ಐಪಿಎಲ್ ಮೆಗಾ ಹರಾಜಿಗೆ ಭರದ ಸಿದ್ಧತೆ ನಡೆದಿದೆ. ಈ ವೇಳೆ 17 ಆವೃತ್ತಿಯಲ್ಲಿ ಮಾಯಾ ಜಿಂಕೆಯಂತೆ ಕಾಡಿದ ಟ್ರೋಫಿಯನ್ನು ಗೆಲ್ಲಲು ಬೇಕಾದ ಎಲ್ಲ ಪ್ಲ್ಯಾನ್ ಆರ್ಸಿಬಿ ಮಾಡಿಕೊಳ್ಳುತ್ತಿದೆ. 18ನೇ ಆವೃತ್ತಿಯ ಐಪಿಎಲ್ ಸ್ಮರಣೀಯವಾಗಿಸುವ ಗುರಿಯನ್ನು ಆರ್ಸಿಬಿ ಹೊಂದಿದೆ. ಬೆಂಗಳೂರು ತಂಡ ಕೇವಲ ಮೂರು ಆಟಗಾರರನ್ನು ರಿಟೇನ್ ಮಾಡಿದ್ದು, ಇನ್ನು ತನ್ನ ಬಲಿಷ್ಠ ತಂಡವನ್ನು ಕಟ್ಟಲು ಹರಾಜಿನಲ್ಲಿ ಆಟಗಾರರ ಹುಡುಕಾಟ ನಡೆಸಲಿದೆ. ಬೆಂಗಳೂರು ಈ ಹರಾಜಿನಲ್ಲಿ ಹಲವು ಬಾಕ್ಸ್ಗಳನ್ನು ಟಿಕ್ ಮಾಡುವ ಅನಿವಾರ್ಯತೆ ಇದೆ.
ಆರ್ಸಿಬಿ ಮುಂದಿರುವ ಸವಾಲುಗಳಲ್ಲಿ ಅತಿ ದೊಡ್ಡ ಸವಾಲು ನಾಯಕನ ಆಯ್ಕೆ. ಆರ್ಸಿಬಿ ಹರಾಜಿನಲ್ಲಿ ಒಬ್ಬ ಸ್ಟಾರ್ ನಾಯಕನ ಹುಡುಕಾಟ ನಡೆಸಲಿದೆ. ಈ ವೇಳೆ ಆರ್ಸಿಬಿ ಮುಂದೆ ಹಲವು ಆಯ್ಕೆಗಳು ಇವೆ. ಈ ವೇಳೆ ಆರ್ಸಿಬಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಆರ್ಸಿಬಿ ಈ ಬಾರಿ ಹರಾಜಿನಲ್ಲಿ ಒಬ್ಬ ಉತ್ತಮ ನಾಯಕನ ಹುಡುಕಾಟದಲ್ಲಿದ್ದು, ಈ ವೇಳೆ ಐದು ಆಟಗಾರರನ್ನು ಟಾರ್ಗೆಟ್ ಮಾಡಲಿದೆ.

ಈ ಬಾರಿ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಲಿದೆ. ಹೀಗಾಗಿ ನಾಯಕನ ಹುಡುಕಾಟದಲ್ಲಿ ಒಂದೇ ಕಲ್ಲಿಗೆ ಮೂರು ಹಕ್ಕಿಗಳನ್ನು ಹೊಡೆಯುವ ಇರಾದೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಆರ್ಸಿಬಿ ಮೂರು ಆಟಗಾರರನ್ನು ಟಾರ್ಗೆಟ್ ಮಾಡಲಿದೆ. ಇದರಲ್ಲಿ ಇಬ್ಬರು ದೇಶೀಯ ಹಾಗೂ ಒಬ್ಬ ವಿದೇಶಿ ಆಟಗಾರ ಸೇರಿದ್ದಾರೆ.
ಆರ್ಸಿಬಿಯ ಸ್ಟಾರ್ ಆಟಗಾರರ ದಿನೇಶ್ ಕಾರ್ತಿಕ್ ಅವರ ಸ್ಥಾನವನ್ನು ತುಂಬುವ ಆಟಗಾರನ ಹುಡುಕಾಟದಲ್ಲಿದೆ. ಈ ವೇಳೆ ಆರ್ಸಿಬಿ ಮೂವರು ಆಟಗಾರರನ್ನು ಟಾರ್ಗೆಟ್ ಮಾಡಲಿದೆ. ಈ ಆಟಗಾರರು ವಿಕೆಟ್ ಕೀಪರ್, ಬ್ಯಾಟರ್, ಕ್ಯಾಪ್ಟನ್ ಗುಣಗಳನ್ನು ಹೊಂದಿದ್ದಾರೆ. ಇದರಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಹೆಸರು ಕರ್ನಾಟಕದ ಕೆಎಲ್ ರಾಹುಲ್. ಇವರನ್ನು ಲಕ್ನೋ ಸೂಪರ್ ಜೈಂಟ್ಸ್ ರಿಲೀಸ್ ಮಾಡಿತ್ತು. ಇವರನ್ನು ಕೊಂಡು ನಾಯಕನನ್ನಾಗಿ ಮಾಡುವ ಇರಾದೆ ಬೆಂಗಳೂರು ತಂಡದ್ದಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಕೈ ಬಿಟ್ಟ ಆಟಗಾರರು ಸಹ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಷಭ್ ಪಂತ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ ಸಹ ವಿಕೆಟ್ ಕೀಪರ್, ಆಕ್ರಮಣಕಾರಿ ಬ್ಯಾಟರ್ ಹಾಗೂ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊರಬಲ್ಲರು.
ಸನ್ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಇಬ್ಬರು ನಾಯಕರಿಗೆ ಆರ್ಸಿಬಿ ಟಾರ್ಗೆಟ್ ಮಾಡಲಿದೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡದ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಆಗ ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸಿದ್ದರು. ಕೆಕೆಆರ್ ಇವರನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದು, ಆರ್ಸಿಬಿ ಇವರಿಗೆ ಬಾಜಿ ಕಟ್ಟಬಹುದು.
ಈ ಲೀಸ್ಟ್ನಲ್ಲಿ ಇರುವ ಇನ್ನೊಂದು ಹೆಸರು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ ಹೇಳಿರುವ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್. ಡೆಲ್ಲಿ ಕ್ಯಾಪಿಟಲ್ಸ್ ಇವರನ್ನು ಕೈ ಬಿಟ್ಟಿದ್ದು, ಇವರು ಸಹ ಸನ್ರೈಸರ್ಸ್ ತಂಡಕ್ಕೆ ಮುಕುಟ ತೊಡಿಸಿದ ಆಟಗಾರ. ಇವರಿಗೆ ಹಣವನ್ನು ಹೂಡಲು ಆರ್ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ.