ದಿನಗಳ ಮುನ್ನ ಅಭ್ಯಾಸದ ಸಮಯದಲ್ಲಿ ಹಿಮ್ಮಡಿ ಗಾಯಕ್ಕೆ ತುತ್ತಾಗಿದ್ದರು.
ಎನ್ಸಿಎಗೆ ಹಾಜರಾಗಿದ್ದ ಅವರು ಸ್ಕ್ಯಾನ್ಗೆ ಒಳಗಾಗಿದ್ದರು. ತಮ್ಮ ಫಿಟ್ನೆಸ್ ಮೇಲೆ ಹೆಚ್ಚಿನ ಕೆಲಸ ಮಾಡಲು ಪಾಟಿದಾರ್ ಎನ್ಸಿಎನಲ್ಲೇ ಉಳಿದುಕೊಂಡಿದ್ದರು. ಪಾಟಿದಾರ್ ಅವರನ್ನು ಹತ್ತಿರದಿಂದ ಗಮನಿಸಿರುವ ಫಿಸಿಯೋಗಳು, ಎಲ್ಲಾ ರೀತಿಯಲ್ಲಿ ಪರೀಕ್ಷೆ ನಡೆಸಿದ ಬಳಿಕ ವರದಿ ನೀಡಿದ್ದು, ಅವರು ಐಪಿಎಲ್ನಲ್ಲಿ ಹೊರಗುಳಿಯುವುದು ಅನಿವಾರ್ಯವಾಗಿದೆ. ಪ್ರಮುಖ ಬ್ಯಾಟರ್ ತಂಡದಿಂದ ಹೊರಗುಳಿದಿರುವುದು ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.
ಬದಲೀ ಆಟಗಾರನ ಆಯ್ಕೆ ಸದ್ಯಕ್ಕಿಲ್ಲ
ರಜತ್ ಪಾಟಿದಾರ್ ಅಲಭ್ಯರಾದ ಬೆನ್ನಲ್ಲೇ ತಕ್ಷಣವೇ ಬದಲೀ ಆಟಗಾರನನ್ನು ಆಯ್ಕೆ ಮಾಡದಿರಲು ತಂಡದ ಮ್ಯಾನೇಜ್ಮೆಂಟ್ ಮತ್ತು ಕೋಚ್ ನಿರ್ಧರಿಸಿದ್ದಾರೆ. ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಬದಲೀ ಆಟಗಾರನನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಅಥವಾ ಇರುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ಉದ್ದೇಶ ಕೂಡ ಮ್ಯಾನೇಜ್ಮೆಂಟ್ಗೆ ಇರಬಹುದು.
ಕಳೆದ ಆವೃತ್ತಿಯಲ್ಲಿ ರಜತ್ ಪಾಟಿದಾರ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು, ಆರ್ ಸಿಬಿಯ ಲವ್ನಿತ್ ಸಿಸೋಡಿಯಾ ಗಾಯಗೊಂಡ ಬಳಿಕ ಬದಲೀ ಆಟಗಾರನಾಗಿ ತಂಡವನ್ನು ಸೇರಿಕೊಂಡ ರಜತ್ ಪಾಟಿದಾರ್ ಮಿಂಚು ಹರಿಸಿದ್ದರು. 2022ರ ಐಪಿಎಲ್ನಲ್ಲಿ 7 ಇನ್ನಿಂಗ್ಸ್ಗಳಲ್ಲಿ 333 ರನ್ ಗಳಿಸಿ ಮಿಂಚಿದ್ದರು. ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಮೋಘ 112 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಕಾರಣವಾಗಿದ್ದರು.

ಪ್ರಮುಖ ಆಟಗಾರರಿಗೆ ಗಾಯದ ಸಮಸ್ಯೆ
ತಂಡದ ಪ್ರಮುಖ ಆಲ್ರೌಂಡರ್ ವಿಲ್ ಜ್ಯಾಕ್ಸ್ ಕೂಡ ಗಾಯದ ಕಾರಣದಿಂದ ಐಪಿಎಲ್ ಆರಂಭಕ್ಕೆ ಮುನ್ನವೇ ಹೊರಬಿದ್ದಿದ್ದರು. ಪ್ರಮುಖ ವೇಗದ ಬೌಲರ್ ಜೋಶ್ ಹೇಜಲ್ವುಡ್ ಕೂಡ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಮೊದಲಾರ್ಧದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಮತ್ತೊಬ್ಬ ವೇಗಿ ರೀಸ್ ಟೋಪ್ಲಿ ಕೂಡ ಮೊದಲನೇ ಪಂದ್ಯದ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿದ್ದು, ಎರಡನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಮೊದಲನೇ ಪಂದ್ಯದಲ್ಲಿ ಮುಂಬ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಏಪ್ರಿಲ್ 6ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.