ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭಿಮಾನಿಗಳು ಇಟ್ಟುಕೊಂಡಿದ್ದ ಆಸೆಗೆ ಪೆಟ್ಟು ನೀಡಿತು. ಆರ್ಸಿಬಿ ತಂಡ ಈ ಬಾರಿ ಹರಾಜಿನಲ್ಲಿ ರಿಷಭ್ ಪಂತ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಬಿಡ್ ಮಾಡಿ ತಂಡಕ್ಕೆ ಸೇರಿಸಿಕೊಳ್ಳಬಹುದು ಎಂಬ ಆಸೆಗೆ ಪೆಟ್ಟು ಬಿದ್ದಿದೆ. ಆರಂಭದಲ್ಲಿ ಇವರನ್ನು ಕೊಳ್ಳಲು ಇದ್ದ ಮನಸ್ಸು ಕೊನೆಯಲ್ಲಿ ಕಾಣಿಸಲಿಲ್ಲ. ಕರ್ನಾಟಕದ ಸ್ಟಾರ್ ಆಟಗಾರನನ್ನು ಆರ್ಸಿಬಿ ಕರೆದು ತರುವಂತೆ ಅಭಿಮಾನಿಗಳು ಹ್ಯಾಷ್ ಟ್ಯಾಗ್ ಅಭಿಯಾನವನ್ನೇ ಆರಂಭಿಸಿದ್ದರು. ಆದರೆ ಆರ್ಸಿಬಿ ಇವರ ಅಭಿಮಾನಕ್ಕೆ ಮಣೆ ಹಾಕದೆ, ತನ್ನ ಲೆಕ್ಕಾಚಾರದಲ್ಲಿ ಬಿಡ್ ನಡೆಸಿದೆ.
ಫಾಫ್ ಡುಪ್ಲೇಸಿಸ್ ಬದಲಿಗೆ ಒಬ್ಳ ಒಳ್ಳೆಯ ನಾಯಕನ ಹುಡುಕಾಟದಲ್ಲಿರುವ ಆರ್ಸಿಬಿ ನಿಶ್ಚಿತವಾಗಿ ಕೆಎಲ್ ರಾಹುಲ್ ಅವರಿಗೆ ಬಿಡ್ ಮಾಡುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲವೂ ಠುಸ್ ಪಟಾಕಿಯಂತೆ ಆಗಿದೆ. ಸೌದಿ ಅರೇಬಿಯಾದ ಜಿಡ್ಡಾದಲ್ಲಿ ನಡೆದ ಹರಾಜಿನಲ್ಲಿ ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್ ಇಬ್ಬರೂ ಎಲ್ಲರ ಚಿತ್ತ ಕದ್ದಿದ್ದರು. ಆದರೆ ಇವರಿಬ್ಬರೂ ನಿರೀಕ್ಷತ ಬೆಲೆಗೆ ಹರಾಜು ಆಗಲಿಲ್ಲ. ರಿಷಭ್ ಪಂತ್ ಅವರನ್ನು ಆರ್ಸಿಬಿ ಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆರ್ಸಿಬಿ ಇವರನ್ನು ಕೊಳ್ಳುವ ಆಸೆಯನ್ನು ಮಧ್ಯದಲ್ಲೇ ಕೈ ಬಿಟ್ಟಿತು. ಇದರಿಂದ ನಾಯಕ ಹಾಗೂ ವಿಕೆಟ್ ಕೀಪರ್ ಹುಡುಕಾಟದಲ್ಲಿದ್ದ ಆರ್ಸಿಬಿ ರಣ ರಂಗದಿಂದ ದೂರ ಸರಿಯಿತು.

ಒಬ್ಬ ಪ್ಲೇಯರ್ ಹೋದರೆ ಏನ್ ಅಂತೆ, ಕರ್ನಾಟಕದ ಸೂಪರ್ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಅವರನ್ನು ಕೊಳ್ಳಲು ಆರ್ಸಿಬಿ ಹಣವನ್ನು ಹೂಡಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಆರ್ಸಿಬಿ ಈ ಆಸೆಗೆ ಪೆಟ್ಟು ನೀಡಿತು. ಆರ್ಸಿಬಿ ಆರಂಭದಲ್ಲಿ ಬಿಡ್ ಅಂಗಳ ಪ್ರವೇಶಿಸಿ ಎಲ್ಲರ ಚಿತ್ತ ಕದ್ದಿತು. ಈ ವೇಳೆ ಅಭಿಮಾನಿಗಳು ಸಹ ರಾಹುಲ್ ಆರ್ಸಿಬಿಗೆ ಬರಲಿ ಎಂಬ ಹರಕೆಯನ್ನು ಕಟ್ಟಿದ್ದರು. ಆದರೆ ಇವರ ಹರಕೆಗೆ ಯಾವುದೇ ಬೆಲೆ ಇಲ್ಲ ಎಂದು ಆರ್ಸಿಬಿ ಮ್ಯಾನೇಜ್ಮೆಂಟ್ ತಿಳಿಸಿದೆ. ಈ ಮೂಲಕ ಮತ್ತೊಮ್ಮೆ ಆರ್ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಕೈ ಬಿಟ್ಟ ಬಳಿಕ ಇವರನ್ನು ಆರ್ಸಿಬಿ ಬಿಡ್ ಮಾಡಿ ಇವರಿಗೆ ನಾಯಕತ್ವ ನೀಡುತ್ತದೆ ಎಂದು ಮಾತುಗಳು ಕೇಳಿ ಬಂದಿದ್ದವು. ಇದೇ ನಿಟ್ಟಿನಲ್ಲಿ ಅಭಿಮಾನಿಗಳು ಸಹ ಲೆಕ್ಕಾಚಾರವನ್ನು ಆರಂಭಿಸಿದ್ದರು. ಆದರೆ ಇವರನ್ನು ಕೊಳ್ಳಲು ಆರ್ಸಿಬಿ ಸಾಕಷ್ಟು ಹಣವನ್ನು ಹೂಡಲಿಲ್ಲ. ಇವರ ಪ್ರತಿಭೆಯನ್ನು ಗುರುತಿಸಿದ ಡೆಲ್ಲಿ ಕ್ಯಾಪಿಟಲ್ಸ್ ಇವರನ್ನು ತಂಡಕ್ಕೆ ಬರಮಾಡಿಕೊಂಡಿದೆ. ಭಾನುವಾರ ಐಪಿಎಲ್ ಮೆಗಾ ಹರಾಜಿನ ಮೊದಲ ದಿನ ಆರ್ಸಿಬಿ ಮಾರ್ಕ್ ಪ್ಲೇಯರ್ಗಳಲ್ಲಿ ದೇಶೀಯ ಪ್ಲೇಯರ್ನನ್ನು ಕೊಳ್ಳದೇ ಇರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುದೆ.

ನಿರೀಕ್ಷೆಯಂತೆ ಕೆಎಲ್ ರಾಹುಲ್ 20 ಕೋಟಿ ಮಾರ್ಕ್ ರೀಚ್ ಆಗುತ್ತಾರೆ ಎಂದೇ ಎಲ್ಲರೂ ಅಂದು ಕೊಂಡಿದ್ದರು. ಆದರೆ ಇದಕ್ಕೂ ಕಡಿಮೆ ಹಣವನ್ನು ಬಿಡ್ ಮಾಡುವಲ್ಲಿ ಆರ್ಸಿಬಿ ವಿಫಲವಾಗಿದ್ದು, ಅಭಿಮಾನಿಗಳ ಆಕ್ರೋಶಗೊಳ್ಳುವಂತೆ ಮಾಡಿದೆ.