ಭಾರತದಲ್ಲಿ ನಡೆದ ದೇಶೀಯ ಟೂರ್ನಿಯಾದ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮುಂಬೈ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಬೆಂಗಳೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವನ್ನು ಮುಂಬೈ ತಂಡ ಜಯ ಸಾಧಿಸಿತು. ಈ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಮುಂಬೈ ಅಲಂಕರಿಸಿರಬಹುದು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಆರ್ಸಿಬಿ ತಂಡದಲ್ಲಿ ಸ್ಥಾನ ಪಡೆದ ಸ್ಟಾರ್ ಆಟಗಾರರು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಫ್ರಾಂಚೈಸಿ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ. ಸಿಕ್ಕ ಅವಕಾಶವನ್ನು ಬಳಿಸಿಕೊಂಡು ತಮ್ಮಲ್ಲಿರುವ ಕ್ಷಮತೆಯನ್ನು ಸಾಬೀತು ಪಡಿಸಿರುವ ಸ್ಟಾರ್ಸ್ ಆರ್ಸಿಬಿಗೆ ಚೊಚ್ಚಲ ಐಪಿಎಲ್ ಮುಕುಟ ತೊಡಿಸುವಲ್ಲಿ ಶ್ರಮಿಸಲಿದ್ದಾರೆ. ಆ ಆಟಗಾರರ ಪಟ್ಟಿ ಇಲ್ಲಿದೆ.

ಮಧ್ಯ ಪ್ರದೇಶ ತಂಡವನ್ನು ದೇಶೀಯ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮುನ್ನಡೆಸಿರುವ ರಜತ್ ಪಾಟಿದಾರ ಯಶಸ್ವಿ ನಾಯಕ. ಇನ್ನು ರಜತ್ ತಮ್ಮ ಬ್ಯಾಟಿಂಗ್ನಿಂದಲೂ ತಂಡಕ್ಕೆ ಆಧಾರವಾಗಿದ್ದಾರೆ. ಇವರು ಪ್ರಸಕ್ತ ಟೂರ್ನಿಯಲ್ಲಿ 428 ರನ್ ಸಿಡಿಸಿದ್ದು, 61.14 ರಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ಇವರು ಫೈನಲ್ ಪಂದ್ಯದಲ್ಲಿ ಅಜೇಯ 81 ರನ್ ಸಿಡಿಸುವ ಮೂಲಕ ಒತ್ತಡದಲ್ಲೂ ಬ್ಯಾಟಿಂಗ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇವರನ್ನು ಆರ್ಸಿಬಿ 11 ಕೋಟಿ ನೀಡಿ ಉಳಿಸಿಕೊಂಡಿದೆ. ಹೀಗಾಗಿ ಇವರ ಮೇಲೆ ಭರವಸೆಯ ಹೆಚ್ಚಿದೆ.
ಭುವನೇಶ್ವರ್ ಕುಮಾರ್ ಅವರು ದೇಶೀಯ ಟಿ20 ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ. ಇನ್ನು ಆಡಿದ 9 ಪಂದ್ಯಗಳಲ್ಲಿ 11 ವಿಕೆಟ್ ಕಬಳಿಸಿದ್ದಾರೆ. ಇವರಿಗೆ 10.75 ಕೋಟಿ ನೀಡಿ ಆರ್ಸಿಬಿ ಖರೀದಿ ಮಾಡಿದೆ. ಇವರು ತಂಡದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ.
ರಾಸಿಖ್ ಸಲಾಂ ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಇವರಿಗೆ ಆರ್ಸಿಬಿ 6 ಕೋಟಿ ನೀಡಿ ಹರಾಜಿನಲ್ಲಿ ಖರೀದಿ ಮಾಡಿದೆ. ಇವರು ಆಡಿದ 7 ಪಂದ್ಯಗಳಲ್ಲಿ 11 ವಿಕೆಟ್ ಕಬಳಿಸಿದ್ದಾರೆ. ತಮ್ಮಲ್ಲಿರುವ ಬೌಲಿಂಗ್ ಕಲೆಯ ಅನಾವರಣ ಮಾಡಿರುವ ಇವರು ಟೂರ್ನಿಯಲ್ಲಿ ಉದಯೋನ್ಮುಖ ಸ್ಪೀಡ್ ಸ್ಟಾರ್ ರೀತಿ ಹೊರ ಹೊಮ್ಮಿದ್ದಾರೆ.
ಕರ್ನಾಟಕದ ಮನೋಜ್ ಭಾಂಡಗೆ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಏಳು ವಿಕೆಟ್ ಪಡೆದಿದ್ದಾರೆ. ಇವರಿಗೆ ಆರ್ಸಿಬಿ 30 ಲಕ್ಷ ನೀಡಿ ತಂಡದಲ್ಲಿ ಉಳಿಸಿಕೊಂಡಿದೆ. ಇನ್ನು ಬರೋಡಾ ತಂಡವನ್ನು ಮುನ್ನಡೆಸಿದ್ದ ಕೃಣಾಲ್ ಪಾಂಡ್ಯ ಸಹ ಅಬ್ಬರಿಸಿದ್ದಾರೆ. ಇವರು ಆಡಿದ 9 ಪಂದ್ಯಗಳಲ್ಲಿ 8 ವಿಕೆಟ್ ಪಡೆದು ಮಿಂಚಿದ್ದಾರೆ.
ಸ್ಟಾರ್ ಆಟಗಾರರು ಭರ್ಜರಿ ಫಾರ್ಮ್ಗೆ ಮರಳಿದ್ದು ನಿಜಕ್ಕೂ ಆರ್ಸಿಬಿ ಅಭಿಮಾನಿಗಳ ಖುಷಿ ದುಪಟ್ಟು ಮಾಡಿದೆ.