ಆರ್ಸಿಬಿ ತಂಡ ಮಾರಾಟಕ್ಕಿದೆ. ಈ ಸುದ್ದಿ ಮಂಗಳವಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. 17 ವರ್ಷಗಳಿಂದ ಟ್ರೋಫಿ ಗೆಲ್ಲದ ಆರ್ಸಿಬಿ, 18ನೇ ಆವೃತ್ತಿಯಲ್ಲಿ ಟ್ರೋಫಿಗೆ ಮುತ್ತಿಟ್ಟಿತು. ತಂಡ ಚಾಂಪಿಯನ್ ಪಟ್ಟಕ್ಕೇರುತ್ತಿದ್ದಂತೆ, ಕಂಪನಿ ತಂಡವನ್ನು ಮಾರಾಟ ಮಾಡಲಿದೆ ಎಂಬ ಸುದ್ದಿ ಸಾಮಾಜಿಕ ತಾಣದಲ್ಲಿ ಸಂಚಲನ ಮೂಡಿಸಿತು. ಆರ್ಸಿಬಿ ಮ್ಯಾನೇಜ್ಮೆಂಟ್ ತಂಡ ಈಗ ಈ ಬಗ್ಗೆ ದೊಡ್ಡ ಅಪ್ಡೇಟ್ ನೀಡಿದೆ.
ಅಹಮದಾಬಾದ್ನಲ್ಲಿ ನಡೆದಿದ್ದ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಅಬ್ಬರದ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 6 ರನ್ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿತು. ಆರ್ಸಿಬಿ ಕಪ್ ಗೆಲ್ಲುತ್ತಿದ್ದಂತೆ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಬೆಂಗಳೂರಿನ ಬೀದಿಗಳಲ್ಲೂ ಸಂಭ್ರಮ ಕಳೆಗುಂದಿತ್ತು. ಆರ್ಸಿಬಿ ಸಂಭ್ರಮಾಚರಣೆಯನ್ನು ಅಭಿಮಾನಿಗಳೊಂದಿಗೆ ಮಾಡುವುದಾಗಿ ಸಾಮಾಜಿಕ ತಾಣದಲ್ಲಿ ಒಂದು ಪೋಸ್ಟ್ ಹಾಕಿತ್ತು. ಈ ಪೋಸ್ಟ್ ನೋಡಿದ ಜನ ಚಿನ್ನಸ್ವಾಮಿ ಮೈದಾನದತ್ತ ಜಮಾವಣೆ ಆದರು. ಆಗಲೇ ನೂಕುನುಗ್ಗಲು ಸಂಭವಿಸಿ 11 ಜನರು ಜೀವನವನ್ನು ಕಳೆದುಕೊಂಡರು.

ಆರ್ಸಿಬಿ ಸಂಭ್ರಮಾಚರಣೆಯ ವೇಳೆ ನಡೆದ ದುರ್ಘಟನೆಯಿಂದ ಮ್ಯಾನೇಜ್ಮೆಂಟ್ ಮುಜುಗರಕ್ಕೆ ಈಡಾಯಿತು. ಇದರಿಂದ ಕಂಗೆಟ್ಟ ಆರ್ಸಿಬಿ ತಂಡವನ್ನು ಮಾರಟಕ್ಕೆ ಇಟ್ಟಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅಲ್ಲದೆ ಆರ್ಸಿಬಿ ತಂಡವನ್ನು 2 ಬಿಲಿಯನ್ ಯುಎಸ್ ಡಾಲರ್ಗೆ ಮಾರಟಕ್ಕಿದೆ ಎಂದು ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅದಾಗಲೇ ಈ ಫ್ರಾಂಚೈಸಿಯನ್ನು ಕೊಂಡುಕೊಳ್ಳಲು ಖ್ಯಾತ ಉದ್ಯಮಿಗಳು ತುದಿಗಾಲಿನಲ್ಲಿ ನಿಂತಿದ್ದರು. ಆದರೆ ಆರ್ಸಿಬಿ ಮ್ಯಾನೇಜ್ಮೆಂಟ್ ನೀಡಿರುವ ಹೇಳಿಕೆ ಈಗ ಎಲ್ಲರ ಬಾಯಿಯನ್ನು ಮುಚ್ಚಿಸಿದೆ.
ಆರ್ಸಿಬಿ ತಂಡದ ಮಾಲೀಕರಾದ ಇಂಗ್ಲೆಂಡ ಮೂಲದ ಡಿಯಾಜಿಯೊ ಪಿಎಲ್ಸಿಯ ಭಾರತೀಯ ಶಾಖೆ ಈ ಬಗ್ಗೆ ದೊಡ್ಡ ಸ್ಪಷ್ಟನೆ ನೀಡಿದೆ. ಕಂಪನಿ ಮಂಗಳವಾರ ಈ ಬಗ್ಗೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ಗೆ ಪತ್ರ ಬರೆದು ತಿಳಿಸಿದೆ. ಬಿಎಸ್ಇಗೆ ಆರ್ಸಿಬಿ ಮ್ಯಾನೇಜ್ಮೆಂಟ್ ಬರೆದ ಪತ್ರದಲ್ಲಿ ಆರ್ಸಿಬಿ ತಂಡವನ್ನು ಮಾರಾಟ ಮಾಡುವ ಸುದ್ದಿಗಳೆಲ್ಲಾ ಮಾಧ್ಯಮಗಳ ಊಹಾಪೋಹವಾಗಿದೆ ಎಂದು ತಿಳಿಸಿದೆ. ತಂಡವನ್ನು ಮಾರಾಟ ಮಾಡುವ ಯಾವುದೇ ಯೋಚನೆ ತಂಡಕ್ಕಿಲ್ಲ ಎಂದು ಕಂಪನಿ ಸ್ಪಷ್ಟ ಪಡಿಸಿದೆ. ಭಾರತೀಯ ಷೇರು ಮಾರುಕಟ್ಟೆಯ ನಿಯಂತ್ರಕಕ್ಕೆ ಕಂಪನಿಯ ಕಾರ್ಯದರ್ಶಿ ಮಿತ್ತಲ್ ಸಾಂಘ್ವಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಆರ್ಸಿಬಿ ತಂಡವನ್ನು ಮಾರಾಟ ಮಾಡುವ ವದಂತಿಗಳನ್ನು ಕಂಪನಿ ತಳ್ಳಿ ಹಾಕಿದೆ.

ಆರ್ಸಿಬಿ ತಂಡ ಮಾರಾಟಕ್ಕಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಹಲವರು ವಿಶ್ವದ ಖ್ಯಾತ ಕ್ರಿಕೆಟ್ ಫ್ರಾಂಚೈಸಿ ಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಆರ್ಸಿಬಿ ಮ್ಯಾನೇಜ್ಮೆಂಟ್ ಈ ಎಲ್ಲ ಕನಸಿಗೆ ತಣ್ಣೀರು ಎರಚಿದೆ.