ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಮೊಹಮ್ಮದ್ ಸಿರಾಜ್ ಅತ್ಯುತ್ತಮ ಬೌಲಿಂಗ್ ಮೂಲಕ ಸಾಕಷ್ಟು ಗಮನ ಸೆಳೆದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವರು 6 ಕ್ಕಿಂತ ಕಡಿಮೆ ಎಕಾನಮಿ ಹೊಂದಿದ್ದಾರೆ. ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿರುವ ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಹಿಂದಿನ ರಹಸ್ಯವನ್ನು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಪ್ರಮುಖ ಬೌಲರ್ ಆಗಿರುವ ಮೊಹಮ್ಮದ್ ಸಿರಾಜ್ ಸದ್ಯ ಏಕದಿನ ಮಾದರಿಯಲ್ಲಿ ನಂಬರ್ 1 ಬೌಲರ್ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಟಿ20 ಮಾದರಿಯಲ್ಲಿ ಕೂಡ ತಮ್ಮ ಪ್ರದರ್ಶನವನ್ನು ಉತ್ತಮಪಡಿಸಿಕೊಂಡಿದ್ದಾರೆ. ಅದರಲ್ಲೂ ಈ ಬಾರಿಯ ಐಪಿಎಲ್ನಲ್ಲಿ ಪವರ್ ಪ್ಲೇನಲ್ಲಿ ವಿಕೆಟ್ ಪಡೆಯುವುದು ಮಾತ್ರವಲ್ಲದೆ ರನ್ ಗಳಿಸಲು ಕೂಡ ಕಡಿವಾಣ ಹಾಕಿದ್ದಾರೆ.

ಐಪಿಎಲ್ 2023ರ ಆವೃತ್ತಿಯಲ್ಲಿ ಮೊದಲನೇ ಪಂದ್ಯದಲ್ಲೇ ಭರ್ಜರಿ ಆರ್ ಸಿಬಿ ಗೆಲುವು ಕಂಡಿತು. ನಂತರ ಎರಡೂ ಪಂದ್ಯಗಳಲ್ಲಿ ಆರ್ ಸಿಬಿ ಸೋಲನುಭವಿಸಿತು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 82 ರನ್ ಸೋಲನ್ನು ಅನುಭವಿಸಿದರು, ನಂತರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಒಂದು ವಿಕೆಟ್ ಸೋಲನ್ನು ಅನುಭವಿಸಿದರು.

ಈ ವರ್ಷ ಬೌಲಿಂಗ್ನಲ್ಲಿ ಸುಧಾರಣೆಯಾಗಿರುವ ಬಗ್ಗೆ ಅವರು ಮಾತನಾಡಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಏನು ಬದಲಾವಣೆ ಆಗಿದೆ ಎನ್ನುವುದನ್ನು ಹೇಳಿದ್ದಾರೆ. ಕಳೆದ ವರ್ಷದವರೆಗೆ ಸಿರಾಜ್, ಜನಗಳು ಏನೆಂದುಕೊಳ್ಳುತ್ತಾರೆ ಎಂದು ಆಲೋಚಿಸುತ್ತಿದ್ದರಂತೆ, ಆದರೆ ಈ ಬಾರಿ ಅದರ ಬಗ್ಗೆ ಗಮನ ಹರಿಸುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.
"ಬೌಲಿಂಗ್ ಮಾಡುವ ವಿಧಾನ ಒಂದೇ ಆಗಿದೆ, ಆದರೆ ನಾನು ನನ್ನ ಮನಸ್ಥಿತಿಯನ್ನು ಬದಲಾಯಿಸಿದ್ದೇನೆ. ಇತರರು ನನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಕುರಿತು ನಾನು ಹೆಚ್ಚು ಯೋಚಿಸುತ್ತಿದ್ದೆ ಮತ್ತು ನನ್ನ ಬೌಲಿಂಗ್ನ ಮೇಲೆ ನಾನು ಅದರ ಮೇಲೆ ಕೇಂದ್ರೀಕರಿಸಿದೆ. ನಾನು ಈ ವರ್ಷ ನನ್ನ ಬೌಲಿಂಗ್ ಅನ್ನು ಆನಂದಿಸುತ್ತಿದ್ದೇನೆ ಮತ್ತು ಅದನ್ನು ಮುಂದುವರೆಸುತ್ತೇನೆ, ಇದು ನನಗೆ ವಿಕೆಟ್ಗಳನ್ನು ಪಡೆಯಲು ಸಹಾಯ ಮಾಡುತ್ತಿದೆ" ಎಂದು ಹೇಳಿದ್ದಾರೆ.

ಆರ್ಸಿಬಿ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿರುವ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹಲವು ಉತ್ತಮ ಅಂಶಗಳಿವೆ ಎಂದು ಹೇಳಿದರು. ಮುಂದಿನ ಪಂದ್ಯಗಳಲ್ಲಿ ಗೆಲ್ಲಲು ಮಾಡಬೇಕಾದ ವಿಷಯಗಳ ಬಗ್ಗೆ ಕೂಡ ಮಾತನಾಡಿದರು. "ಕಳೆದ ವರ್ಷ ನಾವು ಹೋರಾಡಿದ ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ಆಟದ ಕೆಲವು ಹಂತಗಳಲ್ಲಿ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳಲು ನೋಡುತ್ತಿದ್ದೇವೆ" ಎಂದು ಹೇಳಿದರು.
ಕಳೆದ ವರ್ಷ ಆರ್ ಸಿಬಿ ತಂಡದಲ್ಲಿ ಫಿನಿಶರ್ ಪಾತ್ರವನ್ನು ನಿರ್ವಹಿಸಿದ್ದ ದಿನೇಶ್ ಕಾರ್ತಿಕ್ ಈ ಬಾರಿ ಇನ್ನೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿಲ್ಲ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಒಂದು ರನ್ ಬೇಕಿದ್ದಾಗ ದಿನೇಶ್ ಕಾರ್ತಿಕ್ ಬಾಲ್ ಹಿಡದು ರನೌಟ್ ಮಾಡುವಲ್ಲಿ ವಿಫಲವಾಗಿದ್ದರು. ಒಂದು ವೇಳೆ ಡಿಕೆ ಆ ರನೌಟ್ ಮಾಡಿದ್ದರೆ ಪಂದ್ಯ ಟೈನಲ್ಲಿ ಅಂತ್ಯವಾಗುತ್ತಿತ್ತು. ಈ ಐಪಿಎಲ್ನ ಮೊದಲ ಸೂಪರ್ ಓವರ್ ನೋಡಬಹುದಾಗಿತ್ತು.